ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 2ನೇ ಹಂತದಲ್ಲಿ 38 ಸಾವಿರ ಮನೆ ಹಂಚಿಕೆ : ಝಮೀರ್ ಅಹ್ಮದ್

Update: 2024-07-01 14:11 GMT

ಬೆಂಗಳೂರು : ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯದೆಲ್ಲೆಡೆ ಬಡ ಕುಟುಂಬಗಳಿಗೆ ಎರಡನೇ ಹಂತದಲ್ಲಿ 38 ಸಾವಿರ ಮನೆಗಳನ್ನು ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಹಂಚಿಕೆಗೆ ಸಿದ್ಧತೆ ನಡೆಸಲಾಗಿದೆ ಎಂದು ಸಚಿವ ಝಮೀರ್ ಅಹ್ಮದ್ ತಿಳಿಸಿದ್ದಾರೆ.

ವಿಧಾನ ಸೌಧದಲ್ಲಿ ವಸತಿ ಸಚಿವ ಝಮೀರ್ ಅಹ್ಮದ್ ಅವರು ಸೋಮವಾರ ಹಣಕಾಸು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅತೀಕ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಎರಡನೇ ಹಂತದ ಮನೆ ಹಂಚಿಕೆ ಮಾಡಲು ಅಗತ್ಯ ವಾದ 860 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ದೊರೆತಿದೆ. ಈಗಾಗಲೇ ಮನೆಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣ ಹಂತಕ್ಕೆ ಬಂದಿದ್ದು, ಮೂಲ ಸೌಕರ್ಯ ಕಾಮಗಾರಿ ಆದಷ್ಟು ಶೀಘ್ರ ಮುಗಿಸಿ ಮನೆಗಳ ಹಂಚಿಕೆಗೆ ದಿನಾಂಕ ನಿಗದಿ ಪಡಿಸಲು ತೀರ್ಮಾನ ಮಾಡಲಾಯಿತು.

ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 1,80,253 ಮನೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿ 36,789 ಮನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಚಿಕೆ ಮಾಡಿದ್ದರು. ಇದೀಗ ಎರಡನೇ ಹಂತದಲ್ಲಿ 38 ಸಾವಿರ ಮನೆ ಮುಖ್ಯಮಂತ್ರಿಯವರಿಂದಲೇ ಹಂಚಿಕೆ ಮಾಡಲಾಗುವುದು ಎಂದು ಸಚಿವ ಝಮೀರ್ ಅಹ್ಮದ್ ಮಾಹಿತಿ ನೀಡಿದ್ದಾರೆ.

ವಸತಿ ಯೋಜನೆಗೆ ಆಯ್ಕೆಯಾಗಿದ್ದ ಬಡ ಕುಟುಂಬಗಳ ಫಲಾನುಭವಿಗಳು ವಂತಿಗೆ ಪಾವತಿ ಮಾಡಲು ಸಾಧ್ಯ ವಾಗದೆ ಬ್ಯಾಂಕ್ ಗಳಿಂದಲೂ ಸಾಲ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾಗ ಮುಖ್ಯಮಂತ್ರಿಯವರು ಫಲಾನುಭವಿಗಳ ವಂತಿಗೆ ಸರಕಾರವೇ ಭರಿಸುವ ದಿಟ್ಟ ತೀರ್ಮಾನ ಕೈಗೊಂಡು ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದರು. ಅದರಂತೆ ಹಂತ ಹಂತವಾಗಿ ಹಣಕಾಸು ಇಲಾಖೆ ಅಗತ್ಯ ಹಣ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇ ಗೌಡ, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಗೃಹಮಂಡಳಿ ಆಯುಕ್ತರಾದ ಕವಿತಾ ಮಣ್ಣಿಕೇರಿ, ಪ್ರಧಾನ ಅಭಿಯಂತರ ರವಿಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಅಶೋಕ್, ಪ್ರಧಾನ ಅಭಿಯಂತರ ಬಾಲರಾಜು, ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಸುಶೀಲಮ್ಮ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News