ಸಂತೆಕಟ್ಟೆ ಹೆದ್ದಾರಿ ಸಮಸ್ಯೆ; ಸಂಸದರು, ಶಾಸಕರಿಂದ ಕಾಲಹರಣ: ವರೋನಿಕಾ ಆರೋಪ
ಉಡುಪಿ, ಸೆ.25: ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ರಸ್ತೆ ಕಾಮಗಾರಿ ಅವ್ಯವಸ್ಥೆಯಿಂದ ಜನತೆ ರೋಸಿ ಹೋಗಿದ್ದು ಸ್ಥಳೀಯ ಸಂಸದರು ಮತ್ತು ಶಾಸಕರು ಕೇವಲ ಭೇಟಿ, ಹೇಳಿಕೆ ಬಿಟ್ಟರೆ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಬಿಸಿಮುಟ್ಟಿಸುವ ಬದಲು ಕಾಲಹರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂತೆಕಟ್ಟೆ ಅಂಡರ್ ಪಾಸ್ ರಸ್ತೆ ಕಾಮಗಾರಿ ಆರಂಭಗೊಂಡು ಮೂರು ವರ್ಷ ಆಗುತ್ತಿದ್ದು, ಇಷ್ಟೊಂದು ದೊಡ್ಡ ಮಟ್ಟದ ಯೋಜನೆ ಕೈಗೊಳ್ಳುವಾಗ ಸೂಕ್ತವಾದ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕಾಗಿತ್ತು. ಅಭಿವೃದ್ಧಿ ಕಾಮಗಾರಿ ಮಾಡು ವಾಗ ಸಮಸ್ಯೆಗಳು ಆಗುವುದು ಸಹಜ ಆದರೆ ಜನರಿಗೆ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಸ್ಥಳೀಯ ಉಡುಪಿ ಶಾಸಕರು ದಿನಬೆಳಗಾದರೆ ದೇಶದ ರಾಜ್ಯದ ವಿಚಾರ ಗಳಿಗೆ ಹೇಳಿಕೆ ನೀಡುತ್ತಾರೆ. ಆದರೆ ಕೇಂದ್ರದಲ್ಲಿ ಅವರದ್ದೇ ಸರಕಾರ ಇದ್ದು ಒತ್ತಡ ಹಾಕಿ ಸೂಕ್ತ ವ್ಯವಸ್ಥೆ ಮಾಡುವಲ್ಲಿ ಯಾಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಿಮಗೆ ಜನರು ಮತ ಹಾಕಿ ಆಯ್ಕೆ ಮಾಡಿದ ಮೇಲೆ ಕೇಂದ್ರ ಸಚಿವರ ಬಳಿ ಹೋಗಿ ಒತ್ತಡಹಾಕಿ ಸೂಕ್ತ ಪರಿಹಾರ ಹುಡುಕಬೇಕಾದ ಜವಾಬ್ದಾರಿ ನಿಮಗೆ ಇಲ್ಲವೇ? ಶಾಸಕರು ಸಂತೆಕಟ್ಟೆ ರಸ್ತೆ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನಾದರೂ ಸಂಸದರು ಮತ್ತು ಶಾಸಕರು ಜೊತೆಯಾಗಿ ಹೋಗಿ ಇಲ್ಲಿನ ಸಮಸ್ಯೆಯನ್ನು ಮನದಟ್ಟು ಮಾಡಿ ಸೂಕ್ತ ವ್ಯವಸ್ಥೆಯನ್ನು ಮಾಡುವಂತೆ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.