ಭೋಜನ ಕೂಟದಲ್ಲಿ ಭಾಗಿಯಾದ ಬಿಜೆಪಿ ಶಾಸಕರು ಮುಂದೆ ಪಕ್ಷಕ್ಕೆ ಬರಬಹುದು: ಬಿ.ಕೆ ಹರಿಪ್ರಸಾದ್

Update: 2023-12-20 14:35 GMT

ಬೆಂಗಳೂರು: ‘ಬಿಜೆಪಿ ಶಾಸಕರು ಬಂದು ಭಕ್ಷ್ಯ ಭೋಜನ ಮಾಡಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಬಂದರೂ ಬರಬಹುದು’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ಹಲವು ಶಾಸಕರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್‍ನ ಶಾಸಕಾಂಗ ಸಭೆಗೆ ಬಿಜೆಪಿ ಶಾಸಕರು ಬಂದು ಭಕ್ಷ್ಯ ಭೋಜನ ಮಾಡಿ ಹೋಗಿದ್ದಾರೆಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾಳ್, ಕಾಂಗ್ರೆಸ್ ಔತಣ ಕೂಟದಲ್ಲಿ ಪಾಲ್ಗೊಂಡಿದ್ದನ್ನು ಉಲ್ಲೇಖಿಸಿದರು.

ಸಂಸತ್‍ನಲ್ಲಿ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವರ ಮೌನ ಪ್ರಶ್ನಾರ್ಹವಾಗಿದೆ. ಎಲ್ಲದಕ್ಕೂ ಪ್ರತಿಕ್ರಿಯಿಸುವ ಪ್ರಧಾನಿಗಳು, ಕೇಂದ್ರ ಗೃಹಸಚಿವರು ಭದ್ರತಾ ಲೋಪ ವಿಷಯದಲ್ಲಿ ಜಾರಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.

ಭದ್ರತಾ ಲೋಪವನ್ನು ಪ್ರಶ್ನಿಸಿದ ಸಂಸದರ ಪೈಕಿ 141 ಮಂದಿಯನ್ನು ಅಮಾನತುಪಡಿಸಲಾಗಿದೆ. ದೇಶದಲ್ಲಷ್ಟೇ ಅಲ್ಲ, ವಿಶ್ವದ ಯಾವುದೇ ಜನಪ್ರತಿನಿಧಿ ಸಂಸ್ಥೆಗಳಲ್ಲಿ ಚುನಾಯಿತ ಸದಸ್ಯರನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಅನರ್ಹಗೊಳಿಸಿದ ಉದಾಹರಣೆಗಳಿಲ್ಲ. ಪ್ರಧಾನಿಯವರು ಸಂಸತ್ ನಡೆಯುವಾಗ ಭದ್ರತಾ ಲೋಪದ ಬಗ್ಗೆ ಸಂಸತ್‍ನಲ್ಲೇ ಉತ್ತರ ನೀಡಬೇಕು. ಅದು ಬಿಟ್ಟು ದಕ್ಷಿಣಾ ಕೊರಿಯಾದ ಚಾನೆಲ್‍ಗೆ ಪ್ರಧಾನಿಯವರು ಹೇಳಿಕೆ ನೀಡುತ್ತಾರೆ. ಅದು ದಾಖಲೆಯಾಗಿ ಉಳಿಯುವುದಿಲ್ಲ. ಸಂಸತ್‍ನಲ್ಲಿ ಮಾತನಾಡಿದರೆ ಅದು ಅಧಿಕೃತವಾದ ದಾಖಲೆ ಎಂದು ಹೇಳಿದರು.

ದೇಶದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಸಂಸತ್‍ನ ಭದ್ರತಾ ಲೋಪವನ್ನು ಸೃಷ್ಟಿಸಲಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಈವರೆಗೂ ಪ್ರಧಾನಿ ಮತ್ತು ಗೃಹಸಚಿವರ ಮೌನವನ್ನು ನೋಡಿದರೆ ಇಂತಹ ಅನುಮಾನಗಳು ಸಹಜವಾಗಿ ಮೂಡುತ್ತವೆ ಎಂದರು.

ಇನ್ನೂ, ರಾಜ್ಯದಿಂದ ಬಿಜೆಪಿಗೆ 25 ಸಂಸದರನ್ನು ಗೆಲ್ಲಿಸಿಕೊಡಲಾಗಿತ್ತು. ಆದರೂ ನೆರೆ, ಬರದಂತಹ ಸಂದರ್ಭದಲ್ಲಿ ಪ್ರಧಾನಿಯವರಾಗಲೀ, ಕೇಂದ್ರ ಗೃಹಸಚಿವರಾಗಲೀ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿ ಪರಿಶೀಲನೆ ನಡೆಸದೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News