ಎನ್ನೆಸ್ಸೆಸ್ನಿಂದ ಸಮಾಜ ಸೇವೆಯ ಬಗ್ಗೆ ಒಲವು: ಪ್ರೊ.ವಿನಿತಾ
ಮಂಗಳೂರು, ಸೆ.25: ರಾಷ್ಟೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿ ಯುವ ಸಮೂಹ ಆತ್ಮ ವಿಶ್ವಾಸದ ಜೊತೆಗೆ ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಶ್ರದ್ದೆ, ಪ್ರಾಮಾಣಿಕತೆ ಮತ್ತು ನಿಷ್ಟೆಯಿಂದ ಮಾಡುತ್ತಾರೆ. ಹಾಗಾಗಿ ರಾಷ್ಟೀಯ ಸೇವಾ ಯೋಜನೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಷನಿ ನಿಲಯದ ನಿವೃತ್ತ ಪರೀಕ್ಷಾಂಗ ಕುಲಸಚಿವೆ ಪ್ರೊ.ವಿನಿತಾ ಕೆ. ಹೇಳಿದ್ದಾರೆ.
ಕೂಳೂರಿನ ಎನಪೋಯ ಪದವಿ ಕಾಲೇಜಿನಲ್ಲಿ ರಾಷ್ಟೀಯ ಸೇವಾ ಯೋಜನೆ ತಂಡ -10 ಇದರ ವತಿಯಿಂದ ಹಮ್ಮಿ ಕೊಳ್ಳಲಾದ ರಾಷ್ಟೀಯ ಸೇವಾ ಯೋಜನೆ-2024 ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ವಿದ್ಯಾರ್ಥಿಗಳಿಗೆ ಬೌದ್ಧಿಕ ಮಟ್ಟದ ಶಿಕ್ಷಣವನ್ನು ಶಿಕ್ಷಣ ಸಂಸ್ಥೆಗಳು ನೀಡಿದರೆ ಸಾಮಾಜಿಕವಾಗಿ ಎಲ್ಲರಲ್ಲೂ ಒಳಗೊಳ್ಳುವ ನಿಷ್ಕಲ್ಮಶ ಮನೋಭಾವವನ್ನು ರಾಷ್ಟೀಯ ಸೇವಾ ಯೋಜನೆಯು ನೀಡುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಅರುಣ್. ಎ ಭಾಗವತ್ ಮಾತನಾಡಿ, ವಿದ್ಯಾರ್ಥಿ ಯುವ ಸಮೂಹಕ್ಕೆ ಸಮಯದ ಮಹತ್ವ, ಸೇವೆಯ ಮಹತ್ವ ಮತ್ತು ಕೂಡಿ ಬಾಳುವ ಮಹತ್ವವನ್ನು ರಾಷ್ಟ್ರೀಯ ಸೇವಾ ಯೋಜನೆ ಕಲಿಸಿಕೊಡುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ಶರೀನಾ ಪಿ., ನಾರಾಯಣ ಸುಕುಮಾರ್, ಡಾ.ಜೀವನ್ ರಾಜ್ ಹಾಗು ರಾಷ್ಟೀಯ ಸೇವಾ ಯೋಜನೆ ತಂಡ ಯೋಜನಾಧಿಕಾರಿ ಅಬ್ದುಲ್ ರಶೀದ್ ಎಂ. ಹಾಗು ತಂಡದ ವಿದ್ಯಾರ್ಥಿ ನಾಯಕ ಜುಲ್ಫಿಕರ್ ಅಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಭಿರಾಮಿ ನಿರೂಪಿಸಿದರು. ಝುಲ್ಫಿಕರ್ ಅಲಿ ವಂದಿಸಿದರು.