ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ | ಸಿಎಂಗೆ ಕರವೇ ನಾರಾಯಣಗೌಡ ಅಭಿನಂದನೆ

Update: 2024-07-17 13:39 GMT

Photo : x/@siddaramaiah

ಬೆಂಗಳೂರು : ಖಾಸಗಿ ವಲಯದ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಧೇಯಕಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.

ಬುಧವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯರನ್ನು ಕರವೇ ಪದಾಧಿಕಾರಿಗಳೊಂದಿಗೆ ಖುದ್ದು ಭೇಟಿ ಮಾಡಿದ ನಾರಾಯಣಗೌಡ, ಪುಷ್ಪಗುಚ್ಚ ನೀಡಿ ಅಭಿನಂದಿಸಿದರು. ‘ಈ ಕಾರ್ಯವು ಎಂದೋ ಆಗಬೇಕಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕನ್ನಡ ಕಾಳಜಿ ಮತ್ತು ಬದ್ಧತೆಯಿಂದ ಈಗ ಅದು ಸಾಧ್ಯವಾಗುತ್ತಿದೆ ಎಂದು ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಹಾಕಿರುವ ನಾರಾಯಣಗೌಡ, ‘ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ವಿಧೇಯಕ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆಯಾಗಿ ಅಂಗೀಕಾರವಾಗಬೇಕಿದೆ. ಜನಪ್ರತಿನಿಧಿಗಳು ಸರ್ವಾನುಮತದಿಂದ ಈ ವಿಧೇಯಕವನ್ನು ಅನುಮೋದಿಸಿ, ಅಂಗೀಕಾರ ನೀಡುತ್ತಾರೆಂಬ ವಿಶ್ವಾಸವಿದೆ. ಕನ್ನಡಿಗರ ಬಹುದಿನಗಳ ಕನಸು ನನಸಾಗಲಿದೆ. ನಾಡಿನ ಮಕ್ಕಳು ನಿರುದ್ಯೋಗದಿಂದ ನರಳುವುದು ತಪ್ಪುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನಡೆಸಿದ ನಮ್ಮ ಚಳವಳಿಗೆ ಕೊನೆಗೂ ಫಲ ಸಿಕ್ಕಿದೆ. ಈ ಬೆಳವಣಿಗೆಗಳ ಮಧ್ಯೆ ಕೆಲ ಕಾರ್ಪೊರೇಟ್  ವಲಯದ ಪ್ರಚಾರಪ್ರಿಯ ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಅವರು ಎತ್ತುತ್ತಿರುವ ಆಕ್ಷೇಪಗಳನ್ನೂ ಗಮನಿಸಿದ್ದೇನೆ. ಇಂತಹ ಕೂಗುಮಾರಿಗಳಿಗೆ ಸರಕಾರ ಕವಡೆ ಕಾಸಿನ ಕಿಮ್ಮತ್ತೂ ನೀಡಕೂಡದು. ಇವರು ಕನ್ನಡದ್ರೋಹಿಗಳು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಿಧೇಯಕ ಜಾರಿಗೆ ತಂದರೆ ಕರ್ನಾಟಕದಲ್ಲಿರುವ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿರುವ ಉದ್ಯಮಗಳು ಬೇರೆ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ಒಬ್ಬ ಉದ್ಯಮಿ ಹೇಳಿದ್ದಾರೆ. ಇಂತಹ ಬ್ಲಾಕ್‍ಮೇಲ್ ಹೇಳಿಕೆಗಳನ್ನು ನಾವು ಹಲವಾರು ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ಇಂತಹ ಬ್ಲಾಕ್‍ಮೇಲರ್ ಗಳು ನಿಜವಾದ ಅರ್ಥದಲ್ಲಿ ದೇಶದ್ರೋಹಿಗಳು ಎಂದು ಅವರು ಟೀಕಿಸಿದ್ದಾರೆ.

‘ಕರ್ನಾಟಕಕ್ಕೆ ಈ ಕಾರ್ಪೊರೇಟ್ ಉದ್ಯಮಗಳು ಬರುವುದಕ್ಕೆ ಮುನ್ನವೂ ವೈಭವದ ನಾಡು ನಮ್ಮದಾಗಿತ್ತು. ಇವರು ಇದ್ದರೂ, ಇಲ್ಲದೇ ಇದ್ದರೂ ಕರ್ನಾಟಕ ಇತ್ತು, ಇದೆ ಮತ್ತು ಮುಂದೆಯೂ ಇರುತ್ತದೆ. ಕನ್ನಡನಾಡು ಎಂದಿಗೂ ದಿವಾಳಿಯಾಗುವುದಿಲ್ಲ. ನಿಜ ಹೇಳಬೇಕೆಂದರೆ ಈ ವ್ಯಾಪಾರಿ ಸಮೂಹ ಇಲ್ಲಿಗೆ ಬರುವುದಕ್ಕೆ ಮುನ್ನವೇ ನೆಮ್ಮದಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.

‘ಕಾರ್ಪೊರೇಟ್ ವ್ಯಾಪಾರಿಗಳು ಕರ್ನಾಟಕಕ್ಕೆ ಬರುತ್ತಿರುವುದು ಭೌಗೋಳಿಕ ವಾತಾವರಣ, ಇಲ್ಲಿನ ಜನರ ಹೃದಯ ವೈಶಾಲ್ಯತೆ ಮತ್ತು ಇಲ್ಲಿ ದೊರೆಯುವ ಸಂಪನ್ಮೂಲಗಳ ಕಾರಣಕ್ಕೆ. ಅವರು ಇಲ್ಲಿ ಬಂದು ವ್ಯಾಪಾರ ಮಾಡುತ್ತಾರೆಯೇ ಹೊರತು ಧರ್ಮ ಛತ್ರ ನಡೆಸುತ್ತಿಲ್ಲ. ಅವರು ನೆಲದ ಕಾನೂನನ್ನು, ಸಂಸ್ಕೃತಿಯನ್ನು, ಜನರ ಬದುಕನ್ನು ಗೌರವಿಸುವುದನ್ನು ಕಲಿಯಬೇಕು’ ಎಂದು ನಾರಾಯಣಗೌಡ ಸಲಹೆ ಹೇಳಿದ್ದಾರೆ.

‘ಉದ್ಯೋಗ ಮೀಸಲಾತಿ ವಿಧೇಯಕ ಕುರಿತಾಗಿ ಅಪಸ್ವರ ಎತ್ತುತ್ತಿರುವವರನ್ನು ಗಮನಿಸುತ್ತಿದ್ದೇವೆ. ಇವರು ಪ್ರತಿನಿಧಿಸುವ ಸಂಸ್ಥೆಗಳ ವಿರುದ್ಧ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ. ಕನ್ನಡಿಗರನ್ನು ವಿರೋಧಿಸುವ ಇಂತಹ ದೇಶದ್ರೋಹಿಗಳನ್ನು ಹೇಗೆ ವಿರೋಧಿಸುವುದು ಎಂಬುದು ಗೊತ್ತಿದೆ. ಹೀಗಾಗಿ ಇವರು ತಮ್ಮ ನಾಲಿಗೆ ಬಿಗಿಹಿಡಿದು ಮಾತಾಡುವುದು ಒಳ್ಳೆಯದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ರಾಜ್ಯ ಸರಕಾರ ಇಂತಹ ಭ್ರಷ್ಟ, ನಾಡದ್ರೋಹಿ, ದೇಶದ್ರೋಹಿ, ಸಮಾಜಘಾತಕ ಶಕ್ತಿಗಳ ಅರಚಾಟಕ್ಕೆ ಧೃತಿಗೆಡಬಾರದು. ನಿಮ್ಮನ್ನು ಆಯ್ಕೆ ಮಾಡಿರುವುದು ಕರ್ನಾಟಕದ ಸಾಮಾನ್ಯ ಜನತೆಯೇ ಹೊರತು ಈ ಕಾರ್ಪೊರೇಟ್ ಕುಳಗಳಲ್ಲ. ಈಗ ನಡೆಯುತ್ತಿರುವ ಅಧಿವೇಶನದಲ್ಲೇ ವಿಧೇಯಕ ಮಂಡನೆಯಾಗಬೇಕು. ಸರ್ಕಾರದೊಂದಿಗೆ ನಾವು ಇರುತ್ತೇವೆ. ಅದ್ಯಾರು ತಡೆಯುವರೋ ನೋಡೋಣ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News