ʼಪಾಕ್ ಪರ ಘೋಷಣೆʼ ಪ್ರಕರಣ‌ | FSL ವರದಿ ಆಧಾರವಾಗಿಟ್ಟುಕೊಂಡು ಆರೋಪಿಗಳ ಬಂಧನ : ಗೃಹ ಸಚಿವ ಜಿ.ಪರಮೇಶ್ವರ್

Update: 2024-03-05 13:25 GMT

ಬೆಂಗಳೂರು : ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕೃತ ಎಫ್‌ಎಸ್‌ಎಲ್‌ ವರದಿಯನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.

ಸದಾಶಿವನಗರದ ತಮ್ಮ‌ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಫ್‌ಎಸ್‌ಎಲ್ ವರದಿ ಬಂದ ನಂತರ‌ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಸದನದಲ್ಲಿ ಉತ್ತರಿಸಿದ್ದೆನು. ವರದಿಯಲ್ಲಿ ಖಚಿತವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದರು

ಖಾಸಗಿಯವರು ಸಹ ಎಫ್‌ಎಸ್‌ಎಲ್ ವರದಿ ಬಿಡುಗಡೆ ಮಾಡಿದ್ದರು. ನಾವು ಅದನ್ನು ಅಧಿಕೃತ ಅಂತ ಪರಗಣಿಸುವುದಿಲ್ಲ. ನಾವು ಅವರಿಗೆ ಯಾವುದೇ ರೀತಿಯ ಮಾನ್ಯತೆ ನೀಡಿಲ್ಲ. ನಮ್ಮ ಇಲಾಖೆಯ ಎಫ್‌ಎಸ್‌ಎಲ್ ವರದಿಯಲ್ಲಿ ಆರೋಪಿಗಳು ಪಾಕಿಸ್ತಾನ ಪರ‌ ಘೋಷಣೆ ಕೂಗಿರುವುದು ಖಚಿತವಾಗಿದೆ. ಈ ಆಧಾರದ ಮೇಲೆ‌ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿಯಲಿದ್ದು, ತನಿಖೆಯಿಂದ ಬರುವ ಮಾಹಿತಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ಬಿಜೆಪಿಯವರು ವರದಿ ಬಹಿರಂಗಪಡಿಸುವಂತೆ ಆಗ್ರಹಿಸುತ್ತಿದ್ದಾರೆ ಎಂದು ಮಾಧ್ಯಮವರ ಪ್ರಶ್ನೆಯ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ದಿನಕ್ಕೊಂದು ರೀತಿ ಹೇಳಿಕೆ ನೀಡುತ್ತಾರೆ. ಸಾಕ್ಷ್ಯ ಇಲ್ಲದೆ ಯಾರನ್ನು ಬಂಧಿಸಲಾಗುವುದಿಲ್ಲ. ವರದಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು‌, ಇನ್ನೆನು ಬಹಿರಂಗಪಡಿಸಬೇಕು. ಪ್ರಕರಣವನ್ನು ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದ ಬಿಜೆಪಿಯವರು ಈಗ ಏನು ಹೇಳುತ್ತಾರೆ ಎಂದು ಮರುಪ್ರಶ್ನಿಸಿದರು.

ಬಿಜೆಪಿಯವರು ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ

ಮಂಡ್ಯದಲ್ಲಿ 2022 ನವೆಂಬರ್‌ನಲ್ಲಿ ಬಿಜೆಪಿಯ ಕಾರ್ಯಕರ್ತರು ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಯಾಕೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಹಳೆಯ ಪ್ರಕರಣ ಈಗ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಮಂಡ್ಯ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿದ ಮೇಲೆ ಪ್ರಕರಣ ಒಂದೇ ಅಲ್ಲವೇ. ಕಾನೂನು ಎಲ್ಲರಿಗೂ ಒಂದೇ. ಯಾವ ಸಂದರ್ಭದಲ್ಲಿ ಕೂಗಿದ್ದಾರೆ ಎಂಬುದು ತನಿಖೆಯಿಂದ ಹೊರಬರುತ್ತೆ ಎಂದು ತಿಳಿಸಿದರು.

ಪ್ರಕರಣದ ಕುರಿತು ಬೇರೆ ಇಲಾಖೆಯ ಸಚಿವರಿಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಮಾಧ್ಯಮವರು ಅವರನ್ನು ಕೇಳಿದಾಗ ಹೇಳಿರುತ್ತಾರೆ ಅಷ್ಟೇ. ಸಿಎಂ, ಡಿಸಿಎಂ, ಇಲಾಖೆಯ ಆಧಿಕಾರಿಗಳು ಹಾಗೂ ಸಂಬಂಧಿಸಿದ ಸಚಿವರ ಹೇಳಿಕೆ ಮಾತ್ರ ಅಧಿಕೃತ. ಈಗ ನಾನು ಹೇಳುವುದು ಅಧಿಕೃತ ಎಂದು ಹೇಳಿದರು.

ಯುಎಪಿಎ ಪ್ರಕರಣಗಳು ನೇರವಾಗಿ ಕೇಂದ್ರದ ತನಿಖಾ ಸಂಸ್ಥೆಗಳಾದ ಎನ್‌ಐಎ ಅಥವಾ ಸಿಬಿಐಗೆ ಬರುತ್ತದೆ. ಹೀಗಾಗಿ ಎನ್‌ಐಎ ಅವರು ಸುಮೋಟೋ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ಸಹ ತನಿಖೆ ಮುಂದುವರಿಸುತ್ತಾರೆ. ನಮ್ಮಲ್ಲಿರುವ ಮಾಹಿತಿಯನ್ನು ಎನ್‌ಐಎಗೆ ಹಂಚಿಕೊಳ್ಳಲಾಗುವುದು. ಪ್ರಕರಣ ನಡೆದ ಮರುದಿನ ಸಿಸಿಬಿ ಪೊಲೀಸರು ಸಹ ಜೈಲಿನಲ್ಲಿರುವರನ್ನು ವಿಚಾರಣೆ ನಡೆಸಿದ್ದರು. ಯಾರೇ ತನಿಖೆ ನಡೆಸಿದರೂ ಒಟ್ಟಾರೆಯಾಗಿ ಆರೋಪಿಯನ್ನು ಪತ್ತೆ ಹಚ್ಚುವುದಷ್ಟೆ ಮುಖ್ಯ ಎಂದು ತಿಳಿಸಿದರು.

ಪ್ರಕರಣದಿಂದ ಸರಕಾರಕ್ಕೆ ಮುಜುಗರ ಆಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರಕ್ಕೆ ಯಾಕೆ ಮುಜುಗರ ಆಗುತ್ತದೆ. ಸರಕಾರ ಯಾರಿಗಾದರೂ ಸ್ಪಾನ್ಸರ್ ಮಾಡಿದೆಯೇ? ಅವನ್ಯಾರೋ ಕೂಗಿದ್ದಾನೆ ಅನ್ನುವುದನ್ನು ಖಚಿತಪಡಿಸಿಕೊಳ್ಳಲು ಕಾಯುತ್ತಿದ್ದೆವು. ಖಚಿತವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸರಕಾರಕ್ಕೆ ಮುಜುಗರ ಆಗುವಂತದ್ದು ಏನು ಮಾಡಿಲ್ಲ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಂಡು ಒಳ್ಳೆ ಕೆಲಸ ಮಾಡಿದೆ. ಇದಕ್ಕೆ ಸರಕಾರವನ್ನು ಪ್ರಶಂಶಿಸಬೇಕು ಎಂದು ಹೇಳಿದರು.

ವಿಧಾನಸೌಧದ ಭದ್ರತಾ ವೈಫಲ್ಯ ಇರುವುದು ಕಂಡು ಬಂದರೆ ಇಲಾಖೆಯ ಅಧಿಕಾರಿಗಳು ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತಾರೆ. ಯಾರನ್ನೋ ಕೇಳಿ ಕೆಲಸ ಮಾಡುವ ಅಗತ್ಯತೆ ಇಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News