ಸಮಾಜ ಸದಾ ನೆನಪಿನಲ್ಲಿಡುವ ಒಳ್ಳೆಯ ಕೆಲಸ ಮಾಡಿ: ಸಯ್ಯದ್ ಮುಹಮ್ಮದ್ ಬ್ಯಾರಿ

Update: 2024-09-18 12:49 GMT

ಮಂಗಳೂರು: ಬ್ಯಾರೀಸ್ ಶಿಕ್ಷಣ ಸಮೂಹವು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ಇಲ್ಲಿ ಎಲ್ಲಾ ಭಾಷೆ, ಧರ್ಮ, ಜನಾಂಗ, ಪ್ರದೇಶದ ವಿದ್ಯಾರ್ಥಿಗಳು ಪರಸ್ಪರ ಬೆರೆತು ಶಿಕ್ಷಣ ಪಡೆಯುವ ವಾತಾವರಣ ರೂಪಿಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಹಾಕಿಕೊಂಡು ಕಾರ್ಯಾಚರಿಸುತ್ತಿವೆ. ಅದಕ್ಕೆ ಪೂರಕವಾಗಿ ಸಮಾಜವು ಸದಾ ನೆನಪಿನಲ್ಲಿಡುವ ಒಳ್ಳೆಯ ಕಾರ್ಯಗಳನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಇದರ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಕೊಣಾಜೆ ಸಮೀಪದ ಇನ್ನೋಳಿಯ ಲ್ಯಾಂಡ್ಸ್ ಎಂಡ್‌ನಲ್ಲಿರುವ ಬ್ಯಾರೀಸ್ ನಾಲೇಜ್ ಕ್ಯಾಂಪಸ್‌ನ ಇಂಟರ್‌ ನ್ಯಾಷನಲ್ ಸೆಮಿನಾರ್ ಹಾಲ್‌ನಲ್ಲಿ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬ್ಯಾರೀಸ್ ಎನ್‌ವಿರೋ ಆರ್ಟಿಟೆಕ್ಟರ್ ಡಿಸೈನ್ ಸ್ಕೂಲ್, ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಎಮರ್ಜಿಂಗ್ ಸೈನ್ಸಸ್ ಇವುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬುಧವಾರ ನಡೆದ ಓರಿಯೆಂಟೇಷನ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಟುಂಬಕ್ಕೆ, ಸಮಾಜಕ್ಕೆ ಕೆಟ್ಟ ಹೆಸರು ತರುವಂತಹ ಕೆಲಸಗಳನ್ನು ಮಾಡದೆ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳುವ ಶಿಕ್ಷಣವನ್ನು ಪಡೆಯಬೇಕು. ವಾತ್ಸಲ್ಯ, ಪ್ರೀತಿ, ಮಮತೆ ಇಲ್ಲದಿದ್ದರೆ ವಿದ್ಯೆ ಕಲಿತು ಏನೂ ಪ್ರಯೋಜನವಿಲ್ಲ. ಜ್ಞಾನ ಸಂಪಾದಿಸುವುದರೊಂದಿಗೆ ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕು. ಹೆತ್ತವರು ಕೂಡ ತಿಂಗಳಿಗೊಮ್ಮೆ ಕ್ಯಾಂಪಸ್‌ಗೆ ಆಗಮಿಸಿ ಪ್ರಾಂಶುಪಾಲರು, ಉಪನ್ಯಾಸಕರ ಬಳಿ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಯ್ಯದ್ ಮುಹಮ್ಮದ್ ಬ್ಯಾರಿ ಹೇಳಿದರು.

ಲಾಭದ ದೃಷ್ಟಿಯಿಂದ ತಾನು ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಅನೇಕ ಕನಸುಗಳನ್ನು ಕಂಡಿರುವೆ, ಯೋಜನೆಗಳನ್ನು ರೂಪಿಸಿರುವೆ. ಅದಕ್ಕೆ ಪೂರಕವಾಗಿ ಈ ಬಾರಿ ಮಾಜಿ ಶಾಸಕ ಯು.ಟಿ. ಫರೀದ್ ಸ್ಮಾರಕ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಸಯ್ಯದ್ ಮುಹಮ್ಮದ್ ಬ್ಯಾರಿ ಹೇಳಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಟೀಕೇಸ್ ಗ್ರೂಪ್‌ನ ಆಡಳಿತ ನಿರ್ದೇಶಕ ಉಮರ್ ಟೀಕೆ ಮಾತನಾಡಿ ಆನಂದಮಯ ಬದುಕಿಗಾಗಿ ಪ್ರತಿಯೊಬ್ಬರೂ ಹಂಬಲಿಸುತ್ತಾರೆ. ಅಂತಹ ಬದುಕನ್ನು ಆಸ್ವಾದಿಸಲು ಗುರಿ ಮುಖ್ಯ. ನಮ್ಮ ಸಾಧನೆಯನ್ನು ಸಮಾಜ ಗುರುತಿಸಿದರೆ ಅದೇ ನಮ್ಮ ಬದುಕಿನ ಪ್ರಗತಿಯಾಗಿದೆ. ಹಾಗಾಗಿ ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯೊಂದಿಗೆ ಪ್ರಗತಿ ಸಾಧಿಸುವ ಸಂಕಲ್ಪ ಬೆಳೆಸಿಕೊಳ್ಳಬೇಕಿದೆ ಎಂದರು.

ನಂಬಿಕೆ, ಆರೋಗ್ಯ, ಶಿಸ್ತು ಆದ್ಯತೆಯಾಗಬೇಕು. ವಿನಾಕಾರಣ ತರಗತಿಗೆ ಗೈರು ಹಾಜರಾಗಬಾದರು. ಅಂಕ ಗಳಿಕೆಗೆ ಒತ್ತು ನೀಡಬೇಕು. ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿಯಬೇಕು. ಸದಾ ಎಲ್ಲರ ಜೊತೆ ಬೆರೆಯಬೇಕು. ಪ್ರಸಕ್ತ ವಿದ್ಯಮಾನಗಳನ್ನು ಅರಿತುಕೊಳ್ಳಬೇಕು ಎಂದು ಉಮರ್ ಟೀಕೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಮತ್ತೋರ್ವ ಮುಖ್ಯ ಅತಿಥಿ ಅಮೇರಿಕಾದ ಟ್ರುಗ್ಲೋಬಲ್ ಕಂಪೆನಿಯ ಸಿಇಒ ಇಬ್ರಾಹೀಂ ಶರೀಫ್ ಮಾತನಾಡಿ ಕಠಿಣ ಪರಿಶ್ರಮ ಪಟ್ಟರೆ ಕಾರ್ಪೊರೇಟ್ ಕಂಪೆನಿಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಕೆಲಸದಲ್ಲಿ ನೈಪುಣ್ಯತೆ ಸಾಧಿಸಿದರೆ ಉದ್ಯೋಗದ ಭದ್ರತೆಯನ್ನೂ ಪಡೆದುಕೊಳ್ಳಬಹುದಾಗಿದೆ ಎಂದರು.


ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಕರ್ನಾಟಕ ಇದರ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಫರೀದ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬೀಡ್ಸ್ ಪ್ರಾಂಶುಪಾಲ ಖಲೀಲ್ ಅಬ್ದುಲ್ ರಝಾಕ್, ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಪ್ರೊ. ಪೃಥ್ವಿರಾಜ್ ಎಂ., ಸುನೀಲ್ ಅರೋರ ಉಪಸ್ಥಿತರಿದ್ದರು.

ಬಿಐಇಎಸ್ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ ಸ್ವಾಗತಿಸಿದರು. ಬಿಐಟಿ ಪ್ರಾಂಶುಪಾಲ ಡಾ. ಮಂಜುರ್ ಪಾಷಾ ವಂದಿಸಿದರು. ಜಾಯ್ಸನ್ ಕಾರ್ಯಕ್ರಮ ನಿರೂಪಿಸಿದರು.


















Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News