182 ಕೋಮು ದ್ವೇಷದ ಪ್ರಕರಣಗಳನ್ನು ಹಿಂಪಡೆದಿದ್ದ ಬಿಜೆಪಿ ಸರಕಾರ: ಸಚಿವ ರಾಮಲಿಂಗಾರೆಡ್ಡಿ

Update: 2024-10-15 12:07 GMT

ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ 385 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು. ಇದರಲ್ಲಿ 182 ಪ್ರಕರಣಗಳು ಕೋಮು ದ್ವೇಷ ಸೇರಿದಂತೆ ಅನೈತಿಕ ಪೊಲೀಸ್ ಗಿರಿ, ಪಬ್ ದಾಳಿಯಂತಹ ಪ್ರಕರಣಗಳು ಸೇರಿದ್ದವು ಎಂದು ಸಾರಿಗೆ ಹಾಗೂ ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಹಿಂಪಡೆದ ಪ್ರಕರಣಗಳಿಂದಾಗಿ ಸುಮಾರು 2 ಸಾವಿರಕ್ಕೂ ಹೆಚ್ಚು ಆರೋಪಿಗಳ ಮೇಲಿನ ಪ್ರಕರಣಗಳು ಇಲ್ಲವಾಗಿದೆ ಎಂದು ಹೇಳಿದರು.

2022ರಲ್ಲಿ 62 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು. ಸಿ.ಟಿ.ರವಿ, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಹಾಲಪ್ಪ ಆಚಾರ್, ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಜೆ.ಸಿ.ಮಾಧುಸ್ವಾಮಿ ಇದರ ಫಲಾನುಭವಿಗಳು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ 43 ಪ್ರಕರಣಗಳನ್ನು ನಾವು ಹಿಂಪಡೆದಿದ್ದೇವೆ. ಶಾಶ್ವತ ನೀರಾವರಿಗಾಗಿ ಹೋರಾಟ ಮಾಡಿದವರ ಮೇಲಿನ ಪ್ರಕರಣಗಳನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಮನವಿ ಮೇರೆಗೆ ಹಿಂಪಡೆಯಲಾಗಿದೆ ಎಂದು ಅವರು ಹೇಳಿದರು.

ಸಂವಿಧಾನಕ್ಕೆ ಅಪಮಾನ ಮಾಡಿದವರ ವಿರುದ್ಧ ಹೋರಾಟ ಮಾಡಿದ ಎನ್.ಭಾಸ್ಕರ್, ಕರವೇ ನಾರಾಯಣ ಗೌಡ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇಡದೇ ಇರುವ ಕಾರಣಕ್ಕೆ ನಡೆದ ಪ್ರತಿಭಟನೆ, ಪೇಸಿಎಂ ಅಭಿಯಾನದಲ್ಲಿ ಪೋಸ್ಟರ್ ಅಂಟಿಸಿದವರ ವಿರುದ್ದ ಹೀಗೆ ಒಂದಷ್ಟು ಜನಪರ ಹೋರಾಟಗಳನ್ನು ನಡೆಸುವಾಗ ದಾಖಲಾದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಇದರಲ್ಲಿ ಹಳೇ ಹುಬ್ಬಳ್ಳಿ ಪ್ರಕರಣವೂ ಒಂದು. ಇದನ್ನೂ ನಾವು ವಾಪಸ್ ಪಡೆದಿದ್ದೇವೆ. ಬಿಜೆಪಿಯವರು ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲಿ ಯಾವ, ಯಾವ ಪ್ರಕರಣಗಳನ್ನು ಹಿಂಪಡೆದಿದ್ದರು ಎನ್ನುವ ದೊಡ್ಡ ಪಟ್ಟಿಯೇ ನಮ್ಮ ಬಳಿ ಇದೆ ಎಂದು ಅವರು ಹೇಳಿದರು.

ಪಿಎಫ್‍ಐ ಮೇಲಿನ ಕೇಸ್ ವಾಪಸ್ ಪಡೆದಿದ್ದು ಬಿಜೆಪಿ: ಶ್ರೀರಾಮಸೇನೆ, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸದಸ್ಯರು ಇದರ ಲಾಭ ಪಡೆದಿದ್ದಾರೆ. 2018-20ರ ಸಾಲಿನಲ್ಲಿ 127 ಕೇಸ್‍ಗಳನ್ನು ಬಿಜೆಪಿ ಹಿಂದಕ್ಕೆ ಪಡೆದಿದೆ. ಪಿಎಫ್‍ಐ, ಎಸ್‍ಡಿಪಿಐ ಅವರ ಮೇಲಿದ್ದ ಕೇಸ್‍ಗಳನ್ನೂ ಬಿಜೆಪಿ ಸರಕಾರ ಹಿಂದಕ್ಕೆ ಪಡೆದಿತ್ತು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ನಾನು ಗೃಹ ಸಚಿವ ಆಗಿದ್ದಾಗ ನಡೆದ ಪರೇಸ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಏನೇನೋ ಮಾಡಿದರು. ನಂತರ ಎನ್‍ಐಎ ತನಿಖಾ ತಂಡ ಆತನ ಸಾವನ್ನು ಆಕಸ್ಮಿಕ ಎಂದು ಹೇಳಿತು. ಬಿಜೆಪಿಯವರು ಹೆಣ ಬಿದ್ದರೆ ಸಾಕು ರಣಹದ್ದುಗಳಂತೆ ಕಾಯುತ್ತಿರುತ್ತಾರೆ. ಬಿಜೆಪಿಯವರ ಹೆಣದ ಮೇಲಿನ ರಾಜಕೀಯದ ಬಗ್ಗೆ ಪುಸ್ತಕವಿದ್ದು ಅದನ್ನು ಮತ್ತೊಮ್ಮೆ ಮುದ್ರಿಸಲಾಗುವುದು ಎಂದು ಅವರು ಹೇಳಿದರು.

ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಕಲಂ 321 ರ ಅಡಿ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದರೂ ವಾಪಸ್ ಪಡೆಯುವ ಅಧಿಕಾರ ದೇಶದ ಎಲ್ಲ ರಾಜ್ಯ ಸರಕಾರಗಳಿಗಿದೆ. ಬಿಜೆಪಿಯಲ್ಲಿ ಸುಳ್ಳು ಹೇಳುವವರನ್ನೇ ವಕ್ತಾರನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿಯವರ ಸುಳ್ಳುಗಳನ್ನೇ ಜನರು ನಂಬಬಾರದು ಎಂದು ಸತ್ಯವನ್ನು ತಿಳಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ಕಾಂಗ್ರೆಸ್ ಸರಕಾರ ಹಿಂಪಡೆದ ಪ್ರಕರಣಗಳಲ್ಲಿ ಆರನೆ ಪ್ರಕರಣವಾದ ಹಳೇ ಹುಬ್ಬಳಿ ಗಲಭೆ ಪ್ರಕರಣ ಹಿಂಪಡೆಯಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಡಿ.ಬಿ.ಛಲವಾದಿ ಸರಕಾರಕ್ಕೆ ಮನವಿ ಕೊಟ್ಟ ಆಧಾರದ ಮೇಲೆ ಅದನ್ನು ಗೃಹ ಇಲಾಖೆಗೆ ಕಳುಹಿಸಲಾಗಿತ್ತು ಎಂದು ಹೇಳಿದರು.

ಗೃಹ ಇಲಾಖೆಯು ಸಚಿವ ಸಂಪುಟ ಉಪ ಸಮಿತಿಗೆ ಅದನ್ನು ಕಳುಹಿಸಿತ್ತು. ಈ ಸಮಿತಿಯ ವರದಿ ಅಧಾರದ ಮೇಲೆ ಕೇಸ್ ನಂಬರ್ 63/2022 ಹಳೇ ಹುಬ್ಬಳ್ಳಿ ಪ್ರಕರಣ ಹಿಂಪಡೆಯಲಾಗಿದೆ. ಸಿಆರ್‍ಪಿಸಿ ಕಲಂ 321 ರಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಗಮನಿಸಿ ಕೇಸ್ ವಾಪಸ್ ಪಡೆಯಲು ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು.

ಕೋಮುದ್ವೇಷ ಹರಡುವಿಕೆ, ದ್ವೇಷ ಭಾಷಣ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವಂತಹ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದು ಬಿಜೆಪಿ. 2022ರ ಸೆಪ್ಟೆಂಬರ್ ನಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ, ಕೇಸ್ ವಾಪಸ್ ಪಡೆಯುವುದು ಎಲ್ಲ ಸರಕಾರಗಳು ಮಾಡುವ ಕೆಲಸ ಎಂದಿದ್ದರು. ರಾಜಕೀಯ ಕಾರಣಕ್ಕೆ ಹುಬ್ಬಳ್ಳಿ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಅವರು ಟೀಕಿಸಿದರು.

ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ, ಗುಂಪುಗಾರಿಕೆ ಅತಿರೇಕಕ್ಕೆ ಹೋಗಿದೆ. ಅಲ್ಲಿನ ಒಂದು ಬಣ ಡಿಸೆಂಬರ್ ತನಕ ಮಾತ್ರ ವಿಜಯೇಂದ್ರ ಪಕ್ಷದ ಅಧ್ಯಕ್ಷ ಎಂದು ಹೇಳುತ್ತಿದೆ. ಅವಳಿ ಜವಳಿ ವಿಪಕ್ಷ ನಾಯಕರಾದ ಆರ್.ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿಗೆ ಪಕ್ಷ ಮುನ್ನಡೆಸಲು ಆಗುತ್ತಿಲ್ಲ. ಆದುದರಿಂದ, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಈ ಸುಳ್ಳಿನ ಸರಮಾಲೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿಕೊಂಡು ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ದೂರಿದರು.

ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಎಸ್.ಮನೋಹರ್ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News