ಎಲ್ಲಾ ಗ್ರಾಮ ಪಂಚಾಯಿತಿಯಲ್ಲೂ ಬಜೆಟ್ ಮಂಡನೆ, ಅಂಗೀಕಾರ ಕಡ್ಡಾಯ: ಸಚಿವ ಪ್ರಿಯಾಂಕ್ ಖರ್ಗೆ

Update: 2024-02-19 10:40 GMT

ಕಲಬುರಗಿ: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಮುಂದಿನ ಆರ್ಥಿಕ ವರ್ಷದಲ್ಲಿ ವಿವಿಧ ಬಾಬ್ತುಗಳಡಿ ಲಭ್ಯವಾಗುವ ಅನುದಾನ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳನ್ನೊಳಗೊಂಡಂತೆ ಗ್ರಾಮ ಪಂಚಾಯತಿ ಆಯವ್ಯಯ (ಪಂಚಾಯತ್ ಬಜೆಟ್) ಕಡ್ಡಾಯವಾಗಿ ತಯಾರಿಸಿ, ಮಾರ್ಚ್ 10ನೇ ತಾರೀಕಿನೊಳಗೆ ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ನೀಡುವ ಶಾಸನಬದ್ಧ ಅನುದಾನ, ವಿವಿಧ ಯೋಜನೆಗಳಡಿ ದೊರೆಯುವ ಅನುದಾನದ ಜೊತೆಗೆ ಸ್ವಂತ ಸಂಪನ್ಮೂಲ ಸಂಗ್ರಹಿಸಲು ಅವಕಾಶವಿರುತ್ತದೆ. ಈ ಎಲ್ಲ ಮೂಲಗಳನ್ನು ಕ್ರೋಢೀಕರಿಸಿ ಗ್ರಾಮ ಪಂಚಾಯತಿಗಳು ಆಯವ್ಯಯವನ್ನು ಸಿದ್ಧಪಡಿಸಿ, ಅನುಮೋದನೆ ಪಡೆದುಕೊಳ್ಳಲು ಸಚಿವರು ಪತ್ರದಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ವೈಯಕ್ತಿಕವಾಗಿ ಬರೆದಿರುವ ಪತ್ರಗಳಲ್ಲಿ ಕೋರಿದ್ದಾರೆ.

ಗ್ರಾಮ ಪಂಚಾಯಿತಿ ಸಭೆಯಲ್ಲಿ ಅನುಮೋದನೆಯಾದ ಆಯವ್ಯಯವನ್ನು ತಾಲ್ಲೂಕು ಪಂಚಾಯಿತಿಗೆ ಕಳುಹಿಸಿಕೊಡಬೇಕು. ಆಯವ್ಯಯವು (ಪಂಚಾಯತ್ ಬಜೆಟ್) ಲಭ್ಯ ಅನುದಾನ, ಅದು ಕೈಗೊಳ್ಳುವ ಜನಪರ ಯೋಜನೆಗಳು ಹಾಗೂ ತನ್ನ ಅಭಿವೃದ್ಧಿ ಪರ ಆಶಯಗಳನ್ನು ಪ್ರತಿಬಿಂಬಿಸುವಂತಿರಬೇಕಾಗುತ್ತದೆಂದು ತಿಳಿಸಿದ್ದಾರೆ.

ರಾಜ್ಯದ ಬಹಳಷ್ಟು ಗ್ರಾಮ ಪಂಚಾಯತಿಗಳು ಸಕಾಲದಲ್ಲಿ ಆಯವ್ಯಯ ತಯಾರಿಸಿ ಅನುಮೋದನೆ ಪಡೆಯದೇ ವೆಚ್ಚ ಭರಿಸುತ್ತಿರುವುದು ಲೆಕ್ಕಪರಿಶೋಧನಾ ವರದಿಗಳಿಂದ ತಿಳಿದು ಬಂದಿದ್ದು, ಗ್ರಾಮ ವಿಕೇಂದ್ರಿಕರಣದ ಆಶಯಗಳಂತೆ ಪಂಚಾಯತ್ ಗಳು ಬಜೆಟ್ ಮಂಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News