ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಕನ್ನಡದ ಅವನತಿಯ ಸಂಕೇತ: ನರಸಿಂಹ ಐತಾಳ

Update: 2024-06-11 16:17 GMT

ಕೋಟ: ಸರಕಾರಿ ಶಾಲೆಗಳಲ್ಲೂ ಶಿಕ್ಷಕರ ಕೊರತೆ, ಮೂಲ ಸೌಕರ್ಯದ ಕೊರತೆಯಿಂದ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಕನ್ನಡ ಶಾಲೆಗಳು ಮುಚ್ಚುತ್ತಿರುವುದೇ ಕನ್ನಡದ ಅವನತಿಯ ಸಂಕೇತ ಎಂದು ಬ್ರಹ್ಮಾವರ ತಾಲೂಕು ಸಮ್ಮೇಳನಾಧ್ಯಕ್ಷ, ಶಿಕ್ಷಕ ಪಾರಂಪಳ್ಳಿ ನರಸಿಂಹ ಐತಾಳ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕದ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ ಸಹಕಾರದಲ್ಲಿ ಜೂ.11 ರಂದು ಸಾಲಿಗ್ರಾಮ-ಪಾರಂಪಳ್ಳಿಯ ಮಹಾವಿಷ್ಣು ಸಭಾಂಗಣದಲ್ಲಿ ಜರಗಿದ ಬ್ರಹ್ಮಾವರ ತಾಲೂಕು ೪ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕನ್ನಡ ಶಾಲೆಗಳಿಗೆ ಸರಕಾರ ಸೂಕ್ತ ಮೂಲ ಸೌಕರ್ಯನಗಳನ್ನು ನೀಡಬೇಕು. ಈ ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ನೀಡುವ ಕೃಪಾಂಕ ಹೆಚ್ಚಬೇಕು. ಗ್ರಾಮೀಣ ಕೃಪಾಂಕ ವ್ಯವಸ್ಥೆ ಕೇವಲ ಸರಕಾರಿ ಕನ್ನಡ ಶಾಲೆಗಳಲ್ಲಿ ಕಲಿತವರಿಗೆ ಮಾತ್ರ ದೊರಕ ಬೇಕು. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಕಾರ್ಯಳವನ್ನು ಸಂಘಟನೆಗಳ ಜತೆಗೆ ಸರಕಾರ ಕೂಡ ಮಾಡಬೇಕು. ಆಗ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವ ನಾಯ್ಕ್ ರಾಷ್ಟ್ರ ಧ್ವಜಾರೋಹಣ ಹಾಗೂ ಕ.ಸಾ.ಪ. ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ತಾಲೂಕಿನಲ್ಲಿ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ವೈದ್ಯ ಡಾ.ವಿಷ್ಣುಮೂರ್ತಿ ಐತಾಳ ಸನ್ಮಾನಿಸಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಜಗದೀಶ್ ಶೆಟ್ಟಿ, ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕ.ಸಾ.ಪ. ಪದಾಕಾರಿಗಳಾದ ನರೇಂದ್ರ ಕುಮಾರ್ ಕೋಟ, ಮನೋಹರ ಪಿ., ಸತೀಶ್ ವಡ್ಡರ್ಸೆ, ಅಚ್ಯುತ್ ಪೂಜಾರಿ, ರಂಗಪ್ಪಯ್ಯ ಹೊಳ್ಳ, ಉದ್ಯಮಿ ರಾಮಚಂದ್ರ ಉಪಾಧ್ಯ ಮೊದ ಲಾದವರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಶ್ರೀಪತಿ ಹೇರ್ಳೆ ಸ್ವಾಗತಿಸಿದರು. ಜ್ಯೋತಿ ಕೃಷ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಗೆಳೆಯರ ಬಳಗದ ತಾರಾನಾಥ ಹೊಳ್ಳ ವಂದಿಸಿದರು. ಇದಕ್ಕೂ ಮುನ್ನಾ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು.

ಬಹುವಿಧಗೋಷ್ಠಿಯ ಮೂಲಕ ಜನಪದ ಸಾಹಿತ್ಯ, ಕುಂದಗನ್ನಡ ಸಾಹಿತ್ಯ, ಕಥವಾಚನ, ಅನುಭವ ಕಥನ ಮೊದಲದ ಹಲವು ವಿಚಾರಗಳ ಕುರಿತು ವಿಚಾರ ಮಂಡನೆ ನಡೆಯಿತು. ಭಾಗವತ ನಾರಾಯಣ ಶಬರಾಯ ಅವರಿಂದ ತೆಂಕು-ಬಡಗು ಎರಡು ತಿಟ್ಟುಗಳ ಆಯ್ದ ಯಕ್ಷಗಾಯನದ ಸಮನ್ವಯ ನಡೆಯಿತು.

‘ಸಾಹಿತ್ಯ ಸೇವೆಯನ್ನು ಮನೆ-ಮನೆಗಳಿಗೆ ತಲುಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಮನೆ-ಮನೆಗಳಲ್ಲಿ ಸಾಹಿತ್ಯ ಚಟುವಟಿಕೆಯನ್ನು ಆಯೋಜಿಸಲಾಗುವುದು’

-ಗುಂಡ್ಮಿ ರಾಮಚಂದ್ರ ಐತಾಳ, ಅಧ್ಯಕ್ಷರು, ಕಸಾಪ ಬ್ರಹ್ಮಾವರ ತಾಲೂಕು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News