ಔಷಧಿಗಳ ಗುಣಮಟ್ಟದ ಬಗ್ಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಿ : ಸಚಿವ ದಿನೇಶ್ ಗುಂಡೂರಾವ್

Update: 2024-08-07 15:20 GMT

PC : x/@dineshgrao

ಬೆಂಗಳೂರು : ರಾಜ್ಯದಲ್ಲಿ ಉತ್ಪಾದನೆಯಾಗುವ ಔಷಧಗಳು ಸೇರಿದಂತೆ ಸರಕಾರಿ ಔಷಧಾಲಯಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಇಲ್ಲಿನ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಮಾರುಕಟ್ಟೆಯಲ್ಲಿ ಸಾಕಷ್ಟು ಕಳಪೆ ಗುಣಮಟ್ಟದ ಔಷಧಿಗಳು ಪೂರೈಕೆ ಆಗುತ್ತಿದೆ. ಯಾರ ಹಂಗು ಇಲ್ಲದೇ ಮನಬಂದಂತೆ ಔಷಧಿಗಳನ್ನು ಜನರ ಮನೆಗೆ ಪೂರೈಸುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದರು.

ಔಷಧ ನಿಯಂತ್ರಣ ಇಲಾಖೆಯ ಮುಖ್ಯ ಉದ್ದೇಶವೇ ಸಾರ್ವಜನಿಕರ ಆರೋಗ್ಯವಾಗಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಔಷಧಿಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಆದರೆ ಆ ರೀತಿಯ ಕಾರ್ಯವೈಖರಿ ಇಲಾಖೆಯ ಅಧಿಕಾರಿಗಳಿಂದ ಕಂಡುಬರುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.

ಔಷಧಿಗಳ ಗುಣಮಟ್ಟದ ವಿಚಾರದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದ್ದೀರಿ ಎಂಬುದರ ಬಗ್ಗೆ ವಿಸ್ತೃತ ವರದಿ ನೀಡಬೇಕು. ಎಷ್ಟು ಕಳಪೆ ಔಷಧಿಗಳ ತಯಾರಕರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಯಾವ ಔಷಧಿಗಳನ್ನು ಟೆಸ್ಟಿಂಗ್ ಒಳಪಡಿಸಲಾಗಿದೆ ಎಂದು ತಿಳಿಸಬೇಕು. ಕಳೆಪೆ ಗುಣಮಟ್ಟದ ಔಷಧಿಗಳು ಮಾರುಕಟ್ಟೆಯಲ್ಲಿ ಸಿಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಅವರು ಸೂಚನೆ ನೀಡಿದರು.

ಯಾವ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಅವರ ರಕ್ಷಣೆಗೆ ನಾವಿದ್ದೇವೆ. ಯಾವ ಒತ್ತಡಕ್ಕೂ ಮಣಿಯುವ ಅಗತ್ಯವಿಲ್ಲ. ಮೊದಲು ಕೆಲಸ ಮಾಡಿ ತೋರಿಸಬೇಕು. ನಿಮಗೆ ತೊಂದರೆ ಆದರೆ ಸರಕಾರ ನಿಮ್ಮ ರಕ್ಷಣೆಗೆ ಬರಲಿದೆ. ಸರಕಾರದಿಂದ ಎಲ್ಲ ರೀತಿಯ ಬೆಂಬಲವು ನಿಮಗೆ ಸಿಗಲಿದೆ ಎಂದು ಅವರು ಅಧಿಕಾರಿಗಳಿಗೆ ಭರವಸೆ ನೀಡಿದರು.

ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಾ ಗುಪ್ತಾ ಮಾತನಾಡಿ, ಎಲ್ಲವು ಸರಿಯಿದ್ದರೆ ಔಷಧ ನಿಯಂತ್ರಣ ಇಲಾಖೆಯನ್ನು ಮುಚ್ವಿಬಿಡೊಣವೇ? ಕಳಪೆ ಔಷಧಿಗಳ ತಯಾರಿಕರ ವಿರುದ್ಧ ಒಂದು ದೂರು ದಾಖಲು ಮಾಡಿ, ಕ್ರಮ ಕೈಗೊಳ್ಳಲು ನಿಮಗೆ ಸಾಧ್ಯವಾಗಿಲ್ಲ. ನೀವು ಇನ್ನೇನು ಕೆಲಸ ಮಾಡ್ತಿದ್ದೀರಾ ಎಂದು ಔಷಧ ನಿಯಂತ್ರಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಗೆ ಬರುವ ಮುನ್ನ ಸಂಪೂರ್ಣ ಮಾಹಿತಿಯನ್ನು ತರಬೇಕು. ಅಂಕಿ-ಅಂಶಗಳನ್ನು ನಮ್ಮ ಮುಂದಿಟ್ಟು ನಿಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಚಿವರ ನಿರ್ದೇಶನದಂತೆ ಕಳೆಪೆ ಗುಣಮಟ್ಟದ ಔಷಧಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ನೋಡಿಕೊಳ್ಳುವುದು ನಿಮ್ಮ ಮುಖ್ಯ ಕೆಲಸ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News