ಹೆಬ್ರಿ| ಪಡುಕುಡೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನೆ; ಲೋಕಾರ್ಪಣೆ
ಪಡುಕುಡೂರು (ವರಂಗ, ಹೆಬ್ರಿ): ಸ್ವಾತಂತ್ರ್ಯ ಹೋರಾಟಗಾರರಾಗಿ ಪಡುಕುಡೂರಿನ ಕೀರ್ತಿಯನ್ನು ಜಗದಗಲ ಪಸರಿಸಿ ಜನಮನ ದಲ್ಲಿ ಶಾಶ್ವತವಾಗಿ ನೆಲೆಯಾದ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡುವ ಸಂಭ್ರಮದ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು. ಸಾವಿರಾರು ಮಂದಿ ಈ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದರು.
ಎಂ.ಡಿ. ಅಧಿಕಾರಿ ಅವರ ಮೂರ್ತಿಯನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು, ಎಂ.ಡಿ.ಅಧಿಕಾರಿಯವರ ಬಗೆಗೆ ಇರುವ ಅಭಿಮಾನ ಕ್ಕೆ ಪಡುಕುಡೂರು ಸಾಕ್ಷಿಯಾಗಿದೆ. ಪುತ್ಥಳಿ ಲೋಕಾರ್ಪಣೆ ಮಾಡುವ ಅವಕಾಶ ನನಗೆ ದೊರೆತಿರುವುದು ನನ್ನ ಭಾಗ್ಯ. ಎಂ.ಡಿ. ಅಧಿಕಾರಿ ದಂಪತಿಗಳ ಪ್ರತಿಮೆ ಒಟ್ಟಿಗೆ ಪ್ರತಿಷ್ಠೆ ಆಗಬೇಕು ಎಂಬುದು ನನ್ನ ಆಶಯ ಎಂದರು.
ದೇಶ ಪ್ರೇಮ, ಧೈರ್ಯ, ಸಾಹಸ, ಕರ್ತವ್ಯ ನಿಷ್ಠೆಗೆ ಎಂ.ಡಿ. ಅಧಿಕಾರಿ ಸಾಕ್ಷಿ, ಅವರು ದೇಹಕ್ಕೆ ಬೆಲೆ ಕೊಡದೇ ಜನಕ್ಕೆ ಬೆಲೆ ಕೊಟ್ಟು ದೊಡ್ಡವರಾದರು. ಒಕ್ಕಲಿನ ಸರ್ವರಿಗೂ ಭೂಮಿ ಬಿಟ್ಟುಕೊಟ್ಟು ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕು , ಪಡುಕುಡೂರು ತ್ಯಾಗದ ಭೂಮಿ, ಅದೇ ಭೂಮಿಯ ಜನತೆಗೆ ಬಡವರು ಗೇಣಿದಾರ ರಿಗೆ ಭೂಮಿ ಕೊಟ್ಟು ಬದುಕು ಕೊಟ್ಟವರು. ಅವರು ಮರೆಯಲಾರದ ಮರೆಯಬಾರದ ಅದ್ಬುತ ಶಕ್ತಿ. ಪುತ್ಥಳಿ ಪ್ರತಿಷ್ಠೆ ಪುಣ್ಯದ ಕಾರ್ಯ ಎಂದು ಮಾಜಿ ಮುಖ್ಯ ಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಖುಷಿ ವ್ಯಕ್ತಪಡಿಸಿದರು.
ಪ್ರತಿಮೆ ಪ್ರತಿಷ್ಠಾಪನೆಯ ರೂವಾರಿ ಪಡಕುಪರ್ಕಳ ಶಂಕರ ಶೆಟ್ಟಿ ಮಾತನಾಡಿ ಎಂ.ಡಿ.ಅಧಿಕಾರಿ ಅವರ ಪ್ರತಿಮೆ ಸ್ಥಾಪನೆ ನನ್ನ ಬಾಲ್ಯದ ಕನಸು ನನಸಾಗಿದೆ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಯೋಧರು, ಪಡುಕುಡೂರು ಪರಿಸರದ ಶೈಕ್ಷಣಿಕ ಸಾಧಕರು ಹಾಗೂ ದಾನಿಗಳಿಗೆ ಮತ್ತು ಗಣ್ಯರ ಸನ್ಮಾನ ನಡೆಯಿತು.
ಪುತ್ಥಳಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಪಡುಕುಡೂರು ಪಟೇಲರ ಮನೆ ಜಗದೀಶ ಹೆಗ್ಡೆ ಮಾತನಾಡಿ ಸಂಭ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಎಂ.ಡಿ.ಅಧಿಕಾರಿ ಪುತ್ರಿ ನಿವೃತ್ತ ಉಪನ್ಯಾಸಕಿ ಅಭಯಲಕ್ಷಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಗಣ್ಯರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ವಕೀಲರಾದ ಎಂ.ಕೆ.ವಿಜಯ ಕುಮಾರ್, ಡಾ.ಎಂ.ಎಸ್.ರಾವ್ ಮುದ್ರಾಡಿ, ಡಾ.ಜಯರಾಮ ಹೆಗ್ಡೆ ಪಡುಕುಡೂರು, ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಆಮೀನ್, ಪಡುಕುಡೂರು ದೇವಸ್ಥಾನದ ಆಡಳಿತ ಮೋಕ್ತೇಸರ ದೊಡ್ಡಮನೆ ಪ್ರಶಾಂತ ಶೆಟ್ಟಿ, ಪಡು ಕುಡೂರಿನ ಗಣ್ಯರಾದ ಮೆಲ್ಬೇಟ್ಟು ಕೃಷ್ಣ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಚಿಕ್ಕಮಾರಬೆಟ್ಟು, ಅರುಣ್ ಶೆಟ್ಟಿ ಮತ್ತಾವು, ಜಯಕರ ಶೆಟ್ಟಿ ಕೊಡಂಜ, ವರಂಗ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಆಚಾರ್, ಮುನಿಯಾಲು ಲಯನ್ಸ್ ಕ್ಲಬ್ ನ ಗೋಪಿನಾಥ್ ಭಟ್, ಪಡುಕುಡೂರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಮುಖ್ಯ ಶಿಕ್ಷಕ ಹರೀಶ್ ಪೂಜಾರಿ, ಸಮಿತಿಯ ಗೌರವಾಧ್ಯಕ್ಷ ಸದಾಶಿವ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡುಪರ್ಕಳ, ಕೋಶಾಧಿಕಾರಿ ಅಶೋಕ ಎಂ ಶೆಟ್ಟಿ, ಸಮಿತಿಯ ಸರ್ವ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಊರ ಪರವೂ ಗಣ್ಯರು ಸಂಭ್ರಮಕ್ಕೆ ಸಾಕ್ಷಿಯಾದರು.
ಪಡುಪರ್ಕಳ ಶಂಕರ ಶೆಟ್ಟಿ ಸ್ವಾಗತಿಸಿದರು. ಶಂಕರ ಶೆಟ್ಟಿ ಪೂಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತಿಬೆಟ್ಟು ಪ್ರಕಾಶ ಪೂಜಾರಿ ಮತ್ತು ಪಡುಕುಡೂರು ರಂಜಿತಾ ಕಾರ್ಯಕ್ರಮ ನಿರೂಪಿಸಿದರು.