ಹಸಿರು ರಾಜಕೀಯ ಸಿದ್ಧಾಂತ ನಮಗಿಂದು ಬೇಕಾಗಿದೆ: ಡಾ.ಮಾರ್ಕ್ವಾಡ್

ಉಡುಪಿ, ಮಾ.22: ನಮ್ಮ ಮನುಷ್ಯ ಕೇಂದ್ರಿತ ಜೀವನ ದೃಷ್ಟಿಕೋನವು ಹವಾಮಾನ ತುರ್ತುಸ್ಥಿತಿಗೆ ಕಾರಣವಾಗಿದೆ. ಹೀಗಾಗಿ ಇಂದು ನಮಗೆ ಬೇಕಾಗಿರುವುದು ಹಸಿರು ರಾಜಕೀಯ ಸಿದ್ಧಾಂತ ಎಂದು ಜರ್ಮನಿಯ ಡಾರ್ಮ್ಸ್ಟಾಡ್ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಜೆನ್ಸ್ ಮಾರ್ಕ್ವಾಡ್ ಹೇಳಿದ್ದಾರೆ.
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಮತ್ತು ಡಿಪಾರ್ಟ್ಮೆಂಟ್ ಆಪ್ ಜಿಯೋಪಾಲಿಟಿಕ್ಸ್ ಅಂಡ್ ಇಂಟರ್ನೇಷನಲ್ ರಿಲೇಶನ್ಸ್ (ಡಿಜಿಐಆರ್) ಇವರ ಜಂಟಿ ಆಶ್ರಯದಲ್ಲಿ ‘ಜಿಯೋಪಾಲಿಟಿಕ್ಸ್ ಆಂಡ್ ಪೀಸ್ ಇನ್ ದಿ ಆಂಥ್ರೊಪೊಸೀನ್’ ವಿಷಯದಲ್ಲಿ ‘ಭೂರಾಜಕೀಯ ಮತ್ತು ಶಾಂತಿ’ ಕುರಿತು ಅವರು ಮಾತನಾಡಿದರು.
ಮಾನವ ಕೇಂದ್ರಿತ ಬೆಳವಣಿಗೆಯ ಮಾದರಿಯ ಹುಟ್ಟು ಮತ್ತು ವಿಕಸನ ವನ್ನು ವಿವರವಾಗಿ ತಿಳಿಸಿದ ಡಾ. ಜೆನ್ಸ್ ಮಾರ್ಕ್ವಾಡ್, ಇಂದು ಇದು ಗಂಭೀರ ಹವಾಮಾನ ಬಿಕ್ಕಟ್ಟಿಗೆ ಕಾರಣವಾಗಿದೆ. ಇದು ಜಾಗತಿಕ ರಾಜಕೀಯ ದಲ್ಲಿ ಶಾಂತಿಗೆ ಅಡ್ಡಿಯಾಗಿ ಪರಿಣಮಿಸಿದೆ ಎಂದರು.
ತ್ವರಿತ ಕೈಗಾರಿಕೀಕರಣವು ಹವಾಮಾನದ ಮೇಲೆ ಮನುಷ್ಯ ಚಟುವಟಿಕೆಗಳ ಪ್ರಭಾವದ ವೇಗವನ್ನು ಅಧಿಕಗೊಳಿಸಿದೆ ಹಾಗೂ ಇದು ತಾಂತ್ರಿಕ ಸರ್ವಾಧಿಕಾರಕ್ಕೂ ಕಾರಣವಾಗಿದೆ. ಈ ಬಿಕ್ಕಟ್ಟನ್ನು ಎದುರಿ ಸಲು ನಮಗೆ ಹಸಿರು ರಾಜಕೀಯ ಸಿದ್ಧಾಂತ ಮತ್ತು ಆಮೂಲಾಗ್ರ ಪ್ರಜಾಪ್ರಭುತ್ವದ ಅಗತ್ಯವಿದೆ ಎಂದು ಅವರು ವಿವರಿಸಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಮಾತನಾಡಿ, ಇಂದಿನ ಜಾಗತಿಕ ಬೆಳವಣಿಗೆಗಳನ್ನು ನೋಡಿದರೆ ಇಂದು ಜಗತ್ತು ವಾಸ್ತವಿಕತೆ ಮತ್ತು ಆದರ್ಶವಾದ ಎರಡರಿಂದಲೂ ಅಸಂಗತೆಯ ಕಡೆಗೆ ಸಾಗುತ್ತಿರುವಂತೆ ತೋರುತ್ತಿದೆ ಎಂದರು.
ಡಿಜಿಐಆರ್ ಮುಖ್ಯಸ್ಥೆ ಪ್ರೊ. ವಿಜಯಲಕ್ಷ್ಮಿ, ಹವಾಮಾನ ಬಿಕ್ಕಟ್ಟು ಮತ್ತು ಶಾಂತಿ ಜಿಯೋ ಪಾಲಿಟಿಕ್ಸ್ನಲ್ಲಿ ಪರಸ್ಪರ ಸಂಬಂಧವನ್ನು ಹೊಂದಿವೆ ಎಂದು ಹೇಳಿದರು.
ಡಾ ಧನಶ್ರೀ ಜಯರಾಮ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ಶ್ರಾವ್ಯ ಬಾಸ್ರಿ ವೈದಿಕ ಶಾಂತಿ ಮಂತ್ರ ಹಾಡಿದರು.