ದಸರಾ ಆನೆಗಳನ್ನು ಲಾರಿಯಲ್ಲಿ ತರುವುದು ಬೇಡ: ಎಚ್.ವಿಶ್ವನಾಥ್ ಆಕ್ಷೇಪ

Update: 2023-08-14 15:42 GMT

ಮೈಸೂರು,ಆ.14: ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಸಂಬಂಧ ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಮೈಸೂರು ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಜೊತೆ ಪೂರ್ವಭಾವಿ ಸಭೆ ನಡೆಯಿತು.

ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಸರಾ ಗಜಪಯಣ ಸಮಾರಂಭದ ದಿನಾಂಕ ಕುರಿತು ಹಿರಿಯ ಅರಣ್ಯಾಧಿಕಾರಿ ಡಾ ಮಾಲತಿ ಪ್ರಿಯಾ ಮಾಹಿತಿ ನೀಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿ ದಸರಾ ಗಜಪಡೆಯನ್ನುಲಾರಿಗಳ ಮೂಲಕ ಮೈಸೂರಿಗೆ ಕರೆ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಆನೆಗಳನ್ನು ಲಾರಿಯಲ್ಲಿ ಕರೆ ತರುವುದು ಸಂಪ್ರದಾಯವಲ್ಲ. ಈ ಹಿಂದೆ ಮೈಸೂರು ಮಹಾರಾಜರು ಆನೆಗಳಿಗೆ ಫಲ ತಾಂಬೂಲ ನೀಡಿ ಕಾಲ್ನಡಿಗೆಯಲ್ಲಿ ಕರೆ ತರುತ್ತಿದ್ದರು. ಆನೆಗಳನ್ನು ಕಾಲ್ನಡಿಗೆಯಲ್ಲಿಯೇ ಕರೆ ತಂದರೆ ಒಳ್ಳೆಯದು ಎಂದು ಸಲಹೆ ನೀಡಿದರು.

ಇದಕ್ಕೆ ಒಪ್ಪದ ಅರಣ್ಯಾಧಿಕಾರಿ ಮಾಲತಿಪ್ರಿಯಾ. ಗೈಡ್ ಲೈನ್ಸ್ ಪ್ರಕಾರ ಆನೆಗಳನ್ನು ಕಾಲ್ನಡಿಗೆಯಲ್ಲಿ ಕರೆ ತರಲು ಸಾಧ್ಯವಿಲ್ಲ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಜಿಲ್ಲಾಧಿಕಾರಿ ಡಾ ಕೆ. ವಿ ರಾಜೇಂದ್ರ ಕೂಡ ಸಹಮತ ವ್ಯಕ್ತಪಡಿಸಿದರು. ಅವಕಾಶ ಸಿಕ್ಕರೆ ಆನೆಗಳನ್ನು ಕಾಲ್ನಡಿಗೆ ಮೂಲಕ ಕರೆ ತರಲು ಪ್ರಯತ್ನಿಸೋಣ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಸಭೆಯಲ್ಲಿ ಸಚಿವ ಕೆ.ವೆಂಕಟೇಶ್, ಶಾಸಕರಾದ ಜಿಟಿ ದೇವೇಗೌಡ, ದರ್ಶನ್ ದೃವನಾರಾಯಣ್, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ಮರೀತೀಬ್ಬೆಗೌಡ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಅರಣ್ಯಧಿಕಾರಿ ಮಾಲತಿ ಪ್ರಿಯ, ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೊತ್, ಎಸ್ಪಿ ಸೀಮಾ ಲಾಟ್ಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News