ಸ್ಫೋಟ ಸುದ್ದಿಗೆ ಮುಸ್ಲಿಂ ವ್ಯಕ್ತಿಯ ಫೋಟೊ ಬಳಸಿದ್ದ ಪವರ್ ಟಿವಿ; ವ್ಯಾಪಕ ಆಕ್ರೋಶದ ಬಳಿಕ ಫೋಟೊ ಬದಲಾವಣೆ

Update: 2023-10-29 17:54 GMT

ಬೆಂಗಳೂರು: ಕೇರಳದ ಕಳಮಶ್ಶೇರಿ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಸರಣಿ ಸ್ಪೋಟದ ಪ್ರಕರಣದ ಸುದ್ದಿಗೆ ಕನ್ನಡದ ನ್ಯೂಸ್ ಚಾನೆಲ್ ಪವರ್ ಟಿವಿಯ ವೆಬ್ ಪೋರ್ಟಲ್ ಟೋಪಿ ಹಾಕಿದ ಮುಸ್ಲಿಂ ವ್ಯಕ್ತಿಯೋರ್ವರ ಫೋಟೊ ಬಳಸಿ "ಬಾಂಬ್ ಇಟ್ಟಿದ್ದ ವ್ಯಕ್ತಿ ಪೊಲೀಸರಿಗೆ ಶರಣು" ಎಂಬ ಶೀರ್ಷಿಕೆಯ ಸುದ್ದಿ ಪ್ರಕಟಿಸಿತ್ತು. ಇದೀಗ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪವರ್ ಟಿವಿಯು ಸುದ್ದಿಯನ್ನು ಅಪ್ ಡೇಟ್‌ ಮಾಡಿದೆ.

ಕೇರಳದ ಕೊಚ್ಚಿಯ ಕಳಮಶ್ಶೇರಿ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಸರಣಿ ಸ್ಪೋಟದಲ್ಲಿ ಓರ್ವ ಮಹಿಳೆ ಮೃತಪಟ್ಟು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಸ್ಪೋಟಕ್ಕೆ ನಾನೇ ಕಾರಣ ಎಂದು ಡೊಮಿನಿಕ್ ಮಾರ್ಟಿನ್ ಎಂಬಾತ ಫೇಸ್ ಬುಕ್ ಲೈವ್ ನಲ್ಲಿ ವೀಡಿಯೊ ಮೂಲಕ ಹೇಳಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಘಟನೆಗೆ ಸಂಬಂಧಿಸಿದ ಸುದ್ದಿಗೆ ಪವರ್ ಟಿವಿಯ ವೆಬ್ ಪೋರ್ಟಲ್ "ಬಾಂಬ್ ಇಟ್ಟಿದ್ದ ವ್ಯಕ್ತಿ ಪೊಲೀಸರಿಗೆ ಶರಣು" ಎಂಬ ಶೀರ್ಷಿಕೆಯ ಸುದ್ದಿ ಪ್ರಕಟಿಸಿ ಹಲವು ಗಂಟೆಗಳೂ ಕಳೆದರೂ ಅದನ್ನು ತಿದ್ದಿರಲಿಲ್ಲ. ಘಟನೆಗೆ ಸಂಬಂಧವೇ ಇಲ್ಲದ ಯಾವುದೋ ಒಂದು ವೀಡಿಯೋ ಗ್ರಾಬ್ ಸ್ಕೀನ್ ಶಾಟ್ ಬಳಸಿ ಸುದ್ದಿಯ ಜೊತೆ ಪ್ರಕಟಿಸಲಾಗಿತ್ತು. ಸುದ್ದಿಯಲ್ಲಿ ಒಂದು ಕಡೆ ಮೀನಹಿಲೆ ಎಂಬ ಕೊಚ್ಚಿಯ ವ್ಯಕ್ತಿ ಶರಣಾಗಿದ್ದಾನೆ ಎಂದು ಬರೆಯಲಾಗಿತ್ತು. ಆದರೆ ಇನ್ನೊಂದೆಡೆ ಕಣ್ಣೂರು ಪೊಲೀಸರು ವ್ಯಕ್ತಿಯೊಬ್ಬನ ಬ್ಯಾಗ್ ನಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಗುರುತಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಗುಜರಾತ್ ಮೂಲದ ಈತ ಮಂಗಳೂರಿನಿಂದ ಅರಿಕೋಡಿಗೆ ತೆರಳುತ್ತಿದ್ದ ಎನ್ನಲಾಗಿದೆ ಎಂದು ನಿರಾಧಾರವಾಗಿ ಬರೆಯಲಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಪವರ್ ಟಿವಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

“ಪವರ್ ಟಿವಿಯವರು ಸಾರಾಯಿ ನಶೆಯಲ್ಲಿರೋದು, ಹಸಿ ಹಸಿ ಸುಳ್ಳುಗಳು” ಎಂದು ಕಿಡಿ ಕಾರಿದ್ದಾರೆ. ಕೆಲವರು ನಿಮ್ಮದೇ ಫೊಟೋ ಬಳಸಿಕೊಳ್ಳಿ ಎಂದು ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಸುದ್ದಿ ಹಾಗೂ ಫೋಟೊ ಅನ್ನು ಅಪ್‌ ಡೇಟ್‌ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News