ಕೊಳ್ಳೇಗಾಲ | ತಮಿಳುನಾಡಿಗೆ ಅಕ್ರಮವಾಗಿ ʼಅಂಬರ್‌ ಗ್ರೀಸ್ʼ ಸಾಗಾಟ : ಇಬ್ಬರ ಬಂಧನ

Update: 2024-10-22 11:09 GMT

ಅಂಬರ್‌ ಗ್ರೀಸ್

ಕೊಳ್ಳೇಗಾಲ : ಅಕ್ರಮವಾಗಿ ತಿಮಿಂಗಲ ವಾಂತಿ (ಅಂಬರ್‌ ಗ್ರೀಸ್) ಸಾಗಾಣಿಕೆ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 4 ಕೆಜಿ 386 ಗ್ರಾಂ ತೂಕದ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಜಪ್ತಿ ಮಾಡಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಮಾರ್ಗವಾಗಿ ತಮಿಳುನಾಡಿಗೆ ಸೋಮವಾರ ತಡರಾತ್ರಿ ಸ್ವಿಪ್ಟ್ ಕಾರಿನಲ್ಲಿ ಅಕ್ರಮವಾಗಿ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಯನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಪಟ್ಟಣದ ಬಳಿ ತಪಾಸಣೆ ಮಾಡಿದ ಪೊಲೀಸರು, ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳನ್ನು  ಮೈಸೂರಿನ ಅಶೋಕಪುರದ ವಸಂತ ಕುಮಾರ್, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಆರೂರು ಗ್ರಾಮದ ವೈರಮುಡಿ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News