ಬದಲಾಗಬೇಕಿರುವುದು ದೇಶದ ಹೆಸರಲ್ಲ, ದೇಶದ ಪರಿಸ್ಥಿತಿ: ದಿನೇಶ್ ಗುಂಡೂರಾವ್ ಕಿಡಿ

Update: 2023-09-05 13:27 GMT

ಬೆಂಗಳೂರು, ಸೆ.5: ಇಂಡಿಯಾ ಮತ್ತು ಭಾರತ ಎರಡೂ ಹೆಸರುಗಳು ನಮ್ಮ ಎದೆಯೊಳಗೆ ಅಜರಾಮರವಾಗಿವೆ. ಇಂಡಿಯಾ ಎಂದರೆ ಬೇರೆಯಲ್ಲ, ಭಾರತ ಎಂದರೆ ಬೇರೆಯಲ್ಲ. ಸದುದ್ದೇಶದಿಂದ ಇಂಡಿಯಾ ಬದಲು ಭಾರತ ಎಂದು ಮರುನಾಮಕರಣ ಮಾಡಿದರೆ ಆಕ್ಷೇಪಣೆಯಿಲ್ಲ. ಆದರೆ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಹೆಸರನ್ನು ಅಪ್ರಸ್ತುತಗೊಳಿಸಲು ದೇಶದ ಹೆಸರು ಬದಲಾಯಿಸಲು ಹೊರಟಿರುವುದು ಮೂರ್ಖತನ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂಬ ಹೆಸರಿಟ್ಟ ಕಾರಣಕ್ಕೆ ಕೇಂದ್ರ ಸರಕಾರ ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಬದಲಾಯಿಸಲು ಮುಂದಾಗಿದೆ. ಇಂಡಿಯಾ ಮೈತ್ರಿಕೂಟದ ಬಗ್ಗೆ ಬಿಜೆಪಿಯವರಿಗೆ ಇಷ್ಟೊಂದು ಭಯವೆ? ದೇಶದ ಹೆಸರು ಮರುನಾಮಕರಣಕ್ಕೆ ಇಂಡಿಯಾ ಮೈತ್ರಿಕೂಟದ ಮೇಲಿನ ಭಯವಲ್ಲದೆ ಮತ್ತೇನು ಕಾರಣ ಮೋದಿಯವರೆ? ಎಂದು ಪ್ರಶ್ನಿಸಿದ್ದಾರೆ.

ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸಿದರೆ ದೇಶ ಬದಲಾಗಲಿದೆಯೇ? ಮೋದಿಯವರೆ ಬದಲಾಗಬೇಕಿರುವುದು ದೇಶದ ಹೆಸರಲ್ಲ, ಬದಲಿಗೆ ದೇಶದ ಪರಿಸ್ಥಿತಿ. ಹೆಸರು ಬದಲಾಯಿಸುವ ಬದಲು ಜನರ ಜೀವನ ಮಟ್ಟ ಬದಲಾಯಿಸಿ. ದ್ವೇಷದ ಮೂಲಕ ಸಮಾಜದ ಶಾಂತಿ ಕೆಡಿಸುತ್ತಿರುವ ನಿಮ್ಮ ಭಕ್ತರ ಮನಸ್ಸು ಬದಲಾಯಿಸಿ. ಈ ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಬದಲಾಯಿಸಿ ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News