ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಮುಳುಗಿದ ಹಡಗು: ಸಚಿವ ಪರಮೇಶ್ವರ್

Update: 2023-10-18 13:35 GMT

ಬೆಂಗಳೂರು, ಅ.18: ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಈಗಾಗಲೇ ಮುಳುಗಿರುವ ಹಡಗು.ಹೀಗಾಗಿ, ಅವರನ್ನು ನಂಬಿ ಯಾವ ಪಕ್ಷದ ಶಾಸಕನೂ ಜತೆಗೆ ಹೋಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ನಂತರ ಬಿಜೆಪಿಯವರ ಕತೆ ಏನಾಗಿದೆ ಗೊತ್ತಿದೆಯಲ್ಲ. ಅಲ್ಲದೆ, ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಈಗಾಗಲೇ ಮುಳುಗಿರುವ ಹಡಗು ಎಂದು ಟೀಕಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಎಲ್ಲ ಬಗ್ಗೆ ಮಾಹಿತಿ ಇರಬೇಕು. ಒಂದು ವೇಳೆ ಆಪರೇಷನ್ ಕಮಲ ನಡೆಯುತ್ತಿದ್ದರೆ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಜೊತೆಗೆ ಅಗತ್ಯ ಕ್ರಮ ಕೈಗೊಳ್ಳತ್ತೇವೆ ಎಂದ ಅವರು, ಹಲವಾರು ಸಂದರ್ಭದಲ್ಲಿ ಶಾಸಕ ಸ್ನೇಹಿತರು ಸಿಂಗಪೂರ, ಮಲೇಷ್ಯಾ ಸೇರಿದಂತೆ ವಿವಿಧ ಕಡೆ ಪ್ರವಾಸಕ್ಕೆ ಹೋಗಿದ್ದನ್ನು ನೋಡಿದ್ದೇವೆ. ಅದೇ ರೀತಿಯ ಪ್ರವಾಸವನ್ನು ಸತೀಶ್ ಜಾರಕಿಹೊಳಿ ಹಾಗೂ ಸ್ನೇಹಿತರು ಪ್ರವಾಸಕ್ಕೆ ಹೋಗಬಹುದು. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.

ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಣ ಸಂಗ್ರಹಿಸಲಾಗಿದೆ ಎಂಬುದು ಆರೋಪ ಸತ್ಯಕ್ಕೆ ದೂರವಾದುದ್ದು, ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಈ ರೀತಿಯ ಬೆಳವಣಿಗೆಗಳಾಗಿರಲಿಲ್ಲವೇ ಎಂದ ಅವರು, ಐಟಿ ದಾಳಿ ವೇಳೆ ಸಿಕ್ಕಿರುವ ಹಣ ಹಾಗೂ ಇತರ ಮಾಹಿತಿಗಳ ಕುರಿತು ಸಿಬಿಐ ತನಿಖೆ ಅಗತ್ಯವಿದ್ದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ನಿರ್ಧರಿಸುತ್ತಾರೆ. ಯಾರನ್ನೋ ಹೇಳಿ, ಕೇಳಿ ಅವರು ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News