ಬಜ್ಪೆ: ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ನಾಲ್ವರ ಬಂಧನ; ಓರ್ವ ಪರಾರಿ

Update: 2023-10-17 12:25 IST
ಬಜ್ಪೆ: ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ನಾಲ್ವರ ಬಂಧನ; ಓರ್ವ ಪರಾರಿ
  • whatsapp icon

ಮಂಗಳೂರು, ಅ.17: ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಕಾರ್ಯಾಚರಣೆಯನ್ನು ವ್ಯಾಪಕಗೊಳಿಸಿರುವ ಮಂಗಳೂರು ಪೊಲೀಸರು, ನಗರ ಕಮಿಷನರೇಟ್ ವ್ಯಾಪ್ತಿಯ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ 2 ಪ್ರಕರಣಗಳನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ತೆಂಕ ಎಡಪದವು ಗ್ರಾಮದ ಬೋರುಗಡ್ಡೆ ನಿವಾಸಿ ಜಯಂತ ಪೂಜಾರಿ (41), ಮಡಪ್ಪಾಡಿ ಮನೆ ನಿವಾಸಿ ದೇವದಾಸ ಪೂಜಾರಿ(34) ಹಾಗೂ ಕುಂದೋಡಿ ಮನೆ ವಾಸಿ ರಮೇಶ್ ಪೂಜಾರಿ (48) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಬೆಟ್ಟಿಂಗ್ ಗೆ ಬಳಸಿದ್ದ 3 ಮೊಬೈಲ್ ಫೋನ್ಗಳು ಹಾಗೂ 4,500 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು ತೆಂಕ ಎಡಪದವು ಗ್ರಾಮದ ಮಡಪ್ಪಾಡಿ ಎಂಬಲ್ಲಿ ಆನ್ ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತವಾಗಿರುವ ಕುರಿತು ಖಚಿತ ಮಾಹಿತಿಯನ್ನು ಆಧರಿಸಿ ಬಜ್ಪೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಬಡಗುಳಿಪಾಡಿ ಗ್ರಾಮದ ಗಂಜಿಮಠ ಗಾಂಧಿನಗರ ಎಂಬಲ್ಲಿ ಆನ್ ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದಾನೆ.

ತೆಂಕ ಎಡಪದವು ಗ್ರಾಮದ ಮದಪ್ಪಾಡಿ ಮನೆ ನಿವಾಸಿ ಪ್ರವೀಣ್ ಬಂಧಿತ ಆರೋಪಿ. ಇರುವೈಲು ನಿವಾಸಿ ಧನು ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತನಿಂದ ಬೆಟ್ಟಿಂಗ್ ಗೆ ಬಳಸಿದ್ದ ಒಂದು ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News