ಕುಂದಾಪುರ: ಕುಗ್ರಾಮದ ಕೆಸರು ಗದ್ದೆಯಲ್ಲಿ ವಿದ್ಯಾರ್ಥಿಗಳಿಂದ ನಾಟಿ

Update: 2023-07-22 15:53 GMT

ಯೋಗೀಶ್ ಕುಂಭಾಸಿ

ಕುಂದಾಪುರ, ಜು.22: ಶಾಲೆಯಲ್ಲಿ ಆಟ-ಪಾಠದಲ್ಲಿ ನಿರತರಾಗಿರಬೇಕಾಗಿದ್ದ ಮಕ್ಕಳು ಶನಿವಾರ ಬೆಳಗ್ಗೆ ಕುಗ್ರಾಮದ ಗದ್ದೆಗೆ ಬಂದು ಕಾಲಕಳೆದರು. ಮಳೆಯ ನಡುವೆಯೂ ಕೆಸರು ಗದ್ದೆಯಲ್ಲಿ ಭತ್ತ ನಾಟಿ ಮಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕೃಷಿ ರಂಗದತ್ತ ಯುವ ಜನತೆ ಬೆನ್ನು ಹಾಕುತ್ತಿರುವ ಮಧ್ಯೆಯೇ ಗುರುಕುಲ ವಿದ್ಯಾಸಂಸ್ಥೆಯ ಯುವ ವಿದ್ಯಾರ್ಥಿಗಳ ಕೃಷಿ ಆಸಕ್ತಿ ಮಾದರಿ ಯಾಗಿದೆ.

ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಶನಿವಾರ ನೇರಳಕಟ್ಟೆ ಹಾಗೂ ಆಜ್ರಿ ಮಧ್ಯಭಾಗದ ಬಾಂಡ್ಯ ಎಂಬ ಕುಗ್ರಾಮದಲ್ಲಿ ನಾಟಿ ಕಾರ್ಯಕ್ಕಾಗಿ ಆಗಮಿಸಿದ್ದು ಶಾಲಾ ಆಡಳಿತ ಮಂಡಳಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಮಕ್ಕಳನ್ನು ವಿಶೇಷವಾಗಿ ಬರ ಮಾಡಿಕೊಳ್ಳಲಾಯಿತು. ಗದ್ದೆಗೆ ಬಂದ ವಿದ್ಯಾರ್ಥಿಗಳು ಹಿಂದೆ ಮುಂದೆ ನೋಡದೇ ಮೊದಲೇ ಉಳುಮೆ ಮಾಡಿದ್ದ ಗದ್ದೆಗಿಳಿದು ನಾಟಿ ಕಾರ್ಯಕ್ಕೆ ಮುಂದಾದರು.

ಸ್ಥಳೀಯರ ಕೃಷಿಕ ಮಹಿಳೆಯರು ಈ ವಿದ್ಯಾರ್ಥಿಗಳಿಗೆ ನಾಟಿ ಕೆಲಸಕ್ಕೆ ಗುರು ಗಳಾದರು. ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಹಿರಿಯರು ಹೇಳಿ ಕೊಟ್ಟಂತೆಯೇ ಕೈಯಲ್ಲಿ ನೇಜಿ ಹಿಡಿದು ಸಾಲು ನಾಟಿ ಮಾಡಿ ಸಂಭ್ರಮಿಸಿದರು. ಮಕ್ಕಳ ಈ ಜೋಷ್ ನೋಡಿ ಅನುಭವಿ ಕೃಷಿಕ ಮಹಿಳೆಯರೇ ಒಂದು ಕ್ಷಣ ದಂಗಾಗುವಂತೆ ಮಕ್ಕಳು ನಾಜೂಕಾಗಿ ನಾಟಿ ಮಾಡಿ ಸೈ ಎನಿಸಿಕೊಂಡರು. ವಿದ್ಯಾರ್ಥಿಗಳ ಜೊತೆ ನಾಟಿ ಕಾರ್ಯದಲ್ಲಿ ಸಂಸ್ಥೆಯ ಶಿಕ್ಷಕರೂ ಕೂಡ ಭಾಗಿಯಾಗಿದ್ದರು.

‘ಗುರುಕುಲ ವಿದ್ಯಾಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಗಳಿಗೂ ವಿಶೇಷ ಆಸಕ್ತಿ ನೀಡಲಾಗಿದೆ. ಭತ್ತದ ಹೇಗೆ ಬೆಳೆಯಲಾಗುತ್ತಿದೆ ಎನ್ನುವ ಗೊಂದಲ ಇರುವ ಮಕ್ಕಳಿಗೆ ಪ್ರಾಯೋಗಿಕವಾಗಿ ಭತ್ತದ ಗಿಡಗಳ ನಾಟಿ ಕಾರ್ಯ, ರೈತಾಪಿ ವರ್ಗದ ಶ್ರಮ ಅರ್ಥ ಮಾಡಿಕೊಳ್ಳಬೇಕು ಎನ್ನುವ ಕಾರಣ ಕ್ಕಾಗಿ ಗ್ರಾಮೀಣ ಭಾಗದ ಗದ್ದೆಗಳಲ್ಲಿ ಸಾವಯವ ಮಾದರಿಯ ಕೃಷಿ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಬಾಂಡ್ಯ ಎಜುಕೇಷನ್ ಟ್ರಸ್ಟ್‌ನ ಜಂಟಿ ಕಾರ್ಯ ನಿರ್ವಾಹಕ ಟ್ರಸ್ಟಿ ಅನುಪಮಾ ಎಸ್.ಶೆಟ್ಟಿ ತಿಳಿಸಿದರು.

ಬೆಂಗಳೂರು, ಬೆಳಗಾವಿ, ಗದಗ, ಬಾಗಲಕೋಟೆ , ಕೊಪ್ಪಳ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಕುಂದಾಪುರಕ್ಕೆ ವಿದ್ಯಾರ್ಜನೆ ಸಲುವಾಗಿ ಬಂದ ಮಕ್ಕಳಲ್ಲಿ ನಾಟಿ ಕಾರ್ಯ ಹೇಳಿಕೊಡುವ ಜೊತೆಗೆ ಕೆಸರಿನಲ್ಲಿ ಆಟೋಟ ನಡೆಸಲಾಯಿತು. ಭತ್ತದ ಸಸಿಯನ್ನು ಹೊತ್ತು ತರುವುದರಿಂದ ಹಿಡಿದು, ಗದ್ದೆ ಹಸನ ಮಾಡುವುದು, ಅಂಚು ಕಡಿಯುವುದು, ಗದ್ದೆಯ ಕೆಸರಿನಲ್ಲಿ ನೆಡುವುದರ (ನಾಟಿ ಮಾಡುವುದರ)ವರೆಗೂ ಮಾರ್ಗದರ್ಶನ ಪಡೆದುಕೊಂಡರು.

ಬಾಂಡ್ಯ ಎಜುಕೇಷನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಸುಭಾಶ್ಚಂದ್ರ ಶೆಟ್ಟಿ, ಶಿಕ್ಷಕರಾದ ಸುಷ್ಮಾ ಮುರಳಿ, ರಾಮ ಖಾರ್ವಿ, ರಾಘವೇಂದ್ರ ಅಮ್ಮುಜೆ, ಸುಲಕ್ಷಣಾ, ರವಿಶಂಕರ್ ಇದ್ದರು.

2ನೇ ವರ್ಷದ ಕಾರ್ಯಕ್ರಮ

ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಗುರುಕುಲ ವಿದ್ಯಾಸಂಸ್ಥೆ ಪ್ರತಿ ವಿಚಾರದಲ್ಲೂ ಹೊಸತನವನ್ನು ಪರಿಚಯಿಸುತ್ತಲಿದ್ದು ಸಂಸ್ಥೆಯ ಜಂಟಿ ಕಾರ್ಯ ನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ- ಅನುಪಮಾ ಎಸ್. ಶೆಟ್ಟಿಯವರ ಚಿಂತನೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಸಮಾನ ಪ್ರೋ ನೀಡಲಾಗುತ್ತಿದೆ. ಈ ಪರಿಕಲ್ಪನೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಈ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಶಾಲೆಯ ಎಸ್‌ಎಸ್‌ಎಲ್ಸಿ ತರಗತಿಯ ಸುಮಾರು 76 ವಿದ್ಯಾರ್ಥಿಗಳನ್ನು ಬಾಂಡ್ಯದ ಕೃಷಿ ಗದ್ದೆಗೆ ಕರೆತಂದು ಕೃಷಿ ಅನುಭವಿಗಳ ಮೂಲಕ ಅವರಿಗೆ ನಾಟಿ ಮಾಡುವುದನ್ನು ಹೇಳಿಕೊಟ್ಟು ಅವರ ಜೊತೆಗೆ ನಾಟಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಯಿತು. ವಿದ್ಯಾರ್ಥಿಗಳು ಮಳೆಯ ನಡುವೆಯೂ ನಾಟಿ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ನೇಜಿ ನೆಡಲು ಯಾವುದೇ ಅಭ್ಯಾಸವಿರ ದಿದ್ದರೂ ಆಯಾಸವಿಲ್ಲದೆ ಸಾಮೂಹಿಕವಾಗಿ ಗದ್ದೆಯಲ್ಲಿ ಮಜಾ ಉಡಾಯಿಸುತ್ತಾ ಎಕರೆಗಟ್ಟಲೆ ಗದ್ದೆಯನ್ನು ಹಚ್ಚ ಹಸುರಾಗಿಸಿದರು.

"ಶಿಕ್ಷಣದ ಜೊತೆಗೆ ಶಿಕ್ಷಣೇತರ ಚುಟುವಟಿಕೆಗೆ ಗುರುಕುಲ ಸಂಸ್ಥೆ ಪ್ರೋ ನೀಡುತ್ತಿದೆ. ಭತ್ತ ಎಲ್ಲಿ ಬೆಳೆಯುತ್ತಾರೆ ಎಂಬುದು ಕೆಲ ಮಕ್ಕಳಿಗೆ ತಿಳಿದಿಲ್ಲ. ಮಕ್ಕಳು ಕೃಷಿ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲಿ ಬಂದವರಲ್ಲಿ ಹತ್ತು ಜನರಾದರೂ ಆಸಕ್ತಿ ತೋರಿ ಕೃಷಿ ಒಲವು ತೋರಿದರೆ ಇದು ದೇಶಕ್ಕೆ ನೀಡುವ ಕೊಡುಗೆ. ಶಿಕ್ಷಣ ಸಂಸ್ಥೆಯ ಜವಬ್ದಾರಿ ಕೂಡ ಇದಾಗಿದೆ".

-ವಿಶಾಲಾ ಶೆಟ್ಟಿ, ಶಿಕ್ಷಕಿ

‘ಭಾರತದಂತಹ ಕೃಷಿ ಪ್ರಧಾನವಾದ ದೇಶದಲ್ಲಿ ಶಾಲೆಯ ಕೊಠಡಿಯ ಒಳಗೆ ದೊರಕುವ ಮಾಹಿತಿಗಿಂತ, ಪ್ರಾಯೋಗಿಕವಾಗಿ ದೊರಕುವ ಅನುಭ ವವೇ ಹೆಚ್ಚು ಉಪಯುಕ್ತ. ಈ ದಿನದ ವಿಶೇಷ ಅನುಭವ ಆಗಿದೆ. ಮನೆಯಲ್ಲಿ ಗದ್ದೆ ಕೆಲಸದಲ್ಲಿ ತೊಡಗಿಸಿಕೊಂಡ ಅನುಭವಗಳಿರಲಿಲ್ಲ. ಇಂದು ನಾವೆಲ್ಲಾ ಒಟ್ಟಾಗಿ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿರುವುದು ತುಂಬಾ ಸಂತೋಷ ತಂದಿದೆ’

ಪ್ರಣವ್ ಶೆಟ್ಟಿ ಮತ್ತು ಸಾನ್ವಿ, ವಿದ್ಯಾರ್ಥಿಗಳು

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News