ಕುಂದಾಪುರ: ಶಾಲಾ ಬಸ್ ಹತ್ತುವ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

Update: 2023-10-21 16:30 GMT

ಕುಂದಾಪುರ: ಶಾಲಾ ಬಸ್ ಹತ್ತುವ ವೇಳೆ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಅ.21 ರಂದು ಬೆಳಗ್ಗೆ ತಲ್ಲೂರಿನಲ್ಲಿ ನಡೆದಿದೆ.

ಮೃತ ಬಾಲಕನನ್ನು ಅಕ್ಷರ ದಾಸೋಹ ಯೋಜನೆ ಕುಂದಾಪುರದ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಹಾಗೂ ಹಕ್ಲಾಡಿ ಪ್ರೌಢಶಾಲಾ ಶಿಕ್ಷಕಿ ಭಾರತಿ ದಂಪತಿಯ ಪುತ್ರ ಪೃಥ್ವಿರಾಜ್ ಶೆಟ್ಟಿ (12) ಎಂದು ಗುರುತಿಸಲಾಗಿದೆ.

ಪೃಥ್ವಿರಾಜ್ ತಲ್ಲೂರಿನ ಮನೆ ಬಳಿ ಶಾಲಾ ಬಸ್ಸಿಗಾಗಿ ಕಾಯುತ್ತಿದ್ದು, ಬಸ್ ಬಂದಾಗ ಹತ್ತುವ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದನೆನ್ನಲಾಗಿದೆ. ತಕ್ಷಣ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಪೃಥ್ವಿರಾಜ್ ಮೃತಪಟ್ಟ ಎಂದು ತಿಳಿದುಬಂದಿದೆ.

ಪೃಥ್ವಿರಾಜ್ ಹಟ್ಟಿಯಂಗಡಿ ಸಿದ್ದಿವಿನಾಯಕ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದು, ಕಲಿಕೆಯಲ್ಲಿ, ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲನಾಗಿದ್ದ. ಶುಕ್ರವಾರವಷ್ಟೇ ಪೃಥ್ವಿರಾಜ್ ಹುಟ್ಟುಹಬ್ಬವನ್ನು ಆಚರಿಸಿದ್ದ. ಈ‌ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ಮಕ್ಕಳು ಮೃತ್ಯು

ಅರುಣ್ ಕುಮಾರ್ ದಂಪತಿಗೆ ಇಬ್ಬರು ಮಕ್ಕಳಿದ್ದು, ಪುತ್ರಿ ಅನುಶ್ರೀ (13) ಕಳೆದ ವರ್ಷದ ಅ.27 ರಂದು ಮನೆಯಲ್ಲಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈಗ ಪುತ್ರ ಪೃಥ್ವಿರಾಜ್ ಸಹ ಸಾವನ್ನಪ್ಪಿದ್ದಾನೆ. ಮಕ್ಕಳಿಬ್ಬರನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News