ರೈತನಿಗೆ ಇರುವಷ್ಟೂ ಕನಿಷ್ಠ ಜ್ಞಾನ ವಿಪಕ್ಷ ನಾಯಕನಿಗೆ ಇಲ್ಲದಿರುವುದು ದೌರ್ಭಾಗ್ಯ : ಆರ್.ಅಶೋಕ್ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ

Update: 2024-10-14 15:04 GMT

ಅಶೋಕ್/ಕೃಷ್ಣ ಬೈರೇಗೌಡ

ಬೆಂಗಳೂರು: ‘ಜಿಎಸ್ಟಿ ಸಭೆಗೆ ಹೋಗುವ ಪ್ರತಿನಿಧಿ ಕಡಲೆಕಾಯಿ ತಿನ್ನುತ್ತಾರಾ?’ ಎಂದು ಪ್ರಶ್ನಿಸಿರುವ ವಿಪಕ್ಷ ಆರ್.ಅಶೋಕ್ ಅವರೇ, ‘ಜಿಎಸ್ಟಿ ಕಮಿಟಿ ಹಾಗೂ ಹಣಕಾಸು ಆಯೋಗ ಇವೆರಡೂ ಬೇರೆ ಬೇರೆ’ ಎಂಬ ಕುರಿತು ಕಡಲೆಕಾಯಿ ಬೆಳೆಯುವ ನಮ್ಮ ನಾಡಿನ ಸಾಮಾನ್ಯ ರೈತನಿಗೆ ಇರುವಷ್ಟೂ ಕನಿಷ್ಠ ಜ್ಞಾನ ವಿಪಕ್ಷ ನಾಯಕನಾದ ತಮಗೆ ಇಲ್ಲದಿರುವುದು ಈ ನಾಡಿನ ದೌರ್ಭಾಗ್ಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿರುಗೇಟು ನೀಡಿದ್ದಾರೆ.

ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಅಶೋಕ್ ಅವರೇ ಮೊದಲು ತಾವು ಜಿಎಸ್ಟಿ ಎಂದರೆ ಏನು? ಜಿಎಸ್ಟಿ ಸಭೆಯಲ್ಲಿ ಚರ್ಚೆಯಾಗುವ ವಿಚಾರಗಳೇನು ಎಂಬ ಕುರಿತು ತಿಳಿದುಕೊಳ್ಳಿ. ಜಿಎಸ್ಟಿ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಸರಕು ಮತ್ತು ಸೇವಾ ತೆರಿಗೆಯು ಒಂದು ಏಕರೂಪದ ಅಪ್ರತ್ಯೇಕ್ಷ ತೆರಿಗೆಯಾಗಿದೆ. ಇದು ಪ್ರಸ್ತುತ ಕೇಂದ್ರ ಹಾಗೂ ರಾಜ್ಯಗಳ ಅಪ್ರತ್ಯೇಕ್ಷ ತೆರಿಗೆಗಳಾದ ವ್ಯಾಟ್, ಸಿಎನ್‍ವ್ಯಾಟ್, ಮುಂತಾದವುಗಳ ಬದಲಿಗೆ ಜಿಎಸ್ಟಿ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಜಿಎಸ್ಟಿ ತೆರಿಗೆ ವ್ಯವಸ್ಥೆಯು ಕೇಂದ್ರ ಸರಕು ಮತ್ತು ಸೇವಾ ತೆರಿಗೆ, ರಾಜ್ಯ ಸರಕು ಮತ್ತು ಸೇವಾ ತೆರಿಗೆ ಹಾಗೂ ಸಮಗ್ರ ಸರಕು ಮತ್ತು ಸೇವಾ ತೆರಿಗೆಯನ್ನು ಒಳಗೊಂಡಿರುತ್ತದೆ. ಇನ್ನೂ ಜಿಎಸ್ಟಿ ಸಭೆಯಲ್ಲಿ ಯಾವ ಸರಕು ಅಥವಾ ಸೇವಾ ವಿಚಾರಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು, ಅದರ ಮೇಲಿನ ತೆರಿಗೆ ಮೌಲ್ಯ ಯಾವ ಪ್ರಮಾಣದಲ್ಲಿರಬೇಕು? ಎಂದು ಚರ್ಚಿಸಲಾಗುತ್ತೆಯೇ ವಿನಃ ಆ ಸಭೆಯಲ್ಲಿ ಎದ್ದು ನಿಂತು ನಮಗೆ ತೆರಿಗೆ ಪಾಲಿನಲ್ಲಿ ಮೋಸವಾಗುತ್ತಿದೆ, ಹೀಗಾಗಿ ನಮ್ಮ ಪಾಲನ್ನು ಹೆಚ್ಚಿಸಿ ಎಂದು ಹಕ್ಕೊತ್ತಾಯ ಮಾಡಲಾಗದು? ಎಂದು ಅವರು ಹೇಳಿದ್ದಾರೆ.

ಹಣಕಾಸು ಆಯೋಗವು ಏನು ಮಾಡುತ್ತದೆ ಎಂಬುದನ್ನೂ ಅರಿಯಿರಿ ಅಶೋಕ್ ಅವರೇ. ದೇಶದ ವಿವಿಧ ರಾಜ್ಯಗಳ ಜನರಿಂದ ಸಂಗ್ರಹಿಸುವ ಕೇಂದ್ರ ತೆರಿಗೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಎಷ್ಟೆಷ್ಟು ಹಂಚಿಕೊಳ್ಳಬೇಕು ಮತ್ತು ವಿವಿಧ ರಾಜ್ಯಗಳಿಗೆ ಎಷ್ಟು ನೀಡಬೇಕು ಎಂಬುದನ್ನು ನಿರ್ಧರಿಸುವ ಸಾಂವಿಧಾನಿಕ ಸಂಸ್ಥೆ ಹಣಕಾಸು ಆಯೋಗ ಎಂದು ಕೃಷ್ಣ ಬೈರೇಗೌಡ ಗಮನ ಸೆಳೆದಿದ್ದಾರೆ.

ಜಿಎಸ್ಟಿ ವ್ಯವಸ್ಥೆ ಜಾರಿಯಾದ ನಂತರ ರಾಜ್ಯಗಳ ತೆರಿಗೆ ಸ್ವಾಯತ್ತತೆಗೆ ಭಾರೀ ಪೆಟ್ಟು ಬಿದ್ದಿದೆ ಎಂಬುದು ನಿಜ. ಈ ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ ರಾಜ್ಯಗಳು ತಮ್ಮದೇ ಸ್ವಂತ ತೆರಿಗೆ ಆದಾಯವನ್ನು ಹೊಂದಿದ್ದವು. ಆ ಆದಾಯದ ಮೂಲಕ ಹಲವಾರು ಪ್ರಗತಿಪರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ತಮ್ಮ ರಾಜ್ಯದಲ್ಲಿ ಯಾವ ಸರಕು ಅಥವಾ ಸೇವೆಗೆ ಎಷ್ಟು ತೆರಿಗೆ ವಿಧಿಸಬಹುದು ಎಂಬುದನ್ನು ಆಯಾ ರಾಜ್ಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ಮಾಡುತ್ತಿದ್ದವು. ಆದರೆ, ಕೇಂದ್ರ ಸರಕಾರ ಜಿಎಸ್ಟಿ ಹೆಸರಿನಲ್ಲಿ ಅವೆಲ್ಲವನ್ನೂ ತನ್ನ ಹಿಡಿತದಲ್ಲಿರುವ ಜಿಎಸ್ಟಿ ಮಂಡಳಿ ನಿರ್ಧಾರ ಮಾಡುವ ಹಾಗೆ ಮಾಡಿದ ಮೇಲೆ, ರಾಜ್ಯಗಳ ಈ ಹಕ್ಕು ಕಿತ್ತುಕೊಂಡಿತು. ಪರಿಣಾಮ ರಾಜ್ಯಗಳ ಪಾಲಿಗೆ ಭಾರೀ ನಷ್ಟವಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಉಲ್ಲೇಖಿಸಿದ್ದಾರೆ.

ಕೇಂದ್ರದ ತೆರಿಗೆಗೆ ಕರ್ನಾಟಕದ ಕೊಡುಗೆ ಹಾಗೂ ಕೇಂದ್ರ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಇನ್ನೊಮ್ಮೆ ಗಮನಿಸಿ, ಪ್ರತಿ ವರ್ಷ ಕೇಂದ್ರದ ಒಟ್ಟು ತೆರಿಗೆ ಆದಾಯಕ್ಕೆ ಕರ್ನಾಟಕದ ಪಾಲು ಸುಮಾರು 4 ಲಕ್ಷ ಕೋಟಿ ರೂಪಾಯಿ. ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಕೇವಲ ಶೇ.5 ರಷ್ಟಿದ್ದರೂ ರಾಷ್ಟ್ರೀಯ ಜಿಡಿಪಿಗೆ ನಮ್ಮ ಕೊಡುಗೆ ಶೇ.8.4. ಒಟ್ಟಾರೆ ದೇಶಕ್ಕೆ ಜಿಎಸ್ಟಿ ಕೊಡುಗೆಯಲ್ಲಿ ರಾಜ್ಯವು 2ನೆ ಸ್ಥಾನದಲ್ಲಿದೆ. ಆದರೆ, ನಾವು ಕೊಡುವ ಒಂದು ರೂಪಾಯಿಗೆ ಪ್ರತಿಯಾಗಿ ನಮ್ಮ ರಾಜ್ಯ ಪಡೆಯುತ್ತಿರುವ ಪಾಲು ಕೇವಲ 15 ಪೈಸೆ ಮಾತ್ರ ಎಂದು ಅವರು ಹೇಳಿದ್ದಾರೆ.

14ನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ.4.713 ಎಂದು ನಿಗದಿಪಡಿಸಿತ್ತು. 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ.3.647ಕ್ಕೆ ಇಳಿಸಿತು. ಇದರಿಂದ 2021-26 ರವರೆಗಿನ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು 62,275 ಕೋಟಿ ರೂ.ಗಳನ್ನು ಕರ್ನಾಟಕ ಕಳೆದುಕೊಂಡಿದೆ. ಈ ಅನ್ಯಾಯವನ್ನು ಪರಿಗಣಿಸಿದ್ದ ಹಣಕಾಸು ಆಯೋಗ ವಿಶೇಷ ಅನುದಾನದ ರೂಪದಲ್ಲಿ 5,495 ಕೋಟಿ ರೂ.ನೀಡುವಂತೆ ಶಿಫಾರಸು ಮಾಡಿತ್ತು. ಇದನ್ನು ಕೂಡಾ ಕೇಂದ್ರ ಸರಕಾರ ನೀಡದೆ ಅನ್ಯಾಯ ಎಸಗಿದೆ. ಈ ಎಲ್ಲ ನಷ್ಟಗಳನ್ನು ಸೇರಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ 79,770 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಕೃಷ್ಣ ಬೈರೇಗೌಡ ದೂರಿದ್ದಾರೆ.

ರಾಜ್ಯದ ಕಳಸಾ ಬಂಡೂರಿ, ಮೇಕೆದಾಟು ಯೋಜನೆಗಳಿಗೆ ಕೇಂದ್ರ ಸರಕಾರ ಈವರೆಗೆ ಅನುಮತಿ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‍ನಲ್ಲಿ ಘೋಷಿಸಿದ್ದ 5200 ಕೋಟಿ ರೂಪಾಯಿ ಹಣದಲ್ಲಿ ಬಿಡಿಗಾಸೂ ಬಂದಿಲ್ಲ. ಕೇಂದ್ರದ ಇಂತಹ ಅನ್ಯಾಯದ ವಿರುದ್ಧ ಮಲತಾಯಿ ಧೋರಣೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ನಿರಂತರವಾಗಿ ಧ್ವನಿ ಎತ್ತುತ್ತಲೇ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಈ ಬಗ್ಗೆ ಸಂಸತ್‍ನಲ್ಲಿ ದನಿ ಎತ್ತಿದ ಒಬ್ಬೇ ಒಬ್ಬ ಬಿಜೆಪಿ ಸಂಸದರನ್ನು ಈ ನಾಡು ಕಂಡಿಲ್ಲ. ಬಿಜೆಪಿಯ 27 ಸಂಸದರಿದ್ದರೂ ಉಪಯೋಗವಾಗಲಿಲ್ಲ. ಸ್ವತಃ ಹಣಕಾಸು ಸಚಿವೆಯನ್ನು ಇದೇ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಿದ್ದಿರಿ. ಆದರೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ನಿಂತಿಲ್ಲ. ವಿಪಕ್ಷ ನಾಯಕರ ಇಂತಹ ಅಪ್ರಬುದ್ಧ ಹೇಳಿಕೆಗೆ ಸರಕಾರದ ಜವಾಬ್ದಾರಿಯು ಸ್ಥಾನದಲ್ಲಿರುವ ನಾನು ಉತ್ತರಿಸಲೇಬೇಕಾಗಿರುವ ಅನಿವಾರ್ಯವೂ ಮತ್ತೊಂದು ದುರಂತ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News