ಕೋಲಾರ | ದಲಿತ ಯುವಕನನ್ನು ಪ್ರೀತಿಸಿದ ಪುತ್ರಿಯನ್ನೇ ಹತ್ಯೆಗೈದ ತಂದೆ; ಮನನೊಂದ ಯುವಕ ಆತ್ಮಹತ್ಯೆ

Update: 2023-06-28 07:59 GMT

ಕೋಲಾರ: ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೊಬ್ಬ ತನ್ನ ಪುತ್ರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದು, ಇದನ್ನು ಮರ್ಯಾದಾ ಹತ್ಯೆ ಎಂದೇ ಶಂಕಿಸಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಯುವತಿಯನ್ನು ಪ್ರೇಮಿಸುತ್ತಿದ್ದ ಯುವಕ ಕೂಡಾ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಅವಳಿ ಘಟನೆಗಳು ಜೂನ್ 27ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೋದಗುರ್ಕಿ ಗ್ರಾಮದಲ್ಲಿ ವರದಿಯಾಗಿದೆ.

ಮೃತಪಟ್ಟ ಯುವತಿಯನ್ನು ಪ್ರೀತಿ (20) ಹಾಗೂ ಗಂಗಾಧರ್ (24) ಎಂದು ಗುರುತಿಸಲಾಗಿದೆ. ಈ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದರ ಬೆನ್ನಿಗೇ ಪೊಲೀಸರು ಯುವತಿಯ ತಂದೆ ಕೃಷ್ಣಮೂರ್ತಿ(46) ಎಂಬಾತನನ್ನು ಬಂಧಿಸಿದ್ದಾರೆ.

ಅನ್ಯ ಜಾತಿಗಳಿಗೆ ಸೇರಿದ್ದ ಪ್ರೀತಿ ಹಾಗೂ ಗಂಗಾಧರ್ ಕಳೆದ ಕೆಲವು ತಿಂಗಳಿನಿಂದ ಪ್ರೀತಿಸುತ್ತಿದ್ದರು. ಈ ಸುದ್ದಿ ತಿಳಿದ ಪ್ರೀತಿಯ ತಂದೆ ಕೃಷ್ಣಮೂರ್ತಿ ಅವರಿಬ್ಬರಿಗೂ ದೂರಾಗುವಂತೆ ಎಚ್ಚರಿಕೆ ನೀಡಿದ್ದರು.

ಆದರೆ, ಅವರಿಬ್ಬರೂ ಗುಟ್ಟಾಗಿ ಭೇಟಿ ಮಾಡುವುದನ್ನು ಮುಂದುವರಿಸಿದ್ದರು. ಇದರಿಂದ ಕ್ರೋಧಗೊಂಡಿರುವ ಕೃಷ್ಣಮೂರ್ತಿ, ಜೂನ್ 27ರಂದು ತನ್ನ ಕೈಗಳಿಂದಲೇ ಪುತ್ರಿಯ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ.

ಪ್ರೀತಿ ಸಾವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆಯೇ ಮನ ನೊಂದ ಗಂಗಾಧರ್ ಕೂಡಾ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ಈ ಘಟನೆಗಳಿಂದ ಗ್ರಾಮದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ನಿಯಂತ್ರಿಸಲು ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News