ರಾಮೇಶ್ವರಂ ಕೆಫೆ‌ ಸ್ಫೋಟ ಪ್ರಕರಣ : ಇಬ್ಬರು ಶಂಕಿತರ ಫೋಟೋ ಬಿಡುಗಡೆ ಮಾಡಿದ ಎನ್‌ಐಎ, ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ

Update: 2024-03-29 13:59 GMT

ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಸಹಕಾರಿಯಾಗುವಂತಹ ಸುಳಿವು ನೀಡಿದವರಿಗೆ ತಲಾ 10 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಘೋಷಿಸಿದೆ.

ಪ್ರಮುಖ ಆರೋಪಿಗಳಾದ ಮುಸ್ಸಾವೀರ್ ಹುಸೇನ್ ಶಾಜಿಬ್(30) ಹಾಗೂ ಅಬ್ದುಲ್ ಮತೀನ್ ಅಹಮದ್ ತಾಹ (30) ಪತ್ತೆಗೆ ಸಹಕಾರಿಯಾಗಬಲ್ಲ ಸುಳಿವಿದ್ದಲ್ಲಿ ದೂ.ಸಂ.080-29510900, 8904241100 ಸಂಪರ್ಕಿಸುವಂತೆ ಎನ್‍ಐಎ ತಿಳಿಸಿದೆ.

ಸ್ಫೋಟ ಪ್ರಕರಣದ ತನಿಖೆ ಆರಂಭಿಸಿರುವ ಎನ್‍ಐಎ ಅಧಿಕಾರಿಗಳು ಈಗಾಗಲೇ ಮುಝಮ್ಮಲ್ ಶರೀಫ್ ಎಂಬಾತನನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮುಸ್ಸಾವೀರ್ ಹುಸೇನ್ ಶಾಜಿಬ್(30) ಎಂಬಾತ ಬಿಳಿ ಮೈ ಬಣ್ಣ, 6.2 ಅಡಿ ಎತ್ತರ, ಕಪ್ಪು ವರ್ಣದ ನೇರ ಹೇರ್ ಸ್ಟೈಲ್, ಮುಹಮ್ಮದ್ ಜುನೇದ್ ಸಯ್ಯದ್ ಅಥವಾ ಇನ್ನಿತರ ಹೆಸರಿನಲ್ಲಿ ನಕಲಿ ವಾಹನ ಚಾಲನ ಪರವಾನಗಿ ಹೊಂದಿದ್ದಾನೆ.

ಜೀನ್ಸ್, ಟೀ ಶರ್ಟ್ ಮತ್ತು ಶರ್ಟ್ ಧರಿಸುತ್ತಾನೆ. ಕೈಯಲ್ಲಿ ಬ್ಲ್ಯಾಕ್ ಸ್ಮಾರ್ಟ್ ವಾಚ್ ಧರಿಸಿರುತ್ತಾನೆ, ಆಗಾಗ ಮಾಸ್ಕ್ ಧರಿಸುತ್ತಾನೆ. ಕೆಲವೊಮ್ಮೆ ವಿಗ್ ಮತ್ತು ನಕಲಿ ಗಡ್ಡಧಾರಿಯಾಗಿರುತ್ತಾನೆ. ಪುರುಷರ ಪಿಜಿ, ಕಡಿಮೆ ದರದ ಹೋಟೆಲ್ ಲಾಡ್ಜ್ ಗಳಲ್ಲಿ ವಾಸಿಸುತ್ತಿರಬಹುದು ಎಂದು ಎನ್‍ಐಎ ತಿಳಿಸಿದೆ.

ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಅಬ್ದುಲ್ ಮತೀನ್ ಅಹಮದ್ ತಾಹ (30) ಎಂಬಾತ ಬಿಳಿ ಮೈ ಬಣ್ಣ, 5.5 ಅಡಿ ಎತ್ತರ, ತಲೆಯ ಮುಂದೆ ಕೂದಲಿಲ್ಲ, ಹಿಂದೆ ಮತ್ತು ಬದಿಯಲ್ಲಿ ಮಧ್ಯಮ ಪ್ರಮಾಣದಲ್ಲಿ ಕೂದಲುಗಳಿವೆ, ಕ್ಯಾಪ್ ಧರಿಸುತ್ತಾನೆ. ವಿಘ್ನೇಶ್ ಎಂಬ ಹೆಸರಿನ ಆಧಾರ್ ಸೇರಿದಂತೆ ಇತರ ದಾಖಲೆಗಳನ್ನು ಹೊಂದಿದ್ದಾನೆ.

ಜೀನ್ಸ್, ಟೀ ಶರ್ಟ್ ಮತ್ತು ಶರ್ಟ್, ಕ್ಯಾಪ್ಡ್ ಹುಡ್ಡೀಸ್ ಧರಿಸುತ್ತಾನೆ. ಕೆಲವೊಮ್ಮೆ ಮಾಸ್ಕ್, ವಿಗ್ ಮತ್ತು ನಕಲಿ ಗಡ್ಡಧಾರಿಯಾಗಿರುತ್ತಾನೆ. ಪುರುಷರ ಪಿಜಿ, ಕಡಿಮೆ ದರದ ಹೋಟೆಲ್ ಲಾಡ್ಜ್ಗಳಲ್ಲಿ ವಾಸಿಸುತ್ತಿರಬಹುದು. ಈ ಇಬ್ಬರು ಆರೋಪಿಗಳ ಕುರಿತು ಯಾವುದೇ ಸುಳಿವಿದ್ದಲ್ಲಿ ಹಂಚಿಕೊಳ್ಳುವಂತೆ ಹಾಗೂ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿರಿಸಲಾಗುವುದು ಎಂದು ಎನ್‍ಐಎ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News