ವಿಜಯನಗರ | ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ಪತ್ರಕರ್ತರ ಸಂಘದಿಂದ ಪ್ರತಿಭಟನೆ

ಹೊಸಪೇಟೆ : ಪತ್ರಕರ್ತನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ಪತ್ರಕರ್ತರ ಸಂಘದಿಂದ ನಗರದ ಪುನೀತ್ ರಾಜಕುಮಾರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಫೆ.10ರಂದು ಹೊಸಪೇಟೆ ತಾಲೂಕಿನ ಕೋರ್ಟ್ ಆವರಣದಲ್ಲಿ ಮಧ್ಯಾಹ್ನ 3ರ ಹೊತ್ತಿಗೆ ಪತ್ರಕರ್ತರಾದ ಮುಹಮ್ಮದ್ ಗೌಸ್ ಮತ್ತು ಇಬ್ಬರು ವರದಿಗಾರರು ಹೊಸಪೇಟೆಯ ರಾಣಿಪೇಟೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಪ್ರಕಟಣೆಯ ಮಾಹಿತಿಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲಿಯೇ ಕೆಎಂಎಫ್ ಅಧ್ಯಕ್ಷ ಎಸ್.ಭೀಮಾನಾಯ್ಕ್ ಅವರ ಕಾರಿನ ಗ್ಲಾಸಿನ ಮೇಲೆ ಎಂಎಲ್ಎ ಹಗರಿಬೊಮ್ಮನಹಳ್ಳಿ ಕ್ಷೇತ್ರ ಎಸ್.ಭೀಮಾನಾಯ್ಕ್ ಎಂದು ಬರೆದಿರುವ ಕಾರಿನ ಪಾಸ್ ಕಂಡು ಬಂತು, ಈ ವೇಳೆ ಪತ್ರಕರ್ತರು ವಿಡಿಯೋ ಮಾಡಿದರು. ಈ ಸಂಬಂಧ ಪತ್ರಕರ್ತರು ಭೀಮಾನಾಯ್ಕ್ ಅವರನ್ನು ಪ್ರಶ್ನೆ ಕೇಳಲು ಮುಂದಾದಾಗ ʼನೋ ಕಮೆಂಟ್ಸ್ʼ ಎಂದು ಉತ್ತರಿಸಿದ್ದಾರೆ. ಅವರು ಮುಂದೆ ಹೋಗುತ್ತಿರುವ ವಿಡಿಯೋ ದೃಶ್ಯಾವಳಿ ತೆಗೆಯುವಾಗ ಕಾರು ನಿಲ್ಲಿಸಿ ಪತ್ರಕರ್ತ ಮುಹಮ್ಮದ್ ಗೌಸ್ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಸಿದುಕೊಂಡು ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.
ಪತ್ರಕರ್ತರ ಸಂಘದ ಸದಸ್ಯರ ಮೇಲೆ ಆಗಿರುವ ಈ ಕೃತ್ಯಕ್ಕೆ ಏಳು ದಿನಗಳ ಒಳಗಾಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊಸಪೇಟೆ ತಹಶೀಲ್ದಾರ್ ಅವರ ಮೂಲಕ ಮನವಿಯನ್ನು ಸಲ್ಲಿಸಲಾಗಿದೆ.
ಪ್ರತಿಭಟನೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಿ.ಎಚ್.ಎಸ್.ರಾಜು, ಚಿದಾನಂದ, ಕೆ.ಬಿ.ಹಿರೇಮಠ, ಎ.ಎಂ.ಬಸವರಾಜ್, ನಾಗರಾಜ್ ಕಟ್ಟಿಮನಿ, ಎಲ್.ಮಂಜನಾಥ್, ಸಿ.ಆರ್.ಭಾರತ್, ದುರ್ಗಪ್ಪ, ಪಣಿಂದ್ರ ಗೌಡ, ಜಿ.ಗಳ್ಯಾಪ್ಪ, ಶೇಖರ್, ಕೆ.ರಘು, ಶಮ ಶೇಕ್, ಮುಹಮ್ಮದ್ ಗೌಸ್ ಮತ್ತಿತರರು ಭಾಗವಹಿಸಿದ್ದರು.