ಚಿಕ್ಕಮಗಳೂರು | ಮಹಿಷ ದಸರಾ ಆಚರಣೆಗೆ ಮುಂದಾದ ದಲಿತ, ಪ್ರಗತಿಪರರ ಬಂಧನ

Update: 2023-10-20 12:15 GMT

ಚಿಕ್ಕಮಗಳೂರು, ಅ.20: ನಿಷೇಧಾಜ್ಞೆ ನಡುವೆಯೂ ಮಹಿಷ ದಸರಾ ಕಾರ್ಯಕ್ರಮ ನಡೆಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದ್ದಲ್ಲದೇ ಎಲ್ಲ ಮುಖಂಡರನ್ನು ಕಡೂರು ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ನಗರದಲ್ಲಿ ಶುಕ್ರವಾರ ನಡೆಯಿತು.

ನಗರದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳು ಶುಕ್ರವಾರ ಮಹಿಷ ದಸರಾ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಪ್ರೊ.ಭಗವಾನ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಪ್ರೊ.ಭಗವಾನ್ ಅವರು ಒಕ್ಕಲಿಗ ಸಮುದಾಯದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಅವರು ನಗರಕ್ಕೆ ಬರಬಾರದು. ಎಚ್ಚರಿಕೆ ಮೀರಿ ನಗರಕ್ಕೆ ಅವರನ್ನು ಕರೆತಂದಲ್ಲಿ ಒಕ್ಕಲಿಗ ಸಮುದಾಯದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಸಮುದಾಯದ ಮುಖಂಡರು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಶ್ರೀರಾಮಸೇನೆಯ ಮುಖಂಡರೂ ಕೂಡ ಪ್ರೊ.ಭಗವಾನ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದಲಿತ ಪ್ರಗತಿಪರ ಸಂಘಟನೆಗಳ ಮುಖಂಡರು ಆಯೋಜಿಸಿದ್ದ ಮಹಿಷ ದಸರಾ ಶುಕ್ರವಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಒಕ್ಕಲಿಗರ ಸಂಘ ಹಾಗೂ ಶ್ರೀರಾಮಸೇನೆ ಸಂಘಟನೆಗಳ ಎಚ್ಚರಿಕೆಯ ನಡುವೆಯೂ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರನು ಪ್ರೊ.ಭಗವಾನ್ ನೇತೃತ್ವದಲ್ಲೇ ಮಹಿಷ ದಸರಾ ಕಾರ್ಯಕ್ರಮ ನಡೆಸುವುದಾಗಿ ಪಟ್ಟು ಹಿಡಿದಿದ್ದಲ್ಲೇ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆದರೆ ಜಿಲ್ಲಾಡಳಿತ ಕಾರ್ಯಕ್ರಮದ ವೇಳೆ ಘರ್ಷಣೆ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಕಳೆದ ಅ.17ರಿಂದ 24ರವರೆಗೆ ಮಹಿಷ ದಸರಾ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ನಿಷೇಧಾಜ್ಞೆ ಹೇರಿ ಆದೇಶ ಹೊರಡಿಸಿತ್ತು.

ಮಹಿಷ ದಸರಾ ಕಾರ್ಯಕ್ರಮ ಮಾಡಿಯೇ ತೀರುತ್ತೇವೆಂದು ಪಟ್ಟು ಹಿಡಿದಿದ್ದ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ನಿಷೇಧಾಜ್ಞೆ ನಡುವೆಯೇ ಶುಕ್ರವಾರ ಮಧ್ಯಾಹ್ನ ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‍ಪಾರ್ಕ್‍ವರೆಗೆ ಮೆರವಣಿಗೆ ನಡೆಸಲು ಮುಂದಾಗಿದ್ದರು. ಈ ವೇಳೆ ಮುಖಂಡರು, ಕಾರ್ಯಕರ್ತರ ಬಂಧನಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ನೂರಾರು ಪೊಲೀಸರು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ಜಮಾಯಿಸುತ್ತಿದ್ದಂತೆ ಮೆರವಣಿಗೆ ನಡೆಸಲು ಅಡ್ಡಿಪಡಿಸಿ, ನಿಷೇಧಾಜ್ಞೆ ಇರುವುರಿಂದ ಮೆರವಣಿಗೆ ನಡೆಸುವಂತಿಲ್ಲ. ಸಭೆ ಸೇರುವಂತಿಲ್ಲ ಎಂದು ಮನವರಿಕೆ ಮಾಡಲು ಯತ್ನಿಸಿದರು.

ಇದಕ್ಕೆ ಒಪ್ಪದ ಮುಖಂಡರು ಮಹಿಷರಾಜನ ಪರ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಲು ಮುಂದಾದಾಗಿ ಪೊಲೀಸರು ಎಲ್ಲರನ್ನು ಬಂಧಿಸಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣವೂ ನಿರ್ಮಾಣವಾಯಿತು. ಆದರೆ ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು ಎಲ್ಲ ಮುಖಂಡರನ್ನು ಪೊಲೀಸ್ ವಾಹನಗಳಿಗೆ ತುಂಬಿ ಠಾಣೆ ಕರೆದೊಯ್ದರು.

ದಲಿತ ಪ್ರಗತಿಪರಸಂಘಟನೆಗಳ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಮರ್ಲೆ ಅಣ್ಣಯ್ಯ, ಹೊನ್ನೇಶ್, ಹರೀಶ್‍ಮಿತ್ರ, ಆಲ್ದೂರು ಗಣೇಶ್, ಯಲಗುಡಿಗೆ ಹೊನ್ನಪ್ಪ, ಹುಣಸೇಮಕ್ಕಿ ಲಕ್ಷ್ಮಣ್, ಸಂತೋಷ್, ವಕೀಲ ಪರಮೇಶ್ವರ್, ಆಲ್ದೂರು ಯುವರಾಜ್ ಮತ್ತಿತರರು ಕಾಯಕರ್ತರು ಕಾರ್ಯಕ್ರಮದ ನೇತೃತ್ವವಹಿಸಿದ್ದು, ಎಲ್ಲ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.

 

ಮುಖಂಡರ ಬಂಧನದಿಂದ ಪರಿಸ್ಥಿತಿ ತಹಬದಿಗೆ ಬಂತಾದರೂ ಕೆಲ ಹೊತ್ತಿನ ನಂತರ ಮೂಡಿಗೆರೆಯ ಪ್ರಗತಿಪರ ಹೋರಾಟಗಾರ ಅಂಗಡಿ ಚಂದ್ರು ನೇತೃತ್ವದಲ್ಲಿ ಕೆಲ ಕಾರ್ಯಕರ್ತರು ಮತ್ತೆ ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿ ಮಹಿಷ ದಸರಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ, ಮುಖಂಡರನ್ನು ಬಂಧಿಸಿದ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅವರನ್ನೂ ಬಂಧಿಸಿದರು. ದಲಿತ, ಪ್ರಗತಿಪರ ಸಂಘಟನೆಗಳ ಸುಮಾರು 60ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ಬಂಧಿಸಿದ್ದು, ಬಂಧನದ ಬಳಿಕ ಎಲ್ಲರನ್ನೂ ಕಡೂರು ಪೊಲೀಸ್ ಠಾಣೆಗೆ ಕರೆದೊಯ್ದರು. ಸಂಜೆ ವೇಳೆಗೆ ಬಂಧನಕ್ಕೊಳಗಾಗಿದ್ದ ಎಲ್ಲರನ್ನು ಬಿಡುಗಡೆ ಮಾಡಲಾಯಿತು.

 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News