ಹಾವಿನ ವಿಷ ಮಾರುವ ಬಿಜೆಪಿ ಬೆಂಬಲಿಗ ಸಿದ್ಧಾರ್ಥ್ ಯಾದವ್

Update: 2023-11-08 08:07 GMT

Photo: Instagram by @elvish_yadav

ದ್ವೇಷದ ವಿಷ ಕಾರುವ ಮತ್ತೊಬ್ಬನ ಬಂಡವಾಳ ಬಯಲಾಗಿದೆ. ಮಹಿಳೆಯರ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ, ದೇಶದ ರೈತರ ವಿರುದ್ಧ, ಜಾತ್ಯತೀತರ ವಿರುದ್ಧ ಸದಾ ದ್ವೇಷ ಕಾರುತ್ತಿದ್ದ, ಅವಹೇಳನಕಾರಿಯಾಗಿ ಮಾತಾಡುತ್ತಿದ್ದ, ಆ ಮೂಲಕವೇ ಅಗ್ಗದ ಜನಪ್ರಿಯತೆ ಗಳಿಸಿ ಅದರಿಂದ ಲಾಭ ಬಾಚಿಕೊಳ್ಳುತ್ತಿದ್ದ ಬಿಜೆಪಿ ಬೆಂಬಲಿಗ, ಸ್ವಯಂ ಘೋಷಿತ ಹಿಂದುತ್ವ ವೀರ, ಸ್ವಯಂ ಘೋಷಿತ ಹಿಂದೂ ರಕ್ಷಕನ ಅಸಲಿಯತ್ತು ಹೊರಬಿದ್ದಿದೆ.

ಸೋಷಿಯಲ್ ಮೀಡಿಯಾದಲ್ಲಿ ದ್ವೇಷದ ವಿಷ ಉಗುಳುವ ಈ ಸಿದ್ದಾರ್ಥ ಯಾದವ್ ಯಾನೆ ಎಲ್ವಿಶ್ ಯಾದವ್ ಹಾವಿನ ವಿಷವನ್ನೇ ಮಾರುವ ಅಕ್ರಮ ಜಾಲ ನಡೆಸುತ್ತಿದ್ದ ಎಂಬ ಆರೋಪ ಇದೀಗ ಕೇಳಿ ಬಂದಿದೆ.

ಈ ಸಂಬಂಧ ಈತ ಹಾಗು ಈತನ ಐದು ಸಹಚರರಾದ ರಾಹುಲ್, ಟೀಟುನಾಥ್, ಜಯಕರಣ್ , ನಾರಾಯಣ್, ರವಿನಾಥ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ 9, 39, 48A , 49 ,50, 51 ಹಾಗು ಐಪಿಸಿಯ 120ಬಿ ಅಡಿ ಎಫ್ ಐ ಆರ್ ದಾಖಲಾಗಿದೆ. ಈತನ ಸಹಚರರ ಬಂಧನವೂ ಆಗಿದೆ. ಈತ ಮಾತ್ರ ತಲೆಮರೆಸಿಕೊಂಡಿದ್ದಾನೆ. ಅಲ್ಲಿಂದಲೇ ನಾನು ಹಾಗೆಲ್ಲ ಮಾಡೇ ಇಲ್ಲ ಎಂದು ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾನೆ. ಈತನ ಮೇಲಿರುವ ಆರೋಪಗಳು ಸಾಬೀತಾದರೆ ಈತ ಏಳು ವರ್ಷ ಜೈಲು ಸೇರಬೇಕಾಗುತ್ತದೆ.

ಎಲ್ವಿಶ್ ಯಾದವ್ ಸಹಚರರ ಬಳಿ 20 ಮಿಲಿ ಲೀಟರ್ ಹಾವಿನ ವಿಷ, 9 ವಿಷಕಾರಿ ಹಾವುಗಳು, ಅದರಲ್ಲಿ 5 ನಾಗರಹಾವು, 1 ಹೆಬ್ಬಾವು, ಎರಡು ತಲೆಗಳ ಎರಡು ಹಾವುಗಳು ಹಾಗು ಒಂದು ಇತರ ಹಾವು ಪತ್ತೆಯಾಗಿದೆ.

ಇವುಗಳಲ್ಲಿ ಕೆಲವು ಸಂರಕ್ಷಿತ ಹಾವುಗಳು. ವನ್ಯಜೀವಿ ಕಾಯ್ದೆಯ ಪ್ರಕಾರ ಈ ಹಾವುಗಳನ್ನು ಇಟ್ಟುಕೊಳ್ಳುವುದು, ಅವುಗಳ ವಿಷ ತೆಗೆದಿಟ್ಟುಕೊಳ್ಳುವುದು ಹಾಗು ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ.

ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿ, ಅದು ನಿಷೇಧವಾದ ಬಳಿಕ ಯೂಟ್ಯೂಬ್ ನಲ್ಲಿ ಅದೇ ಧಾಟಿಯ ವಿಡಿಯೋಗಳನ್ನು ಮಾಡಿ ಭಾರೀ ಜನಪ್ರಿಯತೆ ಗಳಿಸಿ, ಬಿಜೆಪಿ ಜೊತೆ ಸಖ್ಯ ಬೆಳೆಸಿ ಮೆರೆದಾಡುತ್ತಿದ್ದ ಈ ಸಿದ್ಧಾರ್ಥ್ ಯಾದವ್ ಯಾನೆ ಎಲ್ವಿಶ್ ಯಾದವ್ . ಯೂಟ್ಯೂಬ್ ನಲ್ಲಿ ಈತನಿಗೆ 1.45 ಕೋಟಿ subscribers ಇದ್ದಾರೆ. ಮಹಿಳೆಯರ ಬಗ್ಗೆ ಅತ್ಯಂತ ಕೀಳು ಅಭಿರುಚಿಯ ಮಾತಾಡುವ ವೀಡಿಯೊ ಮಾಡುವುದು ಈತನ ಶೋಕಿ. ಅದೇ ಶೋಕಿಯಿಂದ ದೊಡ್ಡ ಸಂಖ್ಯೆಯ ಫಾಲೋವರ್ಸ್ ಕೂಡ ಪಡೆದಿದ್ದಾನೆ. ಸಾಕಷ್ಟು ದುಡ್ಡೂ ಮಾಡಿದ್ದಾನೆ. ಬಿಗ್ ಬಾಸ್ ನಲ್ಲೂ ಹೋಗಿ ಅಲ್ಲೂ ಗೆದ್ದಿದ್ದಾನೆ. ವಿಲಾಸಿ ಕಾರುಗಳಲ್ಲಿ ಸುತ್ತುತ್ತಾನೆ.

ಸಂಘ ಪರಿವಾರ ಹಾಗು ಬಿಜೆಪಿಯ ಕಟ್ಟಾ ಬೆಂಬಲಿಗನಾಗಿ ಗುರುತಿಸಿಕೊಂಡಿರುವ ಈತ ಬಿಜೆಪಿ, ಮೋದಿ, ಸಂಘ ಪರಿವಾರವನ್ನು ಸಮರ್ಥಿಸಿಕೊಳ್ಳಲು ಏನು ಬೇಕಾದರೂ ಹೇಳುತ್ತಾನೆ. ಎಷ್ಟು ಪ್ರಚೋದನಕಾರಿಯಾಗಿ ಬೇಕಾದರೂ ಮಾತಾಡುತ್ತಾನೆ. ಯಾರನ್ನು ಬೇಕಾದರೂ ಯಾವುದೇ ಮುಲಾಜಿಲ್ಲದೆ ಅವಹೇಳನ ಮಾಡುತ್ತಾನೆ. ತಾಯಂದಿರ ಬಗ್ಗೆ , ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕೆಟ್ಟದಾಗಿ ಬಯ್ದು ಮಾತಾಡುತ್ತಾನೆ.

ಎಲ್ವಿಶ್ ಆರ್ಮಿ ಎಂದೇ ತನ್ನ ಅನುಯಾಯಿಗಳ ಪಡೆ ಕಟ್ಟಿಕೊಂಡಿರುವ ಈ ಸ್ವಯಂ ಘೋಷಿತ ಕಟ್ಟರ್ ಹಿಂದುತ್ವವಾದಿ ಬಿಜೆಪಿ ನಾಯಕರ ಜೊತೆ ಅತ್ಯಂತ ಆಪ್ತ. ಬಿಜೆಪಿ ಮುಖ್ಯಮಂತ್ರಿಗಳೇ ಈತನ ಜೊತೆ ನಿಂತುಕೊಂಡು ಈತನನ್ನು ಸಿಕ್ಕಾಪಟ್ಟೆ ಹೊಗಳುವ, ಈತನನ್ನು ಬೆಂಬಲಿಸಿ ಮಾತಾಡುವ ವೀಡಿಯೊಗಳು ಸಾಕಷ್ಟು ವೈರಲ್ ಆಗಿವೆ. ತನ್ನ ಎಲ್ವಿಶ್ ಆರ್ಮಿ ಮೂಲಕ ಈತ ಯಾರನ್ನು ಬೇಕಾದರೂ ಅತ್ಯಂತ ಕೀಳು ಮಟ್ಟದಲ್ಲಿ ಟ್ರೋಲ್ ಮಾಡುತ್ತಾನೆ ಹಾಗು ಮಾಡಿಸುತ್ತಾನೆ. ಯಾರ ಚಾರಿತ್ರ್ಯ ವಧೆ ಬೇಕಾದರೂ ಮಾಡ್ತಾನೆ. ಎಷ್ಟೇ ಪ್ರಚೋದನಕಾರಿ ಬೇಕಾದ್ರೂ ಹೇಳಿಕೆ ಕೊಡ್ತಾನೆ.

ಅಂತಹ ಪ್ರಭಾವಿ ಸೊಷಿಯಲ್ ಮೀಡಿಯಾ ಸ್ಟಾರ್ ನ ನಿಜ ಜೀವನದ ಅಸಲಿಯತ್ತು ಈಗ ಬಯಲಾಗಿದೆ. ಈತ ಭಯಾನಕ ಹಾವುಗಳ ವಿಷಗಳನ್ನು ರೇವ್ ಪಾರ್ಟಿಗಳಲ್ಲಿ ಅಮಲು ಪದಾರ್ಥವಾಗಿ ಮಾರಾಟ ಮಾಡುವ ಅಕ್ರಮ ಜಾಲ ನಡೆಸುತ್ತಿದ್ದ ಎಂಬುದು ಈಗ ಪತ್ತೆಯಾಗಿದೆ. ಅಲ್ಲಿಗೆ ಈತನ ಜನಪ್ರಿಯತೆ, ಈತನ ಹಿಂದುತ್ವ, ಈತನ ಡೋಂಗಿ ರಾಷ್ಟ್ರೀಯತೆ ಎಲ್ಲವೂ ಎಷ್ಟು ಟೊಳ್ಳು ಎಂಬುದೂ ಜಗಜ್ಜಾಹೀರಾಗಿದೆ.

ವಿಶೇಷ ಅಂದ್ರೆ ಸಂಘ ಪರಿವಾರ ಹಾಗು ಬಿಜೆಪಿ ನಾಯಕರ ಈ ಫೇವರಿಟ್ ಸೋಷಿಯಲ್ ಮೀಡಿಯಾ ಸ್ಟಾರ್ ಅನ್ನು ಪೋಲೀಸರ ಬಲೆಗೆ ಬೀಳಿಸಿದ್ದು ಬೇರೆ ಯಾರೂ ಅಲ್ಲ. ಬಿಜೆಪಿ ಸಂಸದೆ, ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗು ಅವರ ಸಂಸ್ಥೆ. ಅದೂ ಈತನದ್ದೇ ಕಾರುಬಾರು ಹಾಗು ಶೋಕಿಯ ಸಹಾಯದಿಂದ.

ಈ ಎಲ್ವಿಶ್ ಯಾದವ್ ಹಾಗು ಈತನ ಮಿತ್ರರು ಹಾವುಗಳನ್ನು ಕೈಯಲ್ಲಿ ಹಿಡಿದುಕೊಂಡು, ಮೈಮೇಲೆ ಬಿಟ್ಟುಕೊಂಡು ಫೋಟೋ, ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ರು. ಅದನ್ನು ಗಮನಿಸಿದ ಮೇನಕಾ ಗಾಂಧಿಯ ಸಂಸ್ಥೆ ಪೀಪಲ್ ಫಾರ್ ಅನಿಮಲ್ಸ್ ನ ಗೌರವ್ ಗುಪ್ತಾ ಎಂಬವರು ಜಾಗೃತರಾದರು. ಕೂಡಲೇ ಈ ಬಗ್ಗೆ ಮಾಹಿತಿ ಕಲೆ ಹಾಕಿದ ಅವರಿಗೆ ಆಘಾತಕಾರಿ ವಿಷಯಗಳು ತಿಳಿದು ಬಂದವು.

ಈ ಹಿಂದುತ್ವ ಸ್ಟಾರ್ ರಾತ್ರಿ ರೇವ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಅಲ್ಲಿಗೆ ವಿದೇಶಿ ಮಾಡೆಲ್ ಗಳು ಬರುತ್ತಿದ್ದರು. ಅಲ್ಲಿ ಅಮಲಿನ ಪದಾರ್ಥವಾಗಿ ದೊಡ್ಡ ಮೊತ್ತಕ್ಕೆ ಹಾವಿನ ವಿಷಗಳನ್ನು ಮಾರಾಟ ಮಾಡಲಾಗುತ್ತಿತ್ತು.

ಆಗ ಈ ಎಲ್ವಿಶ್ ಯಾದವ್ ಅನ್ನು ಬಲೆಗೆ ಬೀಳಿಸಲು ಗೌರವ್ ಗುಪ್ತಾ ಅವರು ಒಂದು ಪ್ಲ್ಯಾನ್ ಮಾಡ್ತಾರೆ. ಅವರು ಎಲ್ವಿಶ್ ಯಾದವ್ ಅನ್ನು ಸಂಪರ್ಕಿಸಿ ನಮಗೆ ರೇವ್ ಪಾರ್ಟಿಗೆ ಹಾವಿನ ವಿಷ ಬೇಕು ಅಂತ ಹೇಳ್ತಾರೆ. ಎಲ್ವಿಶ್ ಯಾದವ್ ತನ್ನ ಸಹಚರರ ನಂಬರ್ ಕೊಟ್ಟು ಅವರನ್ನು ಸಂಪರ್ಕಿಸಿ ದುಡ್ಡು ಕೊಟ್ಟು ಪಡೆಯಿರಿ ಎಂದು ಹೇಳ್ತಾನೆ. ಆಗ ಉತ್ತರ ಪ್ರದೇಶ ಪೊಲೀಸರು ಹಾಗು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಹೋಗಿ ಎಲ್ವಿಶ್ ಯಾದವ್ ನ ಸಹಚರರನ್ನು ಮೊದಲು ವಶಕ್ಕೆ ಪಡೆಯಲಾಗುತ್ತೆ. ಅವರು ಎಲ್ವಿಶ್ ಯಾದವ್ ಹೆಸರು ಹೇಳ್ತಾರೆ. ಅಲ್ಲಿಗೆ ಈತನ ಹಾವಿನ ವಿಷದ ಬಿಸಿನೆಸ್ ಬಯಲಾಗಿದೆ.

ತಲೆಮರೆಸಿಕೊಂಡಿರುವ ಎಲ್ವಿಶ್ ಯಾದವ್ "ಇದೆಲ್ಲ ಸುಳ್ಳು ಆರೋಪಗಳು. ನಾನು ಇಂತಹ ಯಾವುದೇ ಕೆಲಸ ಮಾಡಿಲ್ಲ" ಎಂದು ಎಲ್ವಿಶ್ ಹೇಳಿದ್ದಾನೆ. ಜೊತೆಗೆ ನಾನು ಹಿಂದೂಗಳ ಪರ ಮಾತಾಡುತ್ತಾ ಬಂದವನು ಎಂದೂ ಹೇಳಿಕೊಂಡಿದ್ದಾನೆ.

ಈ ಹಿಂದೆ ದಿಲ್ಲಿಯಲ್ಲಿ ಜಿ20 ಶೃಂಗ ಸಭೆ ಗಾಗಿ ಇಡಲಾಗಿದ್ದ ಹೂವಿನ ಕುಂಡಗಳನ್ನು ಎತ್ತಿಕೊಂಡು ಹೋಗಿದ್ದು ಈತನಿಗೆ ಸೇರಿದ್ದ ಕಾರಿನಲ್ಲೇ ಎಂಬ ಆರೋಪವೂ ಕೇಳಿ ಬಂದಿತ್ತು. ಅದನ್ನೂ ಈತ ನಿರಾಕರಿಸಿದ್ದ.

ಈಗ ಈತನ ಜೊತೆ ನಿಂತುಕೊಂಡ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಈತನಿಗೆ ಯಾವ ಸಹಕಾರ ಬೇಕಾದ್ರೂ ಕೊಡ್ತೀವಿ ಎಂದು ಘಂಟಾಘೋಷವಾಗಿ ಹೇಳಿದ ಬಿಜೆಪಿ ಮುಖ್ಯಮಂತ್ರಿಗಳು ಏನು ಹೇಳ್ತಾರೆ ?

ಹಿಂದೂ, ಹಿಂದುತ್ವ , ದೇಶಭಕ್ತಿ ಎಂದು ಹೇಳಿಕೊಂಡು ಈತ ಹಿಂದೂಗಳನ್ನು ಉದ್ದಾರ ಮಾಡಿದ್ದು, ಅವರಿಗೆ ಉಪಕಾರ ಮಾಡಿದ್ದು ಅಷ್ಟರಲ್ಲೇ ಇದೆ. ಈತ ಇಷ್ಟರವರೆಗೆ ಮಾಡಿದ್ದು ಸ್ವಂತ ಲಾಭ ಮಾತ್ರ. ಹಿಂದುತ್ವದ ಹೆಸರಲ್ಲಿ ಫಾಲೋವರ್ಸ್ ಪಡೆದಿದ್ದು, ಜನಪ್ರಿಯತೆ ಹೆಚ್ಚಿಸಿಕೊಂಡಿದ್ದು, ಹಣ ಬಾಚಿದ್ದು, ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಯುವಜನರನ್ನು ದಾರಿ ತಪ್ಪಿಸಿದ್ದು - ಇಷ್ಟು ಮಾತ್ರ ಮಾಡಿರುವ ಈತ ಹಿಂದೂಗಳಿಗೆ ಬೇರೆ ಯಾವ ಉಪಕಾರವನ್ನೂ ಮಾಡಿಲ್ಲ.

ಪ್ರತಿಭೆಯನ್ನು ಸೃಜನಶೀಲತೆಯನ್ನು ತೋರಿಸದೆ ಕೇವಲ ಕೆಟ್ಟ ರಾಜಕೀಯ ಮಾಡಿ, ದ್ವೇಷ , ಸುಳ್ಳು ಹರಡಿ, ಮಹಿಳೆಯರ ಅವಹೇಳನ ಮಾಡಿ ಪವರ್ ಹಾಗು ಪ್ರಾಫಿಟ್ ಎರಡನ್ನೂ ಬಾಚಿಕೊಂಡಿರುವ ಈ ಎಲ್ವಿಶ್ ನಂತಹ ಸೋಷಿಯಲ್ ಮೀಡಿಯಾ ಸ್ಟಾರ್ ಗಳು ದೇಶಾದ್ಯಂತ ಹರಡಿಕೊಂಡಿದ್ದಾರೆ. ಬಿಜೆಪಿ , ಸಂಘ ಪರಿವಾರ ಇವರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಚೆನ್ನಾಗಿ ಬಳಸಿಕೊಳ್ಳುತ್ತಲೂ ಇದೆ.

ಇಂತಹ ಸುಳ್ಳು ಸೋಷಿಯಲ್ ಮೀಡಿಯಾ ಸ್ಟಾರ್ ಗಳನ್ನು ಫಾಲೋ ಮಾಡುವ ಈ ದೇಶದ ನಿರುದ್ಯೋಗಿ ಯುವಜನರು ಈಗ್ಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮನ್ನು ಧರ್ಮದ ಹೆಸ್ರಲ್ಲಿ, ರಾಷ್ಟ್ರೀಯತೆಯ ಹೆಸರಲ್ಲಿ ವಂಚಿಸಲಾಗುತ್ತಿದೆ ಎಂದು ಈಗಲಾದರೂ ಅರಿತುಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News