ಕುಂದಾಪುರ: ಸಮುದಾಯ ಕರ್ನಾಟಕದ ಎಂಟನೇ ರಾಜ್ಯ ಸಮ್ಮೇಳನ

Update: 2023-12-19 09:49 GMT

ಕುಂದಾಪುರ: ʼಘನತೆಯ ಬದುಕು; ಸಾಂಸ್ಕೃತಿಕ ಮಧ್ಯ ಪ್ರವೇಶʼ ಎಂಬ ಘೋಷಣೆಯೊಂದಿಗೆ ಸಮುದಾಯ ಕರ್ನಾಟಕದ ಎಂಟನೇ ರಾಜ್ಯ ಸಮ್ಮೇಳನವು ಡಿಸೆಂಬರ್ 16,17 ರಂದು ಕುಂದಾಪುರದ ಆಶೀರ್ವಾದ ಸಭಾಂಗಣದಲ್ಲಿ ನಡೆಯಿತು.

ಪ್ರಾಸ್ತವಿಕ ಮಾತುಗಳನ್ನಾಡಿದ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ರಾಜಾರಾಂ ತಲ್ಲೂರ್ ಅವರು, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಾಂಸ್ಕೃತಿಕ ಪ್ರಕಾರಗಳ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧನೆಗಳ ಮಾಹಿತಿ ನೀಡಿ, ಘನತೆಯ ಬದುಕಿಗೆ ಇವು ಹೇಗೆ ಪೂರಕವಾಗಬೇಕು ಎನ್ನುತ್ತಾ ಸಮ್ಮೇಳನಕ್ಕೆ ಸ್ವಾಗತ ಕೋರಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಶ್ರೀ. ಪುರುಷೋತ್ತಮ ಬಿಳಿಮಲೆ, ಪ್ರಸ್ತುತ ಸಮಯದಲ್ಲಿ ಸಮುದಾಯ ಸಂಘಟನೆಯ ಸಾಂಸ್ಕೃತಿಕ ಚಳುವಳಿ, ಚಟುವಟಿಕೆಗಳ ಅವಶ್ಯಕತೆಯನ್ನು ಒತ್ತಿ ಹೇಳಿದರು.

ಸಮ್ಮೇಳನದನ ಉದ್ಘಾಟನೆಯ ಭಾಗವಾಗಿ "ರಾಮಧಾನ್ಯ ಚರಿತ್ರೆ" ಎಂಬ ಯಕ್ಷಗಾನ ತಾಳಮದ್ದಳೆಯು ಜೆ ಎನ್ ಯು ನಿವೃತ್ತ ಉಪನ್ಯಾಸಕ ಪುರುಷೋತ್ತಮ ಬಿಳಿಮಲೆಯವರ ಉಪಸ್ಥಿತಿಯಲ್ಲಿ ನಡೆಯಿತು.

ಸಮ್ಮೇಳನದ ಮೊದಲ ದಿನ ಜರ್ನಿ ಥಿಯೇಟರ್ ಮಂಗಳೂರು ಇವರ ರಂಗ ಗೀತೆಗಳ ಗಾಯನ, ಸಮುದಾಯ ಧಾರವಾಡ ಘಟಕ ಪ್ರಸ್ತುತಿಯ ಕುಂ. ವೀರಭದ್ರಪ್ಪ ರಚನೆಯ ವಾಸು ಗಂಗೆರ ನಿರ್ದೇಶನದ "ದೇವರ ಹೆಣ" ನಾಟಕ ಪ್ರದರ್ಶನಗೊಂಡಿತು.

ಮಹಿಳಾ ಹೋರಾಟಗಾರ್ತಿ ಕೆ.ಎಸ್ ಲಕ್ಷ್ಮಿ, ಸಿನಿಮಾ ನಿರ್ದೇಶಕ ಮನ್ಸೋರೇ, ಆದಿವಾಸಿ ಹಕ್ಕುಗಳ ಹೋರಾಟಗಾರ ಶ್ರೀಧರ್ ನಡ, ರಂಗಭೂಮಿ ಕಲಾವಿದೆ ಎನ್. ಮಂಗಳ ಮೊದಲಾದವರು ತಮ್ಮ ತಮ್ಮ ಕ್ಷೇತ್ರದ ಘನತೆಯ ಬದುಕಿನ ಕುರಿತು ವಿಚಾರಗಳನ್ನು ಮಂಡಿಸಿದರು.

ಎರಡು ದಿನದ ಸಮ್ಮೇಳನದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಚರ್ಚಿಸಿ, ಸರ್ವಾನುಮತದಿಂದ ಅಂಗೀಕರಿಸಲಾಯಿತು.

ನಿರ್ಣಯಗಳು:

1. ರಂಗಾಯಣ ಸಂಸ್ಥೆಗಳು ಸರಕಾರವೇ ಸ್ಥಾಪಿಸಿರುವ ಸಾರ್ವಜನಿಕ ವಲಯದ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ರಂಗ ಸಮಾಜವು ಇದರ ಉನ್ನತ ಸಮಿತಿಯಾಗಿದೆ. ಅಂತಹ ರಂಗ ಸಮಾಜದ ಸದಸ್ಯರನ್ನಾಗಿ ಈಗಿನ ಕರ್ನಾಟಕ ಸರ್ಕಾರ ದೇಶದ ಸಂವಿಧಾನ ಮತ್ತು ಬಹುತ್ವ, ಬಹು ಸಂಸ್ಕೃತಿಯನ್ನು ಕಾಪಾಡುವಂತಹ ವ್ಯಕ್ತಿಗಳನ್ನು ಮಾತ್ರವೇ ನೇಮಿಸಬೇಕು. ಅಲ್ಲದೇ ಅಲೆಮಾರಿ ಬುಡಕಟ್ಟು ರಂಗಾಯಣವನ್ನು ಸ್ಥಾಪಿಸುವ ಮೂಲಕ ರಾಜ್ಯದ ಮೂಲ ನಿವಾಸಿಗಳ ಸಾಂಸ್ಕೃತಿಕ ಅಭಿವ್ಯಕ್ತಿಗೆ ಮತ್ತು ಅವರ ಆಸ್ಮಿತೆಗೆ ಅವಕಾಶ ಕಲ್ಪಿಸಿ ಕೊಡಬೇಕು. ಕಾರ್ಕಳದ ಯಕ್ಷರಂಗವನ್ನು ಜನಪದ ರಂಗಾಯಣವನ್ನಾಗಿ ಪರಿವರ್ತಿಸಬೇಕು.

2. ಬೆಂಗಳೂರು ಚಿತ್ರೋತ್ಸವಕ್ಕೆ ಸೂಕ್ತ ಶಾಶ್ವತ ರೂಪ ಕಲ್ಪಿಸಿಕೊಡಲು ಕರ್ನಾಟಕ ಸರ್ಕಾರವು ಕ್ರಮ ಕೈಗೊಳ್ಳಬೇಕು. ಚಲನಚಿತ್ರೋತ್ಸವಕ್ಕೆ ಒಂದು ಸೂಕ್ತ ದಿನಾಂಕ ನಿಗದಿಗೊಳಿಸಬೇಕು. ಶಾಶ್ವತ ನಿರ್ದೇಶನಾಲಯವನ್ನು ಸ್ಥಾಪಿಸಿ, ಆ ನಿರ್ದೇಶನಾಲಯಲ್ಲಿ ಸೃಜನಶೀಲ ಚಲನಚಿತ್ರ ಕಲಾವಿದರು, ವಿಮರ್ಶಕರು ಫಿಲಂ ಸೊಸೈಟಿಗಳ ಸಕ್ರಿಯ ಪ್ರತಿನಿಧಿಗಳು, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಇರಬೇಕು. ಸಿನಿಮಾಗಳ ಆಯ್ಕೆಯಲ್ಲಿ ಮತ್ತು ಪ್ರಶಸ್ತಿಗಳಲ್ಲಿ ಈ ಹಿಂದೆ ಕೇಳಿ ಬಂದಿರುವ ರಾಜಕೀಯ ಮಧ್ಯ ಪ್ರವೇಶ, ವಶೀಲಿಬಾಜಿ ಮತ್ತಿತರ ಆರೋಪಗಳು ಬಾರದಂತೆ ಸೂಕ್ತ ಜ್ಯೂರಿ ವ್ಯವಸ್ಥೆ ಕಲ್ಪಿಸಬೇಕು.

3. ನಾಡಿನ ಸೌಹಾರ್ದ ಪರಂಪರೆಯನ್ನು ಉಳಿಸುವತ್ತ-ಸಾಮರಸ್ಯವನ್ನು ಬೆಳೆಸಲು ಚಟುವಟಿಕೆ ರೂಪಿಸಲು ನಿರ್ಣಯವನ್ನು ಕೈಗೊಂಡಿದ್ದು ಕರ್ನಾಟಕದ ಶರಣ, ಸಂತ, ಸೂಫಿ, ದಾಸರು ತತ್ವಪದಕಾರರು ಕಟ್ಟಿಕೊಟ್ಟ ಸೌಹಾರ್ದತೆಯನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕದ ಪ್ರಜ್ಞಾವಂತ ಜನರು ಮತ್ತು ಸಂಘಟನೆಗಳ ಜೊತೆಯಾಗಿ ಸಮುದಾಯ ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ಗಾಂಧಿ ಹುತಾತ್ಮ ದಿನವಾದ ಜನವರಿ 30ರಂದು ಸೌಹಾರ್ದ ಮನೋಭಾವವನ್ನು ಜನರ ಮಧ್ಯೆ ಕೊಂಡೊಯ್ಯಲು ಸಹಕಾರಿಯಾಗುವಂತಹ ವಿಚಾರ ಗೋಷ್ಠಿಗಳು, ಮಾನವ ಸರಪಳಿ ಮುಂತಾದ ಕಾರ್ಯಕ್ರಮಗಳನ್ನು ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.

ಪ್ರಸ್ತುತ ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷಗಳಿಗೆ ನೂತನ ರಾಜ್ಯ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷ: ಶಶಿಧರ ಜೆ.ಸಿ

ಪ್ರಧಾನ ಕಾರ್ಯದರ್ಶಿ: ಮನೋಜ್ ವಾಮಂಜೂರ್

ಖಜಾಂಚಿ: ಎಸ್.ದೇವೇಂದ್ರಗೌಡ

ಉಪಾಧ್ಯಕ್ಷರು: ಗುಂಡಣ್ಣ ಚಿಕ್ಕಮಗಳೂರು, ಬಿ.ಐ.ಈಳಿಗೇರ, ಕೆ.ಪ್ರಭಾಕರ್

ಜೊತೆ ಕಾರ್ಯದರ್ಶಿಗಳು: ಉದಯ ಗಾಂವಕರ್, ಕಾವ್ಯ ಅಚ್ಯುತ್, ಜನಾರ್ದನ ಕೆ.ಜಿ.ಎಫ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News