ವಾಲ್ಮೀಕಿ ನಿಗಮದಲ್ಲಿ ಅಕ್ರಮ | ಪ್ರಕರಣದ ನ್ಯಾಯಯುತ ಇತ್ಯರ್ಥಕ್ಕೆ ಸಿಬಿಐ ತನಿಖೆಯೊಂದೇ ಮಾರ್ಗ : ಆರ್.ಅಶೋಕ್

Update: 2024-06-01 06:35 GMT

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಹಾಗೂ 185 ಕೋಟಿ ರೂ. ಅವ್ಯವಹಾರ ಪ್ರಕರಣದಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿರುವುದು ಅತ್ಯಂತ ಸ್ಪಷ್ಟವಾಗಿದ್ದರೂ ಸಚಿವ ಬಿ.ನಾಗೇಂದ್ರ , ನಿಗಮದ ಅಧ್ಯಕ್ಷ ಹಾಗೂ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡಲು ಲಜ್ಜೆಗೆಟ್ಟ ಕಾಂಗ್ರೆಸ್‌ ಸರ್ಕಾರ ಹೊರಟಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಅಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ವೊಂದನ್ನು ಹಂಚಿಕೊಂಡಿರುವ ಅವರು, "ಸಿಎಂ ಸಿದ್ದರಾಮಯ್ಯ ನವರೇ, ಈ ಹಗರಣದಲ್ಲಿ ದಲಿತರ ದುಡ್ಡು ಲೂಟಿಯಾಗಿರುವುದು ಒಂದು ಕಡೆಯಾದರೆ, ಒಬ್ಬ ಅಮಾಯಕ ಹಾಗು ಪ್ರಾಮಾಣಿಕ ಅಧಿಕಾರಿಯ ಬಲಿಯಾಗಿದೆ. ಹತ್ತಾರು ಕಂಪನಿಗಳಿಗೆ ನೂರಾರು ಕೋಟಿ ಮೌಲ್ಯದ ಅಂತರರಾಜ್ಯ ಹಣ ವರ್ಗಾವಣೆ ನಡೆದರುವ ಈ ಪ್ರಕರಣದ ನ್ಯಾಯಯುತ ಇತ್ಯರ್ಥಕ್ಕೆ ಸಿಬಿಐ ತನಿಖೆಯೊಂದೇ ಮಾರ್ಗ" ಎಂದು ಹೇಳಿದ್ದಾರೆ.

ʼಹಗರಣ ಇಷ್ಟು ಗಂಭೀರವಾಗಿದ್ದರೂ ಸಿಐಡಿ ತನಿಖೆ, ಎಸ್ ಐಟಿ ತನಿಖೆ ಅಂತ ಕಾಲಹರಣ ಮಾಡಿ, ಕೊನೆಗೆ ಪ್ರಕರಣವನ್ನು ಮುಚ್ಚಿ ಹಾಕುವ ನಿಮ್ಮ ಹುನ್ನಾರವನ್ನು ಅರಿಯದಷ್ಟು ಅಮಾಯಕರಲ್ಲ ಕರ್ನಾಟಕದ ಜನತೆ. ನಿಮ್ಮ ನಾಟಕವನ್ನ ಸಾಕು ಮಾಡಿ ಈ ಕೂಡಲೇ ಈ ಪ್ರಕರಣವನ್ನ ಸಿಬಿಐಗೆ ವಹಿಸಿ. ಮೃತ ಅಧಿಕಾರಿಯ ಕುಟುಂಬಕ್ಕೆ, ಪರಿಶಿಷ್ಟ ಪಂಗಡ ಸುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ. ಭ್ರಷ್ಟ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕಿತ್ತೊಗೆದು ನಿಮ್ಮ ಸರ್ಕಾರದ ಮರ್ಯಾದೆ ಉಳಿಸಿಕೊಳ್ಳಿʼ ಎಂದು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News