ಸರ್ವಾಧಿಕಾರದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಮನಸ್ಥಿತಿ ವಿರುದ್ಧ ನಮ್ಮ ಹೋರಾಟ : ಸಿಎಂ ಸಿದ್ದರಾಮಯ್ಯ
ಅಹಮದಾಬಾದ್: ನಮ್ಮ ಹೋರಾಟ ಒಂದು ಪಕ್ಷದ ವಿರುದ್ಧ ಮಾತ್ರವಲ್ಲ. ಅದು ಸರ್ವಾಧಿಕಾರದ ಹೆಸರಲ್ಲಿ ದೇಶವನ್ನು ವಿಭಜಿಸುವ, ವಿನಾಶಕ್ಕೆ ಕೊಂಡೊಯ್ಯುವ ಮನಸ್ಥಿತಿಯ ವಿರುದ್ಧ. ಮತ್ತು ಇದಕ್ಕೆ ತಕ್ಕ ಉತ್ತರ ಕರುಣೆ, ಧೈರ್ಯ ಮತ್ತು ಸಮರ್ಪಣೆ ಮನೋಭಾವದಿಂದ ನಾವು ಮುನ್ನಡೆಯುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಗುಜರಾತಿನ ಅಹಮದಾಬಾದ್ನ ಸಾಬರಮತಿಯಲ್ಲಿ ಜರುಗಿದ ಎಐಸಿಸಿ ವಿಸ್ತೃತ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಸದೃಢವಾದ ಭಾರತವನ್ನು ಮಾತ್ರವಲ್ಲ, ಸಾಮಾಜಿಕವಾಗಿ, ತಾತ್ವಿಕವಾಗಿ, ಸಾಂವಿಧಾನಿಕವಾಗಿ ಸದೃಢವಾದ ರಾಷ್ಟ್ರ ನಿರ್ಮಾಣ ಮಾಡಬೇಕಿದೆ. ನಾವು ಇಲ್ಲಿ ಇರುವುದು ಅಧಿಕಾರಕ್ಕೋಸ್ಕರ ಅಲ್ಲ. ಪ್ರತಿಯೊಬ್ಬ ಭಾರತೀಯನಿಗಾಗಿ ಗಣರಾಜ್ಯವನ್ನು ಪುನರ್ ನಿರ್ಮಿಸಲು ಎಂದರು.
ನಮ್ಮ ದೇಶ ಇಂದು ಅಪಾಯಕಾರಿಯಾದ ಕವಲುದಾರಿಯಲ್ಲಿ ನಿಂತಿದೆ. ಸಂವಿಧಾನದ ಅಡಿಪಾಯಗಳಾಗಿರುವ ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವವು ಅಧಿಕಾರದ ಅಮಲು ಹಾಗೂ ನಿಯಂತ್ರಣದ ಗೀಳು ತುಂಬಿರುವ ಅಧಿಕಾರದ ಹಿಡಿತಕ್ಕೆ ಸಿಲುಕಿವೆ ಎಂದು ಸಿದ್ದರಾಮಯ್ಯ ಹೇಳಿದರು.
ರೈತರ ಹೋರಾಟಕ್ಕೆ ಬೆಲೆಯಿಲ್ಲ. ಮೋದಿಯ ಭಾರತದಲ್ಲಿ ಹೋರಾಟದ ಹಕ್ಕನ್ನು ಅಪರಾಧವೆಂದು ಪರಿಗಣಿಸಲಾಗುತ್ತಿದೆ. ಮಣಿಪುರದಿಂದ ಹತ್ರಾಸ್ ನವರೆಗೂ ಮಹಿಳೆಯರ ನೋವುಗಳನ್ನು ಕಡೆಗಣಿಸಿ, ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಇನ್ನಷ್ಟು ಅಂಚಿಗೆ ತಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಭಿವೃದ್ಧಿಯ ರಾಜಕಾರಣವನ್ನು, ವಿಭಜಿಸುವ ರಾಜಕಾರಣವನ್ನಾಗಿ ಬದಲಿಸಲಾಗುತ್ತಿದೆ. ಯುವಜನತೆ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದರೆ, ಬೆಲೆ ಏರಿಕೆ ಹೆಚ್ಚುತ್ತಿವೆ. ‘ಅಚ್ಛೇ ದಿನ್’ ಎಂಬ ಭರವಸೆ ಎಂಬುದು, ಸಾಮಾನ್ಯ ಭಾರತೀಯನ ಪಾಲಿಗೆ ಕ್ರೂರ ಹಾಸ್ಯವಾಗಿದೆ. ಇದು ಕೇವಲ ಆಡಳಿತದ ಬಿಕ್ಕಟ್ಟಲ್ಲ. ಇದು ನೈತಿಕತೆಯ ಬಿಕ್ಕಟ್ಟು ಎಂದು ಸಿದ್ದರಾಮಯ್ಯ ಹೇಳಿದರು.
ಚುನಾವಣಾ ಆಯೋಗವು, ಆಡಳಿತ ಪಕ್ಷದವರ ಹಣ ಮತ್ತು ಮಾಧ್ಯಮಗಳ ದುರ್ಬಳಕೆಯಿಂದಾಗಿ ಅಸಹಾಯಕವಾಗಿ ನಿಂತಿದೆ. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಶಸ್ತ್ರಗಳಂತೆ ಬಳಸಲಾಗುತ್ತಿದೆ. ಇವುಗಳಿಂದ ವಿಪಕ್ಷದವರನ್ನು ದ್ವೇಷದಿಂದ ಹಿಮ್ಮೆಟ್ಟಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಂಸತ್ ಅನ್ನು ಕೇವಲ ರಬ್ಬರ್ ಸ್ಟ್ಯಾಂಪ್ ನ ಮಟ್ಟಕ್ಕೆ ಇಳಿಸಲಾಗಿದೆ. ಯಾವುದೇ ಚರ್ಚೆಗಳಿಲ್ಲದೇ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಸತ್ಯವನ್ನು ಅಪೇಕ್ಷಿಸಿದ್ದಕ್ಕಾಗಿ ವಿರೋಧಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗುತ್ತಿದೆ. ಬಿಜೆಪಿಯೇತರ ರಾಜ್ಯ ಸರಕಾರಗಳನ್ನು ಅಭದ್ರಗೊಳಿಸಲು ರಾಜ್ಯಪಾಲರನ್ನು ರಾಜಕೀಯ ಏಜೆಂಟ್ಸ್ ಗಳಾಗಿ ಬಳಸಲಾಗುತ್ತಿದೆ ಎಂದು ಸಿದ್ದರಾಮಯ್ಯ ದೂರಿದರು.
ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಪಕ್ಷ ಎನ್ನುತ್ತಾ, ಭಾರತವನ್ನು ಸಂಕುಚಿತತೆಯತ್ತ ನೂಕುವ ಅಪಾಯಕಾರಿ ಪ್ರಯತ್ನ ನಡೆಯುತ್ತಿದೆ. ತಮಿಳುನಾಡು ಹಾಗೂ ಕರ್ನಾಟಕ ಮೇಲೆ ‘ನೀಟ್’ ಮಾಡಿರುವ ಪರಿಣಾಮಗಳನ್ನು ನೋಡುವುದಾದರೆ, ಉತ್ತಮವಾಗಿ ಸ್ಥಾಪಿತವಾಗಿದ್ದ ಶಿಕ್ಷಣ ವ್ಯವಸ್ಥೆಯನ್ನು ಈಗ ‘ರಾಷ್ಟ್ರೀಯ ಮಾನದಂಡ’ದ ಹೆಸರಿನಲ್ಲಿ ಹಾಳುಗೆಡವಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಯುಜಿಸಿಯಿಂದ ತರಲಾಗಿರುವ ಸುಧಾರಣೆಗಳು, ಶಿಕ್ಷಣದ ಮೇಲಿನ ಕ್ರೇಂದ್ರೀಕೃತ ನಿಯಂತ್ರಣ ಸ್ಥಾಪಿಸುವ ಹಾಗೂ ಜ್ಞಾನ, ಅವಶ್ಯಕತೆ ಹಾಗೂ ಪ್ರತ್ಯೇಕ ರಾಜ್ಯಗಳ ಆಶಯಗಳನ್ನು ಕಡೆಗಣಿಸುವಂತಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಕಾಗದದ ಮೇಲೆ ಎಷ್ಟೇ ಮಹತ್ವಾಕಾಂಕ್ಷಿಯಾಗಿ ತೋರಿದರೂ, ವೈವಿಧ್ಯತೆಯಿಂದ ಕೂಡಿದ ದೇಶದಲ್ಲಿ ‘ಎಲ್ಲರಿಗೂ ಒಂದೇ ಅಳತೆ’ ಎಂಬ ಮಾದರಿ ಅಪಾಯಕಾರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಶಿಕ್ಷಣ, ಅಭಿವೃದ್ಧಿ ಮತ್ತು ಯುವ ಜನಾಂಗವನ್ನು ಅವಕಾಶಗಳ ಜಗತ್ತಿಗೆ ಸಂಪರ್ಕಿಸಲು ತಂತ್ರಜ್ಞಾನವನ್ನು ಬಳಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಬಿಜೆಪಿಯ ಅಧಿಕಾರಾವಧಿಯಲ್ಲಿ ಮನಸ್ಸುಗಳನ್ನು ಒಡೆಯಲು, ಸತ್ಯವನ್ನು ತಿರುಚಲು ಹಾಗೂ ಸೌಹಾರ್ದತೆಯನ್ನು ಹಾಳು ಮಾಡಲು ತಂತ್ರಜ್ಞಾನವನ್ನು ಅಸ್ತ್ರವನ್ನಾಗಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ವೈಚಾರಿಕ ಚಿಂತನೆಯನ್ನು ಪೋಷಿಸುವ ಬದಲಿಗೆ, ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಆಂದೋಲನವನ್ನೇ ಕೈಗೊಳ್ಳಲಾಗುತ್ತಿದೆ. ವಿಜ್ಞಾನ ಮತ್ತು ಕರುಣೆಯನ್ನು ಹೇಳಿಕೊಡುವ ಬದಲು, ಭಯ ಮತ್ತು ಕ್ರೋಧವನ್ನು ಹುಟ್ಟುಹಾಕಲು ವಿನ್ಯಾಸಗೊಳಿಸಿರುವ ಹಿಂದುತ್ವದ ಪ್ರಸರಣದಿಂದ ಆಲ್ಗೋರಿದಮ್ ಗಳನ್ನು ಭರ್ತಿಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಹಿಂದೂ ಧರ್ಮವು ಸಹಿಷ್ಣುತೆ, ಶಾಂತಿ, ಶೋಧನೆ ಮತ್ತು ಒಳಗೊಳ್ಳುವಿಕೆಯಲ್ಲಿ ನಂಬಿಕೆಯಿರಿಸಿದೆ. ಆದರೆ ನಾವು ಹಿಂದುತ್ವ ಎಂಬ ದ್ವೇಷವನ್ನೇ ಬೋಧಿಸುವ, ಇತರನ್ನು ಹೊರತುಪಡಿಸುವ ಮತ್ತು ಧರ್ಮವನ್ನು ಅಧಿಕಾರಕ್ಕಾಗಿ ಬಳಸುವ ಸಾಧನವಾಗಿರುವ ರಾಜಕೀಯ ಸಿದ್ಧಾಂತವನ್ನು ತಿರಸ್ಕರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಷ್ಟ್ರೀಯತೆ ಮತ್ತು ಧರ್ಮದ ಹೆಸರಿನಲ್ಲಿ ಇತಿಹಾಸವನ್ನು ತಿದ್ದಲಾಗುತ್ತಿದೆ. ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಇತ್ತೀಚಿನ ವಕ್ಫ್ ಮಂಡಳಿ ವಿವಾದ ಇದಕ್ಕೊಂದು ಉದಾಹರಣೆ. ಬಿಜೆಪಿ ನಾಯಕರು ಮುಸಲ್ಮಾನರನ್ನು ಗುರಿಯಾಗಿಸಲು, ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಲು ಹಾಗೂ ನೆರೆಹೊರೆಗಳನ್ನು ರಣರಂಗವಾಗಿ ಪರಿವರ್ತಿಸಲು ಸುಳ್ಳು ಕಥೆಗಳನ್ನು ಪ್ರಚುರಪಡಿಸುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.