ಎಲ್ಲಾ ಧರ್ಮೀಯರು ಒಟ್ಟಾದರೆ ಸದೃಢ ಸಮಾಜ ನಿರ್ಮಾಣ ಸಾಧ್ಯ - ಸ್ಪೀಕರ್ ಯು.ಟಿ. ಖಾದರ್

Update: 2023-09-30 17:17 GMT

ಸುಳ್ಯ : ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಬದುಕಿ, ಒಟ್ಟಾಗಿ ದುಡಿದರೆ ಬಲಿಷ್ಠ ದೇಶ, ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಸಂಪಾಜೆ ಗ್ರಾಮದ ಗೂನಡ್ಕ ಹಿಮಾಯತುಲ್ ಇಸ್ಲಾಂ ಜಮಾಅತ್ ಮೀಲಾದ್ ಸ್ವಾಗತ ಸಮಿತಿ ವತಿಯಿಂದ ಮೀಲಾದ್ 2023 ಹಾಗೂ 12ನೇ ವಾರ್ಷಿಕ ಸ್ವಲಾತ್ ಮಜ್ಲಿಸ್ ಪ್ರಯುಕ್ತ ಹಮ್ಮಿಕೊಂಡ ಮೂರು ದಿನಗಳ ಮೀಲಾದ್ ಫೆಸ್ಟ್, ಸರ್ವ ಧರ್ಮಿಯರ ಸ್ನೇಹ ಸಮ್ಮಿಲನ, ಸ್ವಲಾತ್ ಮಜ್ಲೀಸ್ ಕಾರ್ಯಕ್ರಮದಲ್ಲಿ ಶುಕ್ರವಾರ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನೂ, ಸೌಹಾರ್ಧತೆಯನ್ನು ಕಾಣುವ ದೇಶ. ಸರ್ವಧರ್ಮಿಯರು ಪರಸ್ಪರ ಗೌರವಿಸಿ, ಪ್ರೀತಿ, ವಿಶ್ವಾಸದಿಂದ ಬದುಕಿದಾಗ ಈ ದೇಶ ಇನ್ನಷ್ಟು ಬಲಿಷ್ಠ ಶಕ್ತಿಯಾಗಲು ಸಾಧ್ಯ. ಗೂನಡ್ಕದ ಈ ಪ್ರದೇಶ ಸೌಹಾರ್ದತೆ ಹಾಗೂ ಸಾಮರಸ್ಯತೆಗೆ ಸಾಕ್ಷಿಯಾಗಿದೆ. ಇಲ್ಲಿ ಎಲ್ಲಾ ಧರ್ಮದ ಜನರಲ್ಲಿ ಸೌಹಾರ್ದತೆ ಪ್ರೀತಿ ವಿಶ್ವಾಸ ಗಟ್ಟಿಯಾಗಿದೆ. ಈ ಸಮಾನತೆಯ ಮತ್ತು ಸೌಹಾರ್ಧತೆಯ ಮಾದರಿ ಮತ್ತು ಸಂದೇಶ ಎಲ್ಲೆಡೆ ಪಸರಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು. ಜಾತಿ - ಧರ್ಮಗಳ ಮಧ್ಯೆ ಪರಸ್ಪರ ಪ್ರೀತಿ, ವಿಶ್ವಾಸ, ಸಾಮರಸ್ಯ ಇಂದಿನ ಅನಿವಾರ್ಯತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಮುಹಮ್ಮದ್ ಸಖಾಫಿ ದು:ಆ ನೆರವೇರಿಸಿದರು. ರಾಜಾರಾಂ ಕೀಲಾರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಮಸ್ ನವೀ ಗ್ಲೋಬಲ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಡಾ. ಎಂ.ಎಸ್. ಎಂ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಅವರು ಸಂದೇಶ ಭಾಷಣ ಮಾಡಿದರು. ಸಣ್ಣ ಕೈಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಇನಾಯತ್ ಅಲೀ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯ ಕೆ.ಪಿ.ಜಾನಿ ಕಲ್ಲುಗುಂಡಿ ಮಾತನಾಡಿದರು.

ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಇಬ್ರಾಹಿಂ ಗೂನಡ್ಕ, ಬೆಂಗಳೂರಿನ ಫಾರ್ಮೆಡ್ ಗ್ರೂಪ್ ಹಿರಿಯ ಉಪಾಧ್ಯಕ್ಷ ಉಮ್ಮರ್ ಬೀಜದಕಟ್ಟೆ, ಗಾಂಧಿನಗರ ಜುಮ್ಮಾ ಮಸೀದಿಯ ಅಧ್ಯಕ್ಷ ಕೆ.ಎಂ. ಮುಸ್ತಫಾ, ಕೆ.ಪಿ.ಸಿ.ಸಿ. ಸಂಯೋಜಕ ಎಸ್. ಸಂಶುದ್ಧೀನ್, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಉದ್ಯಮಿ ಹಮೀದ್ ಕುತ್ತಮೊಟ್ಟೆ, ಗೂನಡ್ಕ ಶ್ರೀ ಶಾರದಾ ಹಿ.ಪ್ರಾ.ಶಾಲಾ ಅಧ್ಯಕ್ಷ ರಾಮಚಂದ್ರ ಕಲ್ಲಗದ್ದೆ, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ, ಯು.ಎಸ್. ಚಿದಾನಂದ ಗೂನಡ್ಕ, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಗೂನಡ್ಕ ಶ್ರೀ ಶಾರದಾ ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯ ಜಿ. ಹನುಮಂತಪ್ಪ, ಪಿ.ಎ. ಉಮ್ಮರ್, ಸೂರಜ್ ಹೊಸೂರು, ನವೀನ ಬೈಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹಾಗೂ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಇನಾಯತ್ ಅಲೀ ಮುಲ್ಕಿ, ದ.ಕ.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಗೂನಡ್ಕ ಶ್ರೀ ಶಾರದಾ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತಪ್ಪ ಮಾಸ್ತರ್, ದೇಶಸೇವೆ ಮಾಡಿದ ನಿವೃತ್ತ ಸೈನಿಕ ನವೀನ್ ಬೈಲೆ, ಎಂ.ಬಿ.ಸದಾಶಿವ ಅವರನ್ನು ಬದ್ರಿಯಾ ಜುಮ್ಮಾ ಮಸೀದಿಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಗೂನಡ್ಕ ಅಲ್ ಅಮೀನ್ ಗೌರವಾಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮೀಲಾದ್ ಸ್ವಾಗತ ಸಮಿತಿಯ ಪಿ.ಕೆ. ಅಬೂಸಾಲಿ ವಂದಿಸಿದರು. ಹಮೀದ್ ಸುಣ್ಣಮೂಲೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿಯ ಗುರುಗಳಾದ ಹಬೀಬ್ ಹಿಮಮಿ, ಮಿಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎ.ಅಶ್ರಫ್ (ಎ.ಟಿ.),ಎಚ್ ಐ ಜೆ ಸಿ ಗೂನಡ್ಕ ಇದರ ಅಧ್ಯಕ್ಷರಾದ ಡಿ. ಆರ್. ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಉಮ್ಮರ್ ಪುತ್ರಿ, ಮಾಜಿ ಅಧ್ಯಕ್ಷ ಹಾಜಿ ಉಮ್ಮರ್ ಪಿ.ಎ, ಮಿಲಾದ್ ಸ್ವಾಗತ ಸಮಿತಿಯ ಸಂಚಾಲಕ ಶೌವಾದ್ ಗೂನಡ್ಕ, ಮಸೀದಿಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಹಿಮಾಯತುಲ್ ಇಸ್ಲಾಂ ಜಮಾಅತ್ ಪದಾಧಿಕಾರಿಗಳು, ಮೀಲಾದ್ ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News