ಬೇರೆಯವರ ಕಾಲದ ಫೋನ್ ಕದ್ದಾಲಿಕೆ ವಿಚಾರ ಎಲ್ಲರಿಗೂ ಗೊತ್ತಿದೆ: ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು

Update: 2024-05-22 14:37 GMT

ಬೆಂಗಳೂರು: ನಮ್ಮ ಸರಕಾರದ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಮಾಡುತ್ತಿರುವವರ ಅಧಿಕಾರ ಅವಧಿಯಲ್ಲಿ ಯಾವ ರೀತಿ ಈ ಪ್ರಕರಣ ನಡೆದಿತ್ತು ಎಂದು ಎಲ್ಲರಿಗೂ ಗೊತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಫೋನ್ ಕದ್ದಾಲಿಕೆ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಮಾಡಿರುವ ಆರೋಪದ ಕುರಿತು ಬುಧವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

ಈ ಆರೋಪ ಮಾಡುತ್ತಿರುವ ಆರ್.ಅಶೋಕ್ ಗೃಹ ಸಚಿವರಾಗಿದ್ದವರು. ಹಾಗೂ ಮತ್ತೊಬ್ಬರು ಮುಖ್ಯಮಂತ್ರಿಯಾಗಿದ್ದವರು. ಫೋನ್ ಕದ್ದಾಳಿಕೆ ವಿಚಾರವಾಗಿ ಅವರು ಪತ್ರದ ಮೂಲಕ ದೂರು ನೀಡಲಿ. ಕುಮಾರಸ್ವಾಮಿಗೆ ಯಾರೆಲ್ಲ ಮಾಹಿತಿ ನೀಡಿದ್ದಾರೆ ಎಂದು ಒಂದು ಪಟ್ಟಿ ಮಾಡಿ ಪ್ರಮಾಣಪತ್ರ ಸಲ್ಲಿಸಲಿ. ಅವರ ಕಾಲದಲ್ಲಿ ಏನೆಲ್ಲಾ ಆಗಿತ್ತು ಎಂದು ಎಲ್ಲರಿಗೂ ಗೊತ್ತಿದೆ ಎಂದು ಶಿವಕುಮಾರ್ ಹೇಳಿದರು.

ಇಂದಿನ ಸಚಿವರ ಸಭೆ ಕರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂದು ರಾತ್ರಿ ಸಚಿವರಿಗೆ ಭೋಜನಕೂಟ ಏರ್ಪಡಿಸಿದ್ದೇವೆ, ಲೋಕಸಭೆ ಚುನಾವಣೆ ನಿರ್ವಹಣೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News