ರಾಮನಗರ | ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಮೃತ್ಯು

Update: 2023-08-28 17:34 GMT

ಕನಕಪುರ: ರಾಜ್ಯ ಸಾರಿಗೆ ಹಾಗು ಕಾರು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಆರುಮಂದಿ  ಮೃತಪಟ್ಟು ಬಸ್ ಚಾಲಕನ ಸ್ಥಿತಿಯೂ ಗಂಭೀರವಾಗಿರುವ ಘಟನೆ ಸಾತನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಕೆಮ್ಮಾಳೆ ಗೇಟ್ ಬಳಿ ಸೋಮವಾರ ವರದಿಯಾಗಿದೆ.

ಸೋಮವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಬೆಂಗಳೂರು ಸಮೀಪದ ಆನೆಕಲ್ ತಾಲೂಕಿನ ಚಂದಾಪುರದ ಜ್ಯೋತಿರ್ಲಿಂಗಪ್ಪ ಹಾಗು ಜೊತೆಯಲ್ಲಿದ್ದ ನಾಗೇಶ್, ಪುಟ್ಟರಾಜು, ಗೋವಿಂದ, ಕುಮಾರ್ ಐವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಬ್ಬರ ಹೆಸರು ತಿಳಿದುಬಂದಿಲ್ಲ. ಕ್ವಾಲಿಸ್ ವಾಹನದಲ್ಲಿ ಗ್ರಾಮದಿಂದ ತೆರಳಿದ್ದ ಅವರು ಮಳವಳ್ಳಿ ಕಡೆಯಿಂದ ಸ್ವಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಾಳೆ ಗೇಟ್‍ಬಳಿ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಜ್ಯೋತಿರ್ಲಿಂಗಪ್ಪ ಮತ್ತು ಐವರು ಸ್ನೇಹಿತರು ಕ್ವಾಲಿಸ್‍ ಕಾರಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಾಪಸ್ಸು ಬರುತ್ತಿದ್ದರು ಎಂದು ಹೇಳಲಾಗಿದೆ. ಈ ಅವಘಡ ಸಂಭವಿಸಿದ ಕೂಡಲೇ ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಎಲ್.ಕೃಷ್ಣ, ಸಾತನೂರು ಠಾಣಾ ಸಬ್‍ಇನ್ಸ್‍ಪೆಕ್ಟರ್ ಹರೀಶ್ ಭೇಟಿನೀಡಿ ಪರಿಶೀಲನೆ ನಡೆಸಿದರು. ಅಪಘಾತದ ರಭಸಕ್ಕೆ ಕ್ವಾಲಿಸ್ ವಾಹನ ಬಸ್ಸಿನ ಕೆಳಗೆ ಸಿಲುಕಿದ್ದರಿಂದ ಶವಗಳನ್ನು ಹೊರತೆಗೆಯಲು ಕ್ರೇನ್ ಬಳಸಿ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕನಕಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News