ವಿಜಯೇಂದ್ರ ವಿರುದ್ಧದ ಪ್ರಕರಣ ಈಡಿ ಕಣ್ಣಿಗೆ ಕಾಣುತ್ತಿಲ್ಲವೇ?: ಪ್ರಿಯಾಂಕ್ ಖರ್ಗೆ

Update: 2024-10-09 18:12 GMT

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಜಾರಿ ನಿರ್ದೇಶನಾಲಯ(ಈಡಿ)ದವರ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ ವಿಜಯೇಂದ್ರ ಸಲ್ಲಿಸಿರುವ ಅಫಿಡವಿಟ್ ಅಲ್ಲಿ ಅವರ ಮೇಲಿರುವ ಪ್ರಕರಣಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಎಂದು ಹೇಳಿದರು.

2022ರ ಸೆ.16ರಂದು ಲೋಕಾಯುಕ್ತದಿಂದ ವಿಜಯೇಂದ್ರ ಮೇಲೆ ಭ್ರಷ್ಟಾಚಾರ ವಿರೋಧಿ ಕಾಯ್ದೆಯಡಿ ಸೆಕ್ಷನ್ 7 ಎ, 9, 10, 13 ಹಾಗೂ 383, 384, 415, 418, 420 ಕಾಯ್ದೆಗಳಡಿ ದೂರು ದಾಖಲಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇವರಿಗೆ ಸಮನ್ಸ್ ಜಾರಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಕೇಳುವ ಬಿಜೆಪಿಗರೇ ಮೊದಲು ವಿಜಯೇಂದ್ರ ಅವರಿಂದ ರಾಜಿನಾಮೆ ಕೊಡಿಸಿ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಭಾಗಿಯಾಗಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ರಾಜಿನಾಮೆ ಕೇಳಿ. ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಿಎ ಸೈಟ್ ವಿಚಾರದಲ್ಲಿ ಅಕ್ರಮ ಎಸಗಿದ್ದಾರೆ. ಇವರ ರಾಜಿನಾಮೆ ಕೇಳಿ. ಆನಂತರ ನಮ್ಮ ಸಿಎಂ ಬಗ್ಗೆ ಮಾತನಾಡಿ ಎಂದು ಅವರು ತಿರುಗೇಟು ನೀಡಿದರು.

ಬಿಜೆಪಿಗರೇ ಮೂರು ಕಡೆ ಸಭೆ ನಡೆಸಿ ವಿಜಯೇಂದ್ರ ನಾಯಕತ್ವವನ್ನು ಪ್ರಶ್ನೆ ಮಾಡಿದ್ದಾರೆ. ಇವರ ನಾಯಕತ್ವವನ್ನು ಯಾರೂ ಒಪ್ಪಿಕೊಂಡಿಲ್ಲ. ಈಶ್ವರಪ್ಪ ನಿಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಬಿಜೆಪಿಯ ನೀತಿ ಪಾಠ ನೋಡಿದರೆ ನರಿಗಳು ನ್ಯಾಯ ಹೇಳಿದಂತೆ ಭಾಸವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಗಾರಿದರು.

2010ರಲ್ಲಿ ಔಟ್ ಲುಕ್ ಪತ್ರಿಕೆಯ ಮುಖಪುಟದಲ್ಲಿ ಯಡಿಯೂರಪ್ಪ ಅವರ ಫೋಟೊ ಹಾಕಿ ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಎಂದು ಹಾಕಿತ್ತು. ರಾಷ್ಟ್ರಮಟ್ಟದಲ್ಲಿ ನಮ್ಮ ರಾಜ್ಯದ ಮಾನ ಹರಾಜು ಹಾಕಿದ್ದು ಇದೇ ಬಿಜೆಪಿಯವರು. ಭ್ರಷ್ಟ ಇತಿಹಾಸ ಹೊಂದಿರುವ ಬಿಜೆಪಿಯವರು ನಮಗೆ ನೀತಿ ಪಾಠ ಹೇಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರ್ದಾರ್ ವಲ್ಲಭಬಾಯಿ ಪಟೇಲ್ ಬಿಟ್ಟರೆ ನಾನೇ ಶಕ್ತಿಯುತ ಗೃಹ ಸಚಿವ ಎಂದು ಅಮಿತ್ ಶಾ ಬಿಂಬಿಸಿಕೊಳ್ಳುತ್ತಾರೆ. ಕಳೆದ 10 ವರ್ಷಗಳಲ್ಲಿ ಸುಮಾರು 5,297 ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ಈ.ಡಿ ಸಂಸ್ಥೆ ದಾಖಲಿಸಿದೆ. ಇದರಲ್ಲಿ 40 ಪ್ರಕರಣಗಳು ಮಾತ್ರ ರುಜುವಾತಾಗಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ತನಿಖಾ ಸಂಸ್ಥೆಗಳ ದುರುಪಯೋಗ: ಸಿದ್ದರಾಮಯ್ಯ ಮೇಲೆ ದೂರು ನೀಡಿದ ಟಿ.ಜೆ.ಅಬ್ರಹಾಂ ಅವರೇ ವಿಜಯೇಂದ್ರ ವಿರುದ್ಧವೂ ದೂರು ನೀಡಿರುವುದು. ಆದರೆ ಇದುವರೆಗೂ ವಿಜಯೇಂದ್ರ ವಿರುದ್ಧ ಕ್ರಮವಿಲ್ಲ. ಆದರೆ ಸಿದ್ದರಾಮಯ್ಯ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೇಂದ್ರ ಬಿಜೆಪಿ ಸರಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಕಲ್ಕತ್ತಾ ಕಂಪೆನಿಯಿಂದ ಸುಮಾರು 12 ಕೋಟಿ ರೂ.ಗಳಿಗೂ ಹೆಚ್ಚು ಹಣ ವಿಜಯೇಂದ್ರಗೆ ಸಂದಾಯವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಇರುವ ಖಾತೆ ಸಂಖ್ಯೆ 50100016772791 ಯಾರದ್ದು ವಿಜಯೇಂದ್ರ ಅವರೇ? ರಾಜಗರನಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್, ನೌಟಂಕ್ ಪ್ರೈವೇಟ್ ಲಿಮಿಟೆಡ್, ಗಣ ನಾಯಕ ಕಮಾಡಿಟಿ ಟ್ರೇಡ್, ಜಗದಾಂಭ, ರೆಮ್ಯಾಕ್ ಡಿಸ್ಟ್ರಿಬ್ಯೂಟರ್ ಕಂಪೆನಿ, ಸಕಂಬಾರಿ, ಸ್ಟಾಟ್ರಜಿಕ್ ವಿನ್ ಫ್ರಾ, ವಿಎಸ್‌ಎಸ್ ಎಸ್ಟೇಟ್ ಕಂಪೆನಿಗಳು ಸೇರಿ ಅನೇಕ ಕಂಪೆನಿಗಳಿಗೂ ನಿಮಗೂ ಏನೂ ಸಂಬಂಧ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ವಿಜಯೇಂದ್ರ ಮೇಲೆ ಯಾಕೆ ಈಡಿ ಕ್ರಮ ತಗೆದುಕೊಳ್ಳುತ್ತಿಲ್ಲ ಎಂದರೆ, ಇದರ ವಿಸ್ತಾರ ಹೆಚ್ಚಿರಬಹುದು. ಬಿಜೆಪಿ ಶಾಸಕ ಯತ್ನಾಳ್ ಹೇಳಿದಂತೆ ಮಾರಿಷಸ್ ಸೇರಿದಂತೆ ಬೇರೆ ಕಡೆಗೂ ವಿಸ್ತಾರವಾಗಿರಬಹುದು. ಅಥವಾ ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿರಬಹುದು. ಯಡಿಯೂರಪ್ಪ ಕಣ್ಣೀರು ಹಾಕುತ್ತಾ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲು ಇದೇ ಪ್ರಕರಣ ಕಾರಣ ಎಂದು ಅವರು ಹೇಳಿದರು.

ವಿಜಯೇಂದ್ರ ಪದೇ ಪದೇ ಮಾರಿಷಸ್, ದುಬೈಗೆ ಏಕೆ ಹೋಗುತ್ತಾರೆ ಎಂದು ಯತ್ನಾಳ್ ಕೇಳಿರುವ ಪ್ರಶ್ನೆಗೆ ಅವರೇ ಸ್ಪಷ್ಟಣೆ ನೀಡಬೇಕು. ಕಾಂಗ್ರೆಸ್ ಸರಕಾರ ಬೀಳಿಸಲು 1,200 ಕೋಟಿ ರೂ.ಯಾರು ತಯಾರು ಮಾಡಿಟ್ಟುಕೊಂಡಿದ್ದಾರೆ? ಯತ್ನಾಳ್ ಹೇಳಿಕೆಗಳನ್ನು ಗಮನಿಸಿದರೆ ಇದು ವಿಜಯೇಂದ್ರ ಇರಬಹುದೇ ಎಂದು ಅನುಮಾನ ಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನೈತಿಕತೆ ಎನ್ನುವ ಹೊಸ ಪದ ಕಲಿತಿದ್ದಾರೆ: ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎನ್ನುವ ಹೊಸ ಪದ ಕಲಿತಿರುವ ಬಿಜೆಪಿಗರು ತಮ್ಮ ನೈತಿಕತೆಯ ಬಗ್ಗೆ ಹೇಳುತ್ತಲೇ ಇಲ್ಲ. ಬೀದಿಗೆ ಇಳಿಯುತ್ತೇವೆ ಎಂದವರು ಒಮ್ಮೆಯೂ ಬೀದಿಗೆ ಇಳಿದಿಲ್ಲ. ನೈತಿಕತೆ ಬಗ್ಗೆ ಮಾತನಾಡುತ್ತಾರೆ ಎಂದರೆ ಮೊದಲು ವಿಜಯೇಂದ್ರ ರಾಜಿನಾಮೆ ನೀಡಬೇಕಾಗುತ್ತದೆ. ಮುಖ್ಯಮಂತ್ರಿ ವಿರುದ್ಧ ಇಸಿಆರ್ ದಾಖಲಾಗಿರುವ ಕಾರಣಕ್ಕೆ ರಾಜಿನಾಮೆ ಕೊಡಬೇಕು ಎನ್ನುವ ನೀವು, ನಿಮ್ಮ ಬಗ್ಗೆ ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ. ನೀವು ಹೇಗೆ ಶಾಸಕರು, ಬಿಜೆಪಿ ರಾಜ್ಯ ಅಧ್ಯಕ್ಷರು ಆಗೀದ್ದೀರಿ? ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News