ಧ್ವನಿ ವಿನ್ಯಾಸ ತಂತ್ರಜ್ಞಾನದ ಸರಿಯಾದ ಬಳಕೆ ಅಗತ್ಯ: ಫಣಿರಾಜ್
ಮಣಿಪಾಲ: ಧ್ವನಿ ವಿನ್ಯಾಸದಲ್ಲಿ ತಂತ್ರಜ್ಞಾನವನ್ನು ಚಿಂತನಶೀಲ ವಾಗಿ ಬಳಸಬೇಕಾಗುತ್ತದೆ. ಇಲ್ಲದಿದ್ದರೆ ಅದರ ಪರಿಣಾಮ ಅರ್ಥಹೀನ ಎಂದು ಚಿಂತಕ, ಲೇಖಕ ಪ್ರೊ.ಕೆ. ಫಣಿರಾಜ್ ಹೇಳಿದ್ದಾರೆ.
ಸೋಮವಾರ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಸಂಗೀತಗಾರ ಋತ್ವಿಕ್ ಕಾಯ್ಕಿಣಿ ಅವರು ನಡೆಸುತ್ತಿರುವ ಧ್ವನಿ ವಿನ್ಯಾಸದ ಐದು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆಲೋಚನೆಯಿಲ್ಲದ ತಂತ್ರಜ್ಞಾನವು ಹಾನಿಕಾರಕವೂ ಆಗಬಹುದು. ಸಿನಿಮಾ ಜಗತ್ತಿನಲ್ಲಿ ಧ್ವನಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಶಬ್ದದ ಪರಿಣಾಮವನ್ನು ಹೆಚ್ಚಿಸಲು ಮೌನವನ್ನು ಪರಿಣಾಮಕಾರಿಯಾಗಿ ಬಳಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಸಿಪಿಎಎಸ್ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಅವರು ಎಲ್ಲಾ ಕಲೆಗಳಲ್ಲಿ ಧ್ವನಿಯ ತಾತ್ವಿಕತೆ ಮತ್ತು ಸೌಂದರ್ಯ ಪ್ರಜ್ಞೆಯ ಅಗತ್ಯವನ್ನು ಒತ್ತಿ ಹೇಳಿದರು.
ಸಂಗೀತಗಾರ ಋತ್ವಿಕ್ ಕಾಯ್ಕಿಣಿ ಅವರು ಧ್ವನಿ ವಿನ್ಯಾಸದ ಮೂಲಭೂತ ಅಂಶಗಳೊಂದಿಗೆ ಕಾರ್ಯಾಗಾರವನ್ನು ಪ್ರಾರಂಭಿಸಿದರು. ಕಾರ್ಯಾಗಾರವು ಅ.೨೫ರವರೆಗೆ ಜಿಸಿಪಿಎಎಸ್ನ ಸರ್ವೋದಯ ಸಭಾಂಗಣದಲ್ಲಿ ನಡೆಯಲಿದೆ.