ಮೈಸೂರು: ಮಹಿಷ ದಸರಾ ಉತ್ಸವಕ್ಕೆ ವಿಜೃಂಭಣೆಯ ಚಾಲನೆ

Update: 2023-10-13 06:34 GMT

ಮೈಸೂರು, ಅ.13: ಮೈಸೂರು ನಗರದ ಪುರಭವನದ ಆವರಣದಲ್ಲಿ ಶುಕ್ರವಾರ ಆಯೋಜಿಸಿರುವ 'ಮಹಿಷ ದಸರಾ ಉತ್ಸವ'ಕ್ಕೆ ವಿಜೃಂಭಣೆಯ ಚಾಲನೆ ದೊರೆಯಿತು.

ವಿವಾವದ ನಡುವೆಯೂ ಪಟ್ಟು ಬಿಡದ ಮೂಲನಿವಾಸಿಗಳು ಮಹಿಷ ದಸರಾ ಉತ್ಸವವನ್ನು ಸಡಗರ ಸಂಭ್ರಮಗಳ ನಡುವೆ ಅಚರಿಸಿ ಮಹಿಷ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಮಿಸಿದರು.

ವೇದಿಕೆ ಮುಂಭಾಗ ಮಹಿಷನ ದೊಡ್ಡ ಭಾವಚಿತ್ರ ಇರಿಸಿ ಅದರ ಮುಂದುಗಡೆ ಅಂಬೇಡ್ಕರ್, ಬುದ್ಧ ಮತ್ತು ಮಹಿಷನ ಕಂಚಿನ ಮೂರ್ತಿಗಳಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಇದೇ ವೇಳೆ ಮಹಿಷನ ರೂಪ ಧರಿಸಿದ ವ್ಯಕ್ತಿ ವೇದಿಕೆ ಮೇಲೆ ಆಗಮಿಸಿದ್ದು ವಿಶೇಷ ಎನಿಸಿತು.

 ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಬೆಂಗಳೂರು ಜಿಲ್ಲೆಗಳಿಂದ ಬೈಕ್, ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ತಂಡೋಪ ತಂಡವಾಗಿ ಮೈಸೂರು ನಗರಕ್ಕೆ ಆಗಮಿಸಿದರು. ಮೈಸೂರಿನ ಅಶೋಕಪುರಂನಿಂದ ನೂರಾರು ಯುವಕರು ನೀಲಿ ಬಾವುಟ ಹಿಡಿದು ಬೈಕ್ ಗಳ ಮೂಲಕ ಪುರಭವನಕ್ಕೆ ಆಗಮಿಸಿದರು.

ಮಹಿಷ ದಸರಾ ಆಚರಣೆ, ಚಾಮುಂಡಿ ಚಲೋ ವಿವಾದದ ಹಿನ್ನೆಲೆಯಲ್ಲಿ ಪೊಲೀಸರು ಪುರಭವನದ ಒಳಗೆ ಮಾತ್ರ ಮಹಿಷ ದಸರಾ ಉತ್ಸವಕ್ಕೆ ಅನುಮತಿ ನೀಡಲಾಗಿದೆ. ಮಹಿಷ ಆಯೋಜಕರ ಬಯಕೆಯಂತೆ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಮೂರ್ತಿಗೆ ಪುಷ್ಪಾರ್ಜನೆ ಮಾಡಲು ಅವಕಾಶ ನಿರಾಕರಿಸಲಾಗಿತ್ತು. ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರು ನಗರದಾದ್ಯಂತ 144ನೇ ಸೆಕ್ಷನ್ ಜಾರಿ ಮಾಡಿ ನಿಷೇಧ ಹೇರಲಾಗಿದೆ.

ಪುರಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ  ಮಾಡಿ. ನಂತರ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರು ನೀಲಿ ಬಾವುಟ, ಮಹಿಷನ ಭಾವಚಿತ್ರ ಹಿಡಿದು ಪ್ರದರ್ಶನ ಮಾಡಿ ಜಯಘೋಷಗಳನ್ನು ಕೂಗಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಖ್ಯಾತ  ಗಾಯಕ ಅಮ್ಮಾ ರಾಮಚಂದ್ರ ಮತ್ತು ತಂಡದವರು ನಾಡ ನಡುವಿನಿಂದ ಬಂದ ನೋವಿನ ಕೂಗೆ, ಮಹಿಷನಿಗೆ ಕೋಟಿ ನಮನ, ಕರುಳಿನ ಕಥನ ಕೇಳುವ ನಾಯಕ ಎಲ್ಲಿಗೆ ಹೋದೆ, ಓ ಭೀಮರಾಯ ಇದೊ ನಿನಗೆ ವಂದನೆ  ಎಂಬ ಭೀಮ ಮತ್ತು ಕ್ರಾಂತಿ ಗೀತೆಗಳನ್ನು ಹಾಡಿದರು.

 

 

 

 

ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ:

ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ

https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News