ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2024-06-16 15:24 GMT

Photo : x/@siddaramaiah

ವಿಜಯಪುರ : ‘ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿಲ್ಲಿ ಪ್ರತಿಪಾದಿಸಿದ್ದಾರೆ.

ರವಿವಾರ ನಗರದಲ್ಲಿ ಸ್ವಾತಂತ್ರ ಸೇನಾನಿ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಾಧವಾನಂದ ಪ್ರಭುಗಳ ಪುಣ್ಯತಿಥಿ ಸಪ್ತಾಹದ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಮಾಧವಾನಂದ ಪ್ರಭುಗಳ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ ಬಳಿಕ ಕಳಸಾರೋಹಣದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಮಾಧವಾನಂದ ಸ್ವಾಮಿಗಳು ಬಹುತ್ವದ ಪರವಾಗಿದ್ದರು. ಈ ಕಾರಣಕ್ಕೆ ಇವರನ್ನು ಸ್ಮರಿಸಬೇಕಾಗಿದೆ ಎಂದ ಅವರು, ಪಾಳೇಗಾರಿಕೆ ಸಮಾಜಕ್ಕೆ, ಜನರ ಸ್ವಾತಂತ್ರ್ಯಕ್ಕೆ ಕಂಟಕ. ಹೀಗಾಗಿ ಬಲಾಡ್ಯರ ಕೈಯಲ್ಲಿ ಅಧಿಕಾರ ಇರಬಾರದು ಎಂದು ಮಹಾತ್ಮಗಾಂಧಿಯವರು ಹೇಳಿದ್ದರು. ಸ್ವಾತಂತ್ರ ಸೇನಾನಿಗಳಾದ ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು ಎಂದು ಸ್ಮರಿಸಿದರು.

ಭಾರತದೊಳಗಿದ್ದ ವರ್ಣ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆ ಹಾಗೂ ಭಾರತದಲ್ಲಿನ 560 ಸಂಸ್ಥಾನಗಳಲ್ಲಿ ಇದ್ದ ಒಳ ಮುನಿಸನ್ನು ಬ್ರಿಟಿಷರು ಬಳಸಿಕೊಂಡು ಭಾರತವನ್ನು ಆಳಿದರು. ಜಾತಿ ವ್ಯವಸ್ಥೆ ಕಾರಣಕ್ಕೆ ಭಾರತದ ಶೂದ್ರರು ಕೇವಲ ಉತ್ಪಾದನೆ ಮಾಡಬೇಕಿತ್ತು. ಆದರೆ ತಾವು ಉತ್ಪಾದಿಸಿದ್ದನ್ನು ಅನುಭವಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಇರಲಿಲ್ಲ. ಈ ಅಸಮಾನತೆ ವಿರುದ್ಧ ಮಾಧವಾನಂದ ಸ್ವಾಮೀಜಿಯವರು ಧ್ವನಿ ಎತ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ಜನರ ಮುಕ್ತಿಗಾಗಿ ಶ್ರಮಿಸಿದರು ಎಂದು ಅವರು ಮೆಚ್ಚುಗೆ ಸೂಚಿಸಿದರು.

ಬಸವನಬಾಗೇವಾಡಿಯ ಸಂಗನಬಸವೇಶ್ವರ ಸ್ವಾಮಿ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿ ಜಿಲ್ಲೆಯ ಶಾಸಕರುಗಳು ಮತ್ತು ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News