ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ; 30 ಕೋಟಿಗೂ ಅಧಿಕ ಆಸ್ತಿ ಪತ್ತೆ..!

Update: 2023-08-17 15:17 GMT

ಬೆಂಗಳೂರು, ಆ.17:ಆದಾಯಕ್ಕಿಂದ ಅಧಿಕ ಆಸ್ತಿ ಸಂಪಾದನೆ ಆರೋಪ ಸಂಬಂಧ ರಾಜ್ಯದ 14 ವಿವಿಧ ಇಲಾಖೆಯ ಸರಕಾರಿ ಅಧಿಕಾರಿಗಳ ಕಚೇರಿ, ನಿವಾಸಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಬರೋಬ್ಬರಿ 30 ಕೋಟಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಈ ನಡುವೆ ಓರ್ವ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ಬಳಿಯೇ 1.80 ಕೋಟಿ ರೂ.ಮೌಲ್ಯದ ಚಿನ್ನಾಭರಣ, ಆಸ್ತಿ ಬೆಳಕಿಗೆ ಬಂದಿದೆ.

ಗುರುವಾರ ಬೆಳ್ಳಂಬೆಳಗ್ಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಧಾರವಾಡ ಹಾಗೂ ಬೀದರ್ ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಎಂ.ಎಸ್.ಬಹುಮಹಡಿ ಕಟ್ಟಡದಲ್ಲಿರುವ ಕಂದಾಯ ಇಲಾಖೆಯ ಗ್ರೇಡ್-2 ತಹಶೀಲ್ದಾರ್ ಶಿವರಾಜ್ ಅವರಿಗೆ ಸಂಬಂಧಿಸಿದ 12 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಬರೋಬ್ಬರಿ ಚಿನ್ನಾಭರಣ, ಜಮೀನು, ಬ್ಯಾಂಕಿನ ಠೇವಣಿ ಸೇರಿದಂತೆ 4.15 ಕೋಟಿ ರೂ.ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದು ಇವರ ಆದಾಯಕ್ಕಿಂತ ಶೇ.315%ರಷ್ಟು ಹೆಚ್ಚಿದೆ.

ಬಿಬಿಎಂಪಿ ಮಹದೇವಪುರ ವಲಯದ ಕಂದಾಯ ಇನ್ಸ್‍ಪೆಕ್ಟರ್ ಎಸ್.ನಟರಾಜ್ ಅವರಿಗೆ ಸಂಬಂಧಿಸಿದ 4 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದಾಗ 4.61 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಜಮೀನು, ಬ್ಯಾಂಕಿನ ಠೇವಣಿ ಸೇರಿದಂತೆ ಇನ್ನಿತರೆ ಆಸ್ತಿ ದಾಖಲೆ ಪತ್ತೆಯಾಗಿದ್ದರು, ಇವರು ಸಹ ಆದಾಯಕ್ಕಿಂತ ಶೇ.391%ರಷ್ಟು ಆಸ್ತಿ ಸಂದಾಪನೆ ಮಾಡಿದ್ದಾರೆ.

ಬೆಂಗಳೂರಿನ ಯಲಹಂಕದ ಚಿಕ್ಕಜಾಲ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಪತಿ ಅವರಿಗೆ ಸೇರಿದ ತಾಲೂಕಿನ ಕೋಡೂರು ಗ್ರಾಮದ ತೋಟದ ಮನೆ ಸೇರಿದಂತೆ ಆರು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದಾಗ 3.95 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಈತನೂ ತನ್ನ ಆದಾಯಕ್ಕಿಂತ ಶೇಕಡ 270%ರಷ್ಟು ಆಸ್ತಿ ಸಂಪಾನದೆ ಮಾಡಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ.ಮಹೇಶ್ ಹಾಗೂ ಪತ್ನಿ ಬಿಬಿಎಂಪಿ ಎಇ ಎಚ್.ಭಾರತಿ ಅವರ ಜಯನಗರದಲ್ಲಿನ ಮನೆ ಸೇರಿ ಮೂರು ಕಡೆಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಈ ವೇಳೆ 1.8 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಮಹೇಶ್ ಸಹ ತನ್ನ ಆದಾಯಕ್ಕಿಂತ ಶೇ.211%ರಷ್ಟು ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ತಿಳಿಸಿದೆ.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಿದ ಜಂಟಿ ನಿರ್ದೇಶಕ ಕೆ.ಎನ್.ನಾಗರಾಜು ಅವರ ಕಚೇರಿ, ನಿವಾಸ ಸೇರಿದಂತೆ ಆರು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧಿಸಿದ್ದು, ಈ ವೇಳೆ 3,41 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರು ತಮ್ಮ ಆದಾಯಕ್ಕಿಂತ ಶೇ.138% ರಷ್ಟು ಆಸ್ತಿ ಹೊಂದಿದ್ದಾರೆ.

ಮಡಿಕೇರಿಯ ಕಂದಾಯ ಇಲಾಖೆ ಹೆಚ್ಚುವರಿ ಡಿಸಿ ಡಾ.ನಂಜುಂಡೇಗೌಡ ಅವರ ಕಚೇರಿ, ಮನೆ ಸೇರಿ ಐದು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ 3,53,43,518 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಈತನೂ ಆದಾಯಕ್ಕಿಂತ ಶೇ.243% ರಷ್ಟು ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾಋಎ.

ಮೈಸೂರಿನ ಹಾರಂಗಿ ಜಲಾಶಯದ ಅಧೀಕ್ಷಕ ಇಂಜಿನಿಯರ್ ಕೆ.ಕೆ.ರಘುಪತಿ ಅವರ ಮೈಸೂರಿನ ನಿವಾಸ ಸೇರಿದಂತೆ ಮೂರು ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ 3.66 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರ ಆದಾಯಕ್ಕಿಂತ ಶೇ.205ರಷ್ಟು ಆಸ್ತಿ ಸಂಪಾದನೆ ಮಾಡಲಾಗಿದ್ದು, ಶೋಧ ಕಾರ್ಯ ಮುಂದುವರೆಸಲಾಗಿದೆ.

ಭದ್ರವತಿಯ ಚೆನ್ನಗಿರಿ ವಲಯದ ಆರ್‍ಎಫ್‍ಒ ಎಸ್.ಸತೀಶ್ ಅವರ ಕಚೇರಿ, ನಿವಾಸದ ಮೇಲೆ ದಾಳಿ ನಡೆಸಿದಾಗ 1.62 ಆಸ್ತಿ ದಾಖಲೆ ಪತ್ತೆಯಾಗಿದ್ದು, ಇವರು ತಮ್ಮ ಆದಾಯಕ್ಕಿಂತ ಶೇ.146%ರಷ್ಟು ಆಸ್ತಿ ಹೊಂದಿದ್ದಾರೆ. ಅದೇ ರೀತಿ, ಕೊಪ್ಪಳದ ನಿರ್ಮಿತಿ ಕೇಂದ್ರದಲ್ಲಿ ಕಚೇರಿ ವ್ಯವಸ್ಥಾಪಕರಾಗಿರುವ ಮಂಜುನಾಥ ಬನ್ನಿಕೊಪ್ಪ ಕೆಲಸ ಮಾಡುವ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಿದಾಗ 2.79 ಕೋಟಿ ರೂ. ಆಸ್ತಿ ದಾಖಲೆ ಸಿಕ್ಕಿದ್ದು, ಶೇ.136%ರಷ್ಟು ತಮ್ಮ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆ.

ಮುಂದುವರಿದ ಶೋಧ

*ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ ಸಂತೋಷ್ ಆನಿ ಶೆಟ್ಟರ, ಬಿಬಿಎಂಪಿ ಎಇ ಎಚ್.ಭಾರತಿ, ತುಮಕೂರಿನ ಜನಸ್ಪಂದನ ಕಚೇರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೂವನಹಳ್ಳಿ ನಾಗರಾಜ್ ಅವರ ಮನೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದ್ದು, ಇದುವರೆಗೂ ಆಸ್ತಿ ಮೌಲ್ಯ ತಿಳಿದುಬಂದಿಲ್ಲ...

ಪೊಲೀಸ್ ಕಾನ್ಸ್ ಟೇಬಲ್ ಬಳಿಯೇ 1.80 ಕೋಟಿ..!

ಚಿಟಗುಪ್ಪ ಪೊಲೀಸ್ ಠಾಣೆಯ ಕಾನ್ಸ್‍ಟೇಬಲ್ ವಿಜಯಕುಮಾರ ಎಂಬುವರ ಎರಡು ಮನೆಗಳು ಸೇರಿದಂತೆ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದಾಗ ಚಿನ್ನಾಭರಣ, ಮನೆ, ದುಬಾರಿ ಬೆಲೆಯ ವಸ್ತುಗಳು, ಠೇವಣಿ ಸೇರಿದಂತೆ 1.80 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ತಮ್ಮ ಆದಾಯಕ್ಕಿಂತಲೂ ಶೇ.136%ರಷ್ಟು ಆಸ್ತಿ ಹೊಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಹೇಳಿದೆ.

ಮತ್ತೋರ್ವ ಕಾನ್ಸ್ ಟೇಬಲ್ ಮನೆಯಲ್ಲಿ ಮುಂದುವರೆದ ಶೋಧ

ಧಾರವಾಡ ಟೌನ್ ಠಾಣೆಯ ಪೊಲೀಸ್ ಕಾನ್ಸ್‍ಟೇಬಲ್ ಶಿವಾನಂದ ಎಂ., ಎಂಬುವರು ನಿವಾಸ, ಕಚೇರಿ ಸೇರಿದಂತೆ ವಿವಿಧೆಡೆ ಗುರುವಾರ ಏಕಕಾಲಕ್ಕೆ ದಾಳಿನಡೆಸಿದರುವ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದು, ಸದ್ಯ ಇವರ ಆಸ್ತಿ ಮೌಲ್ಯದ ತಿಳಿದುಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News