ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಸಮನ್ವಯತೆಯ ಕೊರತೆ : ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅಸಮಾಧಾನ
ಸುರೇಶ್ ಬಾಬು
ಬೆಂಗಳೂರು : ಬಿಜೆಪಿ ನಾಯಕರು ಸರಕಾರದ ವಿರುದ್ಧ ನಡೆಸುವ ಹೋರಾಟಗಳಿಗೆಲ್ಲ ಜೆಡಿಎಸ್ ಪಕ್ಷವನ್ನು ಕಡೆಗಣಿಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಸಮನ್ವಯತೆಯ ಕೊರತೆ ಎದುರಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಖಂಡಿಸಿ ಬಿಜೆಪಿ ನಡೆಸಿದ ಮೈಸೂರು ಪಾದಯಾತ್ರೆಯಲ್ಲಿ ಜೆಡಿಎಸ್ ಪಕ್ಷವನ್ನು ಪರಿಗಣಿಸಿರಲಿಲ್ಲ, ಈಗ ಬೆಲೆ ಏರಿಕೆ ಪ್ರತಿಭಟನೆಗೂ ಹಾಗೆಯೇ ಮಾಡಲಾಗಿದೆ. ತಾವು ರಾಷ್ಟ್ರೀಯ ಪಕ್ಷವೆಂಬ ದಾಷ್ಟ್ರ್ಯತೆ ಬಿಜೆಪಿಯವರಿಗಿರಬಹುದು ಎಂದರು.
ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿಯೊಂದಿಗೆ ಜೆಡಿಎಸ್ ಕೂಡ ಅಷ್ಟೇ ಸಮಬಲದ ಹೋರಾಟ ನಡೆಸಿದೆ. ಸರಕಾರದ ನ್ಯೂನ್ಯತೆಗಳನ್ನು ಜನರಿಗೆ ತಲುಪಿಸುವಲ್ಲಿ ಬಿಜೆಪಿಯಷ್ಟೇ ಜೆಡಿಎಸ್ ಶಾಸಕರಿಗೂ ಶಕ್ತಿಯಿದೆ. ಆದರೆ, ಮೈತ್ರಿ ಮಾಡಿಕೊಂಡು ಬಿಜೆಪಿ ನಾಯಕರು ಯಾವುದೇ ಹೋರಾಟ, ಪ್ರತಿಭಟನೆಗೆ ಜೆಡಿಎಸ್ ನಾಯಕರನ್ನು ಕರೆಯುತ್ತಿಲ್ಲ ಎಂದು ಸುರೇಶ್ ಬಾಬು ದೂರಿದರು.
ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ಎನ್ಡಿಎ ಭಾಗವೆಂದು ಪರಿಗಣಿಸಲಾಗಿತ್ತು, ಆದರೆ ವಸ್ತು ಸ್ಥಿತಿ ಬೇರೆಯೇ ಇದೆ. ರಾಜ್ಯದ ಬಿಜೆಪಿ ನಾಯಕರು ಮೈತ್ರಿ ಪಕ್ಷವಾದ ಜೆಡಿಎಸ್ ಅನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಎರಡೂ ಪಕ್ಷಗಳ ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ಸುರೇಶ್ ಬಾಬು ತಿಳಿಸಿದರು.