ಉಡುಪಿ| ಯುವಕನಿಂದ ಪುತ್ರಿಯ ಅಪಹರಣ: ಪೋಷಕರ ದೂರು
Photo credit: Grok
ಉಡುಪಿ: ಮೂಡಬಿದರೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ತನ್ನ ಮಗಳನ್ನು ಮಾ.20ರಂದು ಕರಂಬಳ್ಳಿ ನಿವಾಸಿ ಯುವಕ ಅಪಹರಿಸಿರುವುದಾಗಿ ಯುವತಿಯ ಹೆತ್ತವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಲೆವೂರು ಕುಕ್ಕಿಕಟ್ಟೆಯ ಗಾಡ್ವಿನ್ ದೇವದಾಸ್ ಎಂಬವರು ಈ ಬಗ್ಗೆ ದೂರು ದಾಖಲಿಸಿದ್ದು, ಕರಂಬಳ್ಳಿ ನಿವಾಸಿ ಮೊಹಮ್ಮದ್ ಅಕ್ರಮ್ ಎಂಬ ಯುವಕ ತನ್ನ ಮಗಳು ಜಿನ ಮೆರಿಲ್ (19)ರನ್ನು ಅಪಹರಿಸಿರುವುದಾಗಿ ಆರೋಪಿಸಿದ್ದಾರೆ.
ಪುತ್ರಿ ಮೆರಿಲ್ ಮಾ. 20ರಂದು ಸಂಜೆ ಎಂದಿನಂತೆ ಕಾಲೇಜಿನ ಬಸ್ಸಿನಲ್ಲಿ ಬಂದು ಕುಕ್ಕಿಕಟ್ಟೆ ಜಂಕ್ಷನ್ನಲ್ಲಿ ಸಂಜೆ 6ಗಂಟೆಗೆ ಇಳಿದಿದ್ದು, ಆ ವೇಳೆ ಅಲ್ಲಿದ್ದ ಅಕ್ರಮ್ ತನ್ನ ಬೈಕ್ನಲ್ಲಿ ಮಗಳನ್ನು ಅಪಹರಿಸಿರುವುದಾಗಿ ಅವರು ದೂರಿದ್ದಾರೆ. ಇದನ್ನು ಬಸ್ಸಿನ ಚಾಲಕ ನೋಡಿ ತನಗೆ ತಿಳಿಸಿದ್ದಾಗಿ ಅವರು ಹೇಳಿದ್ದಾರೆ.
ಈ ಹಿಂದೆ ಮೆರಿಲ್ ಆರೋಪಿ ವಿರುದ್ಧ ಲೈಂಗಿಕ ಹಲ್ಲೆ ಪ್ರಕರಣ ದಾಖಲಿಸಿದ್ದು, ಇದಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಆರೋಪಿ ಜಿನ್ ಮೆರಿಲ್ರನ್ನು ಅಪಹರಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇಂದು ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮೆರಿಲ್ ಹೆತ್ತವರು, ಅಕ್ರಮ್ ಮಗಳನ್ನು ಅಪಹರಿಸಿರುವುದಾಗಿ ದೂರಿದ್ದಲ್ಲದೇ ಮಗಳನ್ನು ಪತ್ತೆ ಮಾಡುವಂತೆ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಡಿವೈಎಸ್ಪಿ ವೈ.ಪ್ರಭು ಜೊತೆಯಲ್ಲಿ ಹೈಕೋರ್ಟ್ಗೆ ಹಾಜರಾಗಿರುವ ಜೋಡಿ ನಾವು ವಯಸ್ಕರಾಗಿದ್ದು, ಮದುವೆಯಾಗಲು ಅನುಮತಿ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದಾರೆ ಎಂದೂ ಹೇಳಲಾಗಿದೆ. ಜೋಡಿ ಉಡುಪಿ ಉಪನೊಂದಣಿ ಕಚೇರಿಯಲ್ಲಿ ವಿಶೇಷ ವಿವಾಹದಡಿ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.