ಪತ್ರಿಕೋದ್ಯಮ ಮತ್ತು ಸಂವಿಧಾನದ ಆಶಯಗಳ ರಕ್ಷಣೆಗೆ ಸಿಎಂ ಸಿದ್ದರಾಮಯ್ಯ ಸದಾ ಸಿದ್ದ: ಕೆ.ವಿ.ಪ್ರಭಾಕರ್

Update: 2023-07-16 08:48 GMT

ಹಾಸನ: ಸಂವಿಧಾನದ ಆಶಯಗಳು ಮತ್ತು ಪತ್ರಿಕೋದ್ಯಮದ ಆಶಯಗಳು ಒಂದೇ ಆಗಿವೆ. ಹಾಗೆಯೇ ಸಂವಿಧಾನದ ಮತ್ತು ಪತ್ರಿಕೋದ್ಯಮದ ಆಶಯಗಳೇ ಸಿದ್ದರಾಮಯ್ಯ ಅವರ ಆಶಯಗಳಾಗಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು.

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆಯಲ್ಲಿ ಪ್ರಧಾನ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದಾಗಲೆಲ್ಲಾ ಪತ್ರಕರ್ತರು ಅದರ ರಕ್ಷಣೆಗೆ ನಿಲ್ಲುತ್ತಾರೆ. ಹಾಗೆಯೇ ಸಂವಿಧಾನಕ್ಕೆ ಧಕ್ಕೆ ಬಂದಾಗಲೆಲ್ಲಾ ಸಿದ್ದರಾಮಯ್ಯ ಅವರೂ ಸೆಟೆದು ನಿಲ್ಲುತ್ತಾರೆ. ಹೀಗಾಗಿ ಪತ್ರಕೋದ್ಯಮ ಮತ್ತು ಸಂವಿಧಾನದ ಆಶಯಗಳೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯಗಳೂ ಆಗಿವೆ. ಪತ್ರಿಕೋದ್ಯಮದ ಸ್ವಾತಂತ್ರ್ಯ ರಕ್ಷಿಸಲು ಮತ್ತು ಪತ್ರಕರ್ತರ ಯೋಗಕ್ಷೇಮಕ್ಕೆ ಮುಖ್ಯಮಂತ್ರಿಗಳು ಸದಾ ಸಿದ್ದರಿರುತ್ತಾರೆ ಎಂದು ವಿವರಿಸಿದರು.

ನೈಜ ಪತ್ರಕರ್ತರು ಸಮಾಜವನ್ನೇ ತಮ್ಮ ಕುಟುಂಬದಂತೆ ಭಾವಿಸುತ್ತಾರೆ. ಹೀಗಾಗಿ ಸಮಾಜ ಪತ್ರಕರ್ತ ಸಮೂಹದ ಪರವಾಗಿ ಇರಬೇಕು. ಜಿಲ್ಲಾ ಮತ್ತು ತಾಲ್ಲೂಕು , ಗ್ರಾಮೀಣ ಮಟ್ಟದಲ್ಲಿ ಪತ್ರಕರ್ತ ಸಮೂಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ನೆರವು ಒದಗಿಸಿಕೊಡಲು ಶ್ರಮಿಸುತ್ತೇನೆ. ರಾಜ್ಯ ಬಹಳ ಆರ್ಥಿಕ ಸಂಕಷ್ಟದಲ್ಲಿದ್ದಾಗಲೂ ಪತ್ರಕರ್ತರ ಮಾಸಾಶನ ಮತ್ತಿತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈ ಬಜೆಟ್ ನಲ್ಲಿ ಈಡೇರಿಸಿದ್ದಾರೆ. ಮುಂದಿನ ಬಜೆಟ್ ಗಳಲ್ಲಿ ಇನ್ನಷ್ಟು ನೆರವು ನಮ್ಮ ಸಮೂಹಕ್ಕೆ ಒದಗಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಏಷ್ಯಾ ಪತ್ರಕರ್ತರ ಒಕ್ಕೂಟದ ಸಂಚಾಲಕರೂ, ಜನಮಿತ್ರ ಪತ್ರಿಕೆಯ ಸಂಪಾದಕರೂ ಆದ ಮದನ್ ಗೌಡರು ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ತಮ್ಮ ಆಶಯ ನುಡಿಗಳಲ್ಲಿ ಕೆ.ವಿ.ಪ್ರಭಾಕರ್ ಅವರು ಪತ್ರಕರ್ತ ಸಮೂಹಕ್ಕೆ ಅಗತ್ಯ ನೆರವು ದೊರಕಿಸಿಕೊಡಿಸಲು ಶ್ರಮಿಸುತ್ತಿರುವುದನ್ನು ವಿವರಿಸಿ ಮೆಚ್ಚುಗೆ ಸೂಚಿಸಿದರು.

ಶಾಸಕ ಶಿವಲಿಂಗೇಗೌಡರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News