ಕುಂದಾಪುರ: ನಕಲಿ ಸರಕಾರಿ ದಸ್ತಾವೇಜು ತಯಾರಿಸಿದ ಆರೋಪಿಯ ಜಾಮೀನು ಅರ್ಜಿ ವಜಾ
ಸಾಂದರ್ಭಿಕ ಚಿತ್ರ
ಕುಂದಾಪುರ: ಅಕ್ರಮವಾಗಿ ರಬ್ಬರ್ ಸ್ಟ್ಯಾಂಪ್ಗಳನ್ನು ಇಟ್ಟುಕೊಂಡು ನಕಲಿ ಸರಕಾರಿ ದಸ್ತಾವೇಜುಗಳನ್ನು ತಯಾರಿಸಿ ಸಾರ್ವಜನಿಕ ರಿಗೆ ಅದನ್ನು ನೀಡಿ ಮೋಸ ಮಾಡಿ ಬಂಧನಕ್ಕೊಳಗಾದ ಆರೋಪಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಕುಂದಾಪುರ ಠಾಣಾ ವ್ಯಾಪ್ತಿಯ ಫೆರಿ ರಸ್ತೆಯಲ್ಲಿರುವ ‘ಅರ್ಜಿ ಕೇಂದ್ರ’ದಲ್ಲಿ ಕೋಡಿ ನಿವಾಸಿ ನಾಗೇಶ್ ಕಾಮತ್ ಎಂಬಾತ ನಕಲಿ ದಸ್ತಾವೇಜು ತಯಾರಿಸುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಕುಂದಾಪುರ ಠಾಣೆ ಅಪರಾಧ ವಿಭಾಗದ ಪಿಎಸ್ಐ ಪುಷ್ಪಾ ಅವರು ದಾಳಿ ನಡೆಸಿದ್ದು ಆರೋಪಿಯನ್ನು ಬಂಧಿಸಿ ಆತನಿಂದ ವಿವಿಧ ಇಲಾಖೆಗೆ ಸಂಬಂಧಿಸಿದ 22 ನಕಲಿ ಸೀಲುಗಳನ್ನು ವಶಕ್ಕೆ ಪಡೆದಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆತನ ಜಾಮೀನು ಅರ್ಜಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೈನ್ ಶೇಕ್ ಅವರು ಮಾ.27ರಂದು ವಜಾಗೊಳಿಸಿ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ ಪ್ರಬಲವಾದ ವಾದ ಮಂಡಿಸಿದ್ದರು.