ಮದ್ಯಮುಕ್ತ, ಸ್ವಚ್ಛ ಸಮಾಜದ ಕಲ್ಪನೆ ಸಾಕಾರಗೊಳ್ಳಲಿ: ಡಾ. ಅನಸೂಯ ರೈ

Update: 2023-10-02 13:14 GMT

ಮಂಗಳೂರು, ಅ.2: ಶಾಂತಿ ಮಾರ್ಗದಿಂದಲೇ ಎಲ್ಲರಿಂದಲೂ ಗೌರವಿಸಲ್ಪಟ್ಟವರು, ಅಂತರ್‌ರಾಷ್ಟ್ರೀಯ ಖ್ಯಾತಿ ಪಡೆದ ವರು ಗಾಂಧೀಜಿ. ಅವರ ಮದ್ಯಮುಕ್ತ, ಸ್ವಚ್ಛ ಸಮಾಜದ ಕಲ್ಪನೆಯನ್ನು ನನಸಾಗಿಸಲು ನಾವು ಬದ್ಧರಾಗಿರೋಣ ಎಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅಭಿಪ್ರಾಯಟ್ಟಿದ್ದಾರೆ.

ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಸೋಮವಾರ ಮಹಾತ್ಮ ಗಾಂಧಿ ಜನ್ಮ ದಿನೋತ್ಸವದ ಪ್ರಯುಕ್ತ ಯುವ ರೆಡ್ ಕ್ರಾಸ್ ಘಟಕ ಆಯೋಜಿಸಿದ್ದ ಗಾಂಧೀಜಿಯವರ ವಿಚಾರಧಾರೆ ಕುರಿತ ರಸಪ್ರಶ್ನೆ, ಚರ್ಚೆ, ಹಾಗೂ ಕಾಲೇಜು ಆವರಣದ ಸ್ವಚ್ಛತಾ ಅಭಿಯಾನ (ಪ್ಲಾಸ್ಟಿಕ್ ಮುಕ್ತ) ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛತೆ ನಮ್ಮ ಮನಸ್ಸು- ಮನೆಯಿಂದಲೇ ಆರಂಭವಾಗಲಿ ಮತ್ತು ಅದು ನಿರಂತರವಾಗಿರಲಿ ಎಂದರು.

ಇದೇ ವೇಳೆ ಅವರು ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನೆನಪಿಸಿಕೊಂಡರು. ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್ ಕ್ರಾಸ್ ಅಧಿಕಾರಿ ಡಾ. ಭಾರತಿ ಪಿಲಾರ್ ಸ್ವಾಗತಿಸಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ವನ್ನೂರು ಸ್ವಾಮಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಗುರುಪ್ರಸಾದ್, ಯುವ ರೆಡ್ ಕ್ರಾಸ್‌ನ ವಿದ್ಯಾರ್ಥಿ ಪ್ರತಿನಿಧಿಗಳಾದ ಅಭಿಲಾಷ್, ಶ್ರಾವ್ಯ, ಪ್ರೀತಿಕಾ ರೈ, ವಿಖ್ಯಾತ್ , ಉಪಸ್ಥಿತರಿದ್ದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News