ದಿಲ್ಲಿಯಲ್ಲಿ ಉಚಿತ ಯೋಜನೆಗಳು ಸ್ಥಗಿತಗೊಂಡಿಲ್ಲ, ಸೋಲಿನ ಹತಾಶೆಯಲ್ಲಿ ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ: ಎಎಪಿ

Update: 2024-06-09 06:33 GMT

ಬೆಂಗಳೂರು: ಲೋಕಸಭೆ ಫಲಿತಾಂಶದ ಬಳಿಕ ಆಮ್‌ ಆದ್ಮಿ ಪಾರ್ಟಿ ದೆಹಲಿಯಲ್ಲಿ ಉಚಿತ ವಿದ್ಯುತ್‌ ಯೋಜನೆಯನ್ನು ಸ್ಥಗಿತಗೊಳಿಸಿರುವುದಾಗಿ ಮೈಸೂರು-ಕೊಡಗು ಕ್ಷೇತ್ರದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರು ಸುಳ್ಳು ಹೇಳಿಕೆ ನೀಡಿದ್ದಾರೆ. ಸೋಲಿನ ಹತಾಶೆಯಿಂದ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ದೆಹಲಿಯಲ್ಲಿ ಉಚಿತ ವಿದ್ಯುತ್‌, ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ಎಲ್ಲ ಜನಪರ ಯೋಜನೆಗಳು ಅಸ್ತಿತ್ವದಲ್ಲಿವೆ ಎಂದು ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್‌ ದಾಸರಿ ಸ್ಪಷ್ಟಪಡಿಸಿದ್ದಾರೆ.

ಈ ವಿಚಾರವಾಗಿ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಮಾದರಿಯ ಉಚಿತ ಯೋಜನೆಗಳನ್ನು ನಕಲು ಮಾಡಿ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಮುಖಂಡರಿಗೆ ಕೃತಜ್ಞತೆ ಎಂಬುವುದಿಲ್ಲ. ವಿಧಾನಸಭೆಯಲ್ಲಿ ಗೆದ್ದ ಬಳಿಕ ಗ್ಯಾರಂಟಿ ಯೋಜನೆಗಳು ನಮ್ಮದೇ ಯೋಜನೆಗಳು ಎಂಬಂತೆ ಹೇಳಿಕೊಂಡರು. ಇದೀಗ ಲೋಕಸಭೆಯಲ್ಲಿ ಸೋತ ಬಳಿಕ ಎಎಪಿಯ ಉಚಿತ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೆಹಲಿ ಸರ್ಕಾರವು ಸರ್‌ಪ್ಲಸ್‌ ಬಜೆಟ್‌ನಲ್ಲಿ ಉಚಿತ ಕೊಡುಗೆಗಳನ್ನು ನೀಡುತ್ತಿದೆ. ಸಂಪನ್ಮೂಲಗಳ ಕ್ರೋಢೀಕರಣ, ಭ್ರಷ್ಟಾಚಾರ ರಹಿತ ಆಡಳಿತದಿಂದ ದೆಹಲಿಯಲ್ಲಿ ಉಚಿತ ಯೋಜನೆಗಳು ಯಶಸ್ವಿಯಾಗಿವೆ. ಆದರೆ ಕರ್ನಾಟಕದಲ್ಲಿ ಸಾಲ ಮಾಡಿ ಉಚಿತ ಯೋಜನೆಗಳನ್ನು ಕೊಡಲಾಗುತ್ತಿದೆ. ಎಲ್ಲೆಡೆ ಭ್ರಷ್ಟಾಚಾರ ಮುಂದುವರಿದಿದೆ. ಈಗಾಗಲೇ ಹಲವು ಗುತ್ತಿಗೆದಾರರು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ದುರಾಡಳಿತ ತಾಂಡವವಾಡುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗದಂತೆ ಜನಪರ ಉಚಿತ ಯೋಜನೆಗಳನ್ನು ಹೇಗೆ ಮುಂದುವರಿಸಿಕೊಂಡು ಹೋಗಬಹುದು ಎಂಬುದನ್ನು ದೆಹಲಿ ಆಡಳಿತ ಮಾದರಿಯಿಂದ ಕಲಿಯಿರಿ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಐಐಟಿ, ಜೆಇಇ, ನೀಟ್‌ ಮುಂತಾದ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ಕೃಷ್ಟ ಮಟ್ಟದ ಚಿಕಿತ್ಸೆ ಉಚಿತವಾಗಿ ಸಿಗುತ್ತಿದೆ. ಕುಡಿಯುವ ನೀರು, ವಿದ್ಯುತ್‌, ಚರಂಡಿ ವ್ಯವಸ್ಥೆ ಹೀಗೆ ಮೂಲಭೂತ ವಿಚಾರಗಳಿಗೆ ಒತ್ತು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಕಿರುಕುಳದ ನಡುವೆಯೂ ಜನಮೆಚ್ಚುಗೆಯ ಕೆಲಸವನ್ನು ಎಎಪಿ ಸರ್ಕಾರ ಮಾಡುತ್ತಿದೆ. ಉಚಿತ ಯೋಜನೆಗಳ ಬಗ್ಗೆ ದೂರುವ ಬದಲು ಉಚಿತ ಕೊಡುಗೆಗಳ ನಡುವೆಯೂ ಹೇಗೆ ಆಡಳಿತ ನಡೆಸಲಾಗುತ್ತಿದೆ ಎಂಬ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿಕೊಂಡು ಬನ್ನಿ ಎಂದರು.

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ ಮುಖಂಡರೂ ಬಿಜೆಪಿಯ ವಾಟ್ಸಾಪ್‌ ಯೂನಿವರ್ಸಿಟಿಗೆ ಬಲಿಯಾಗಿದ್ದಾರೆ. ಇತ್ತೀಚೆಗೆ ದೆಹಲಿ ಶಿಕ್ಷಣ ಸಚಿವೆ ಅತಿಷಿ ಅವರ ಫೇಕ್‌ ವಿಡಿಯೊ ಒಂದನ್ನು ಬಿಜೆಪಿ ಐಟಿ ಸೆಲ್‌ ಹರಿಬಿಟ್ಟಿದೆ. ಅದನ್ನೇ ನಂಬಿರುವ ಕಾಂಗ್ರೆಸ್‌ ಮುಖಂಡರು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೊದಲು ಸೋಲಿನ ಪರಾಮರ್ಶೆ ಮಾಡಿಕೊಳ್ಳಿ. ನಿಮ್ಮ ಅಸಮರ್ಥತೆಗೆ ಜನಪರ ಉಚಿತ ಯೋಜನೆಗಳನ್ನು ದೂರದಿರಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News