ಕೇಂದ್ರ ಬಜೆಟ್‍ನಿಂದ ಬೆಂಗಳೂರು, ಕರ್ನಾಟಕಕ್ಕೆ ಗರಿಷ್ಠ ಪ್ರಯೋಜನ : ನಿರ್ಮಲಾ ಸೀತಾರಾಮನ್

Update: 2024-07-28 11:01 GMT

ಬೆಂಗಳೂರು : ಈ ಬಾರಿಯ ಕೇಂದ್ರ ಬಜೆಟ್‍ನಿಂದ ಬೆಂಗಳೂರು ಮತ್ತು ಕರ್ನಾಟಕ ರಾಜ್ಯಕ್ಕೆ ಗರಿಷ್ಠ ಪ್ರಯೋಜನ ಲಭಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಂಶೋಧನೆ ಮತ್ತು ಅಭಿವೃದ್ಧಿ ನೆರವಿನಿಂದ ಬೆಂಗಳೂರಿಗೆ ಗರಿಷ್ಠ ಪ್ರಯೋಜನ ಸಿಗಲಿದೆ. ಖಾಸಗಿ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಗೂ ಇದರಿಂದ ಪ್ರಯೋಜನ ಲಭಿಸುತ್ತದೆ. ಕೃಷಿ ಕ್ಷೇತ್ರದ ಡಿಜಿಟಲ್ ಪಬ್ಲಿಕ್ ಇನ್‍ಫ್ರಾಸ್ಟ್ರಕ್ಚರ್ (ಡಿಪಿಐ) ಬಳಕೆಗೆ ಬೆಂಗಳೂರು ಗರಿಷ್ಠ ಕೊಡುಗೆ ನೀಡಲಿದೆ" ಎಂದು ವಿವರಿಸಿದರು.

ಬಾಹ್ಯಾಕಾಶ ಕೇಂದ್ರಕ್ಕೆ ದೊಡ್ಡ ಮೊತ್ತದ ನಿಧಿ (ವೆಂಚರ್ ಕ್ಯಾಪಿಟಲ್) ಕೊಟ್ಟಿದ್ದು, ಇಸ್ರೋ ಸಂಬಂಧಿತ ಕೆಲಸಗಳು ಇಲ್ಲಿಯೂ ನಡೆಯುತ್ತಿವೆ. ಇದು ಬೆಂಗಳೂರಿಗೆ ದೊಡ್ಡ ಪ್ರಮಾಣದಲ್ಲಿ ನೆರವು ಕೊಡಲಿದೆ ಎಂದರು. ಸ್ಟಾರ್ಟಪ್‍ಗಳ ಮೇಲಿನ ಏಂಜೆಲ್ ಟ್ಯಾಕ್ಸ್ ರದ್ದು ಮಾಡಿದ್ದು, ಇದು ಗರಿಷ್ಠ ಸ್ಟಾರ್ಟಪ್‍ಗಳನ್ನು ಹೊಂದಿದ ಬೆಂಗಳೂರಿಗೆ ನೆರವು ಕೊಡಲಿದೆ. ಏಂಜೆಲ್ ಟ್ಯಾಕ್ಸ್ ಅನ್ನು ಯುಪಿಎ ಸರಕಾರ 2012ರಲ್ಲಿ ಜಾರಿ ಮಾಡಿತ್ತು. ಇದೀಗ ಅದನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ವಿಚಾರದಲ್ಲಿ ತಪ್ಪು ಮಾಹಿತಿ ಕೊಡಲಾಗುತ್ತಿದೆ. ಕೇಂದ್ರ ಸರಕಾರವು ಕರ್ನಾಟಕಕ್ಕೆ ಅದರ ಭಾಗವನ್ನು ಕೊಡುತ್ತಿಲ್ಲ ಎಂದು ತಿಳಿಸುತ್ತಿದ್ದು, ಇದು ಸಂಪೂರ್ಣ ಸುಳ್ಳು ಎಂದು ಆಕ್ಷೇಪಿಸಿದರು.

ಕರ್ನಾಟಕ ಸರಕಾರವು ಜನರಿಗೆ ಈ ವಿಷಯದಲ್ಲಿ ಸಮರ್ಪಕ ಮಾಹಿತಿ ಕೊಡುತ್ತಿಲ್ಲ ಎಂದ ಅವರು, 2004-14ರ ಯುಪಿಎ ಆಡಳಿತದಲ್ಲಿ ಕರ್ನಾಟಕವು 81,791 ಕೋಟಿ ತೆರಿಗೆ ಹಂಚಿಕೆ ನೆರವು ಪಡೆದಿತ್ತು. ಆದರೆ, ಎನ್‍ಡಿಎ ಆಡಳಿತದ ಅಡಿಯಲ್ಲಿ 2014-24ರಲ್ಲಿ 2,95,818 ಕೋಟಿ ನೆರವು ಗಳಿಸಿದೆ ಎಂದು ಅಂಕಿ ಅಂಶಗಳೊಂದಿಗೆ ಸಮರ್ಥಿಸಿಕೊಂಡರು.

ಯುಪಿಎ 10 ವರ್ಷಗಳ ಅವಧಿಯಲ್ಲಿ ಅನುದಾನ ನೆರವು 60,779 ಕೋಟಿ ಇದ್ದರೆ, ಮೋದಿಯವರ ನಾಯಕತ್ವದ 10 ವರ್ಷಗಳ ಅವಧಿಯಲ್ಲಿ 2,36,955 ಕೋಟಿ ಕರ್ನಾಟಕಕ್ಕೆ ಸಿಕ್ಕಿದೆ. 2024-25ರಲ್ಲಿ ಕರ್ನಾಟಕಕ್ಕೆ 45,485 ಕೋಟಿ ತೆರಿಗೆ ಹಂಚಿಕೆ ಸಿಕ್ಕಿದೆ ಎಂದರು. ಯುಪಿಎ ಅವಧಿಯಲ್ಲಿ ಒಂದು ವರ್ಷಕ್ಕೆ 8,179 ಕೋಟಿ ಸಿಗುತ್ತಿದ್ದುದು, ಈಗ ಮೋದಿಯವರ ಅವಧಿಯಲ್ಲಿ 45,485 ಕೋಟಿಗೆ ಏರಿದೆ. ತಪ್ಪು ಪ್ರಚಾರ ಮಾಡುವವರನ್ನು ಮಾಧ್ಯಮದವರು ಪ್ರಶ್ನಿಸಬೇಕು ಎಂದು ಮನವಿ ಮಾಡಿದರು.

ನಗರಗಳ ಯೋಜಿತ ಅಭಿವೃದ್ಧಿ ವಿಚಾರದಲ್ಲೂ ಬೆಂಗಳೂರಿಗೆ ಪ್ರಯೋಜನ ಸಿಗಲಿದೆ. ನಗರಗಳ ಮನೆ ನಿರ್ಮಾಣದಲ್ಲೂ ಬೆಂಗಳೂರು ವಿಶೇಷ ಲಾಭ ಪಡೆಯಲಿದೆ. ಮಹಿಳಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದು, ಕೆಲಸ ಮಾಡುತ್ತಿರುವ ಮಹಿಳೆಯರಿಗಾಗಿ ಮಹಿಳಾ ಹಾಸ್ಟೆಲ್ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಎಂಎಸ್‍ಎಂಇಗಳು ದುಡಿಯುವ ಬಂಡವಾಳಕ್ಕೆ ವಾಣಿಜ್ಯ ಬ್ಯಾಂಕ್‍ಗಳಿಂದ ಸಾಲ ಪಡೆಯುತ್ತಿದ್ದವು. ಬ್ಯಾಂಕ್‍ಗಳು ಇನ್ನು ಮುಂದೆ ಯಂತ್ರೋಪಕರಣ, ಪೂರಕ ಉಪಕರಣ ಖರೀದಿಗೆ ಸಾಲ ಕೊಡಲಿವೆ. ಇದಕ್ಕೆ ಭದ್ರತೆಯ ಅವಶ್ಯಕತೆ ಇರುವುದಿಲ್ಲ. ವಾಣಿಜ್ಯ ಬ್ಯಾಂಕ್‍ಗಳು ಎಂಎಸ್‍ಎಂಇಯ ಕಾಲಕಾಲದ ಹಣದ ಅಗತ್ಯವನ್ನು ಗಮನಿಸುವುದಿಲ್ಲ ಎಂಬ ದೂರುಗಳಿದ್ದು, ಈ ಸಮಸ್ಯೆಯನ್ನು ದೂರ ಮಾಡಲು ಸಿಡ್ಬಿಯು ಪೀಣ್ಯದಂಥ ಕೈಗಾರಿಕಾ ಪ್ರದೇಶದಲ್ಲಿ ಶಾಖೆ ತೆರೆಯುವಂತೆ ಮಾಡುತ್ತೇವೆ ಎಂದು ಹೇಳಿದರು.

ಯುವಜನರಿಗೆ ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು ಕೊಡಲಾಗಿದೆ. ಮೊದಲ ಬಾರಿಗೆ ಉದ್ಯೋಗ ಪಡೆಯುವವರಿಗೆ, ಉದ್ಯೋಗದಾತರಿಗೆ ಪ್ರಯೋಜನ, ಈಗಾಗಲೇ ಉದ್ಯೋಗ ಹೊಂದಿದ್ದು, ಬೇರೆಡೆ ಉದ್ಯೋಗ ಪಡೆಯುವವರು, ಉದ್ಯೋಗದಾತರಿಗೆ ಕೊಡುಗೆಗಳನ್ನು ನೀಡಿದ್ದು, ಇವೆಲ್ಲವೂ ಭವಿಷ್ಯನಿಧಿ ಸಂಘಟನೆ (ಇಪಿಎಫ್‍ಒ) ಮೂಲಕ ಜಾರಿ ಆಗಲಿವೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News