ಬಿಜೆಪಿಯ ರಕ್ತದಲ್ಲೇ ಕೋಮುವಾದದ ಜತೆಗೆ ಅಂತರ್‌ ಕಲಹವೂ ಸೇರಿಕೊಂಡಿದೆ : ಸಿಎಂ ಸಿದ್ದರಾಮಯ್ಯ

Update: 2024-09-26 12:59 GMT

ಸಿದ್ದರಾಮಯ್ಯ(PC:x/@siddaramaiah)

ಬೆಂಗಳೂರು : ‘ಪ್ರಧಾನಿ ಮೋದಿಯವರು ‘ಕರ್ನಾಟಕದ ಕಾಂಗ್ರೆಸ್‍ನಲ್ಲಿ ಅಂತರ್‌ ಕಲಹ ನಡೆಯುತ್ತಿದೆ’ ಎಂದು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಬಹುಶಃ ಪ್ರಧಾನಿ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ಉಲ್ಲೇಖಗೊಳ್ಳುತ್ತಿರುವ ಪಕ್ಷಗಳ ಹೆಸರನ್ನು ಗೊಂದಲ ಮಾಡಿಕೊಂಡು, ಬಿಜೆಪಿ ಬದಲಿಗೆ ಕಾಂಗ್ರೆಸ್ ಎಂದು ತಿಳಿದುಕೊಂಡು ಈ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಈ ಗೊಂದಲ ನಿವಾರಣೆಗಾಗಿ ಅವರು ತಕ್ಷಣ ಸ್ಪಷ್ಟೀಕರಣ ನೀಡಬೇಕೆಂದು ಮನವಿ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಗುರುವಾರ ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಬಿಜೆಪಿಯ ರಕ್ತದಲ್ಲಿ ಹೇಗೆ ಕೋಮುವಾದ ಸೇರಿಕೊಂಡಿದೆಯೋ, ಅದೇ ರೀತಿ ಅಂತರ್‌ ಕಲಹವೂ ಸೇರಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳದ ದಿನವೇ ಸಿಗಲಾರದು. ಪ್ರತಿನಿತ್ಯ ಬಿಜೆಪಿ ನಾಯಕರು ಆರೋಪ-ಪ್ರತ್ಯಾರೋಪ, ಪರಸ್ಪರ ದೂಷಣೆ-ನಿಂದನೆಯ ಧಾರವಾಹಿ ಮೂಲಕ ಜನರನ್ನು ರಂಜಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

‘ಮೋದಿ ಅವರೇ, ದಯವಿಟ್ಟು ತಾವು ಬೆಳಗ್ಗೆ ಎದ್ದು ಕರ್ನಾಟಕದಿಂದ ಪ್ರಕಟವಾಗುವ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ನಿಮ್ಮ ಪಕ್ಷದಲ್ಲಿ ನಡೆಯುವ ಅಂತರ್‌ ಕಲಹದ ಒಂದು ಅಂದಾಜು ಸಿಗಬಹುದು. ಇದರ ನಂತರವಾದರೂ ನೀವು ನಮ್ಮ ಪಕ್ಷದ ಕಡೆ ಬೊಟ್ಟು ಮಾಡುವುದನ್ನು ನಿಲ್ಲಿಸಿ, ನಿಮ್ಮ ಪಕ್ಷದ ಅಂತರ್ ಕಲಹದ ಬೆಂಕಿಯನ್ನು ಶಮನ ಮಾಡಲು ಪ್ರಯತ್ನ ನಡೆಸಬಹುದೆಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಬಸವನಗೌಡ ಪಾಟೀಲ್ ಯತ್ನಾಳ್ ಬೆಳಗ್ಗೆ ಎದ್ದ ಕೂಡಲೇ ಯಡಿಯೂರಪ್ಪ ಮತ್ತವರ ಮಕ್ಕಳ ವಿರುದ್ಧ ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಇವರ ಆರೋಪಗಳಿಗೆ ಶಾಸಕರಾದ ರಮೇಶ್ ಜಾರಕಿಹೊಳಿ, ಸಿ.ಟಿ.ರವಿ ಮೊದಲಾದವರು ದನಿಗೂಡಿಸಿ ಅಪ್ಪ-ಮಕ್ಕಳ ವಿರುದ್ದ ಬಗೆಬಗೆಯ ಆರೋಪಗಳನ್ನು ಮಾಡಿದ್ದಾರೆ. ಇದೀಗ ಉಚ್ಚಾಟಿತ ಬಿಜೆಪಿ ನಾಯಕ ಈಶ್ವರಪ್ಪ ಮನೆಯಲ್ಲಿಯೇ ಕೂತು ಭಿನ್ನಮತೀಯ ಶಾಸಕರು ಸಭೆ ನಡೆಸಿದ್ದಾರೆ. ಇದನ್ನು ಅಂತರ್‌ ಕಲಹ ಎಂದು ಕರೆಯದೆ ಪ್ರೇಮಸಲ್ಲಾಪ ಎನ್ನೋಣವೇ? ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕರ್ನಾಟಕದ ಬಿಜೆಪಿಯಲ್ಲಿನ ಅಂತರ್ ಕಲಹ ಇತ್ತೀಚಿನ ಬೆಳವಣಿಗೆಯೇನಲ್ಲ, ಇದಕ್ಕೊಂದು ಇತಿಹಾಸವಿದೆ. ರಾಜ್ಯದ ಜನತೆ ಎಂದೂ ಬಿಜೆಪಿಗೆ ಪೂರ್ಣಬಹುಮತ ನೀಡಿ ಅಧಿಕಾರಕ್ಕೆ ತಂದಿಲ್ಲ. ಅಕ್ರಮ ದುಡ್ಡಿನ ಬಲದಿಂದ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರೂ ಯಾರೇ ಒಬ್ಬ ಮುಖ್ಯಮಂತ್ರಿ ಪೂರ್ಣಾವಧಿ ಆಳಿಲ್ಲ. 2008ರಿಂದ 2013ರ ವರೆಗೆ ಮೂವರು ಮುಖ್ಯಮಂತ್ರಿಗಳು, 2019ರಿಂದ 2023ರ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳು. ಕರ್ನಾಟಕದ ಬಿಜೆಪಿಯೊಳಗಿನ ಅಂತರ್‌ ಕಲಹ ನಮ್ಮಲ್ಲಿ ಮನೆಮಾತಾಗಿದೆ. ಇದರಲ್ಲಿ ನಮ್ಮ ಪಕ್ಷದ ಯಾವುದೇ ಪಾತ್ರ ಇಲ್ಲ. ಇವೆಲ್ಲ ಸ್ವಯಂಕೃತ ಅಪರಾಧದ ಹಳವಂಡಗಳು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

2011ರಲ್ಲಿ ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗಲು ಪಕ್ಷದೊಳಗಿನ ಅಂತರ್‌ ಕಲಹವೂ ಕಾರಣ ಎನ್ನುವುದನ್ನು ಪ್ರಧಾನಿ ಮೋದಿ ಅವರೂ ಮರೆತುಬಿಟ್ಟಿದ್ದಾರೆ. ಅದರ ನಂತರ ಬಿಜೆಪಿ ತೊರೆದು ಸ್ವಂತ ಪಕ್ಷ ಕಟ್ಟಿದ್ದ ಯಡಿಯೂರಪ್ಪನವರು ವಾಜಪೇಯಿ-ಅಡ್ವಾಣಿಯವರನ್ನು ಸೇರಿದಂತೆ ಯಾರನ್ನೂ ಬಿಡದೆ ಕೀಳುಮಟ್ಟದ ಭಾಷೆಯಲ್ಲಿ ನಿಂದಿಸಿದ್ದಾರೆ. ಕೊನೆಗೆ ಅವರನ್ನೆ ಕರೆತಂದು ಮುಖ್ಯಮಂತ್ರಿ ಮಾಡಿದ್ದಾಯಿತು, ನಂತರ ಅವರನ್ನು ಪದಚ್ಯುತಿಗೊಳಿಸಿಯೂ ಆಯಿತು. ಇವೆಲ್ಲದರ ಹಿಂದೆ ಪಕ್ಷದ ಅಂತರ್‌ ಕಲಹ ಕಾರಣ ಅಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಪ್ರಧಾನಿ ಮೋದಿ ಅವರೇ, ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಲು ಹೋಗಬೇಡಿ. ನಮ್ಮ ಪಕ್ಷದ ಅಂತರ್‌ ಕಲಹದ ಬಗ್ಗೆ ಚಿಂತೆ ಮಾಡಬೇಡಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಪೂರ್ಣಾವಧಿಯನ್ನು ಮುಗಿಸಿದ್ದೇವೆ. ಅರಸು ನಂತರ ಪೂರ್ಣ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಾನು ಇದೀಗ 2ನೆ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಮ್ಮೊಳಗೆ ಜಗಳ ಹುಟ್ಟುಹಾಕುವ ನಿಮ್ಮೆಲ್ಲರ ನಿರಂತರ ಪ್ರಯತ್ನದ ಹೊರತಾಗಿಯೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ’

-ಸಿದ್ದರಾಮಯ್ಯ, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News