ಪ್ರಜ್ವಲ್ ಪ್ರಕರಣ | ದೇವರಾಜೇಗೌಡ ಹೇಳಿಕೆ ರಾಜಕೀಯ ಪ್ರೇರಿತ : ಸಚಿವ ರಾಮಲಿಂಗಾರೆಡ್ಡಿ

Update: 2024-05-18 14:56 GMT

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮುಖಂಡ ದೇವರಾಜೇಗೌಡ ನೀಡುತ್ತಿರುವ ಹೇಳಿಕೆಗಳು ರಾಜಕೀಯ ಪ್ರೇರಿತ. ಈ ಹಿಂದೆ ಬಿಜೆಪಿ ವಿರುದ್ಧ ಕೆಲಸ ಮಾಡಿದ್ದ ಅವರು, ಇದೀಗ ಮೈತ್ರಿ ಕಾರಣಕ್ಕೆ ಬೇರೆ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಆರೋಪಿಸಿದ್ದಾರೆ.

ಶನಿವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ವಕೀಲರು ಆಗಿರುವ ದೇವರಾಜೇಗೌಡ ಬಿಜೆಪಿ ಮುಖಂಡ. ಆತ ಪೆನ್‍ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ನಾಲ್ವರು ಸಚಿವರ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎಂದು ಅಲ್ಲಗಳೆದರು.

ಈ ಪ್ರಕರಣದಲ್ಲಿ ಬಂಧಿತರಾಗಿರುವ ದೇವರಾಜೇಗೌಡ ಹಿಂದೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಅವರ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಹೊಳೆನರಸೀಪುರ ಮತ್ತು ಹಾಸನದಲ್ಲಿ ಸುತ್ತುತ್ತಿದ್ದ ಪ್ರಜ್ವಲ್, ಎಚ್.ಡಿ.ರೇವಣ್ಣ ಹಾಗೂ ದೇವರಾಜೇಗೌಡ ನಡುವಣ ವೈಯಕ್ತಿಕ ವಿಚಾರವನ್ನು ರಾಜ್ಯಮಟ್ಟಕ್ಕೆ ಸ್ವತಃ ದೇವರಾಜೇಗೌಡ ಎಳೆದು ತಂದಿದ್ದಾರೆ ಎಂದು ಟೀಕಿಸಿದರು.

ಜೈಲಿಂದ ಹೊರಗೆ ಬರಲಿ: ‘ಬಿಜೆಪಿ ಮುಖಂಡ ದೇವರಾಜೇಗೌಡ ಮೊದಲು ಅವರ ಜೈಲಿನಿಂದ ಬಿಡುಗಡೆಯಾಗಲಿ. ಆ ಮೇಲೆ ಕಾಂಗ್ರೆಸ್ ನೇತೃತ್ವದ ಸರಕಾರ ಬೀಳುತ್ತೊ, ನಿಲ್ಲುತ್ತೊ ಎಂಬುದನ್ನು ನೋಡೋಣ’

ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News