ಪರಿಸರ ಸಮತೋಲನಕ್ಕಾಗಿ ಗಿಡಗಳ ಸಂರಕ್ಷಣೆ ಅನಿವಾರ್ಯ: ಆ್ಯಂಟೊನಿ ಮರಿಯಪ್ಪ

Update: 2024-06-05 07:17 GMT

ಮಂಗಳೂರು, ಜೂ.5: ಪರಿಸರ ಸಮತೋಲನಕ್ಕಾಗಿ ಗಿಡಗಳ ಸಂರಕ್ಷಣೆ ಅನಿವಾರ್ಯ ಎಂದು ದಕ್ಷಿಣ ಕನ್ನಡ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೊನಿ ಮರಿಯಪ್ಪ ತಿಳಿಸಿದ್ದಾರೆ.

ಲಾಲ್ ಭಾಗ್ ವನಿತಾ ಪಾರ್ಕ್ ನಲ್ಲಿಂದು ದಕ್ಷಿಣ ಕನ್ನಡ ಅರಣ್ಯ ಇಲಾಖೆ, ನೆಲ್ಲಿಗುಡ್ಡೆ ಪರಿಸರ ಅಧ್ಯಯನ ಕೇಂದ್ರ, ಬೆಸೆಂಟ್ ಯುವ ರೆಡ್ ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ವಿಶ್ವ ಪರಿಸರ ದಿನದ ಕಾರ್ಯಕ್ರಮದಲ್ಲಿ ಗಿಡಗಳ ಹುಟ್ಟುಹಬ್ಬವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸಕಲ ಜೀವಿಗಳಿಗೂ ಆಧಾರವಾದ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ರಾಜ್ಯದಲ್ಲಿ ಬೇಕಾಗಿರುವ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲು ಇಲಾಖೆಯ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆದರೆ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಸಂದರ್ಭದಲ್ಲಿ ಸಾಕಷ್ಟು ಗಿಡಮರಗಳ ನಾಶವಾಗುತ್ತವೆ. ಇದರ ಜೊತೆ ಜನರು ತಮ್ಮ ಜಮೀನುಗಳಲ್ಲಿ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ಪಾಲ್ಗೊಳ್ಳುತ್ತಿರುವುದು ಉತ್ತಮ ಕೆಲಸ. ಈ ನಿಟ್ಟಿನಲ್ಲಿ ಕಳೆದ ಬಾರಿ ನೆಟ್ಟ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಿ ಈ ಬಾರಿ ಹುಟ್ಟು ಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಆ್ಯಂಟೋನಿ ಮರಿಯಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಕಳೆದ ವರ್ಷ ನೆಟ್ಟ ಗಿಡಗಳಿಗೆ ಗೊಬ್ಬರ, ನೀರು ಹಾಕಿ ಗಿಡಗಳನ್ನು ಶೃಂಗರಿಸಿದ ಬೆಸೆಂಟ್ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಆರತಿ ಬೆಳಗಿ, ಬಂದವರಿಗೆ ಸಿಹಿ ಹಂಚಿ ಸಾಂಕೇತಿ ಕವಾಗಿ ಪ್ರಕೃತಿ ಯನ್ನು ಆರಾಧಿಸುವುದರೊಂದಿಗೆ ಪರಿಸರ ಸಂರಕ್ಷಣೆ ಯ ಸಂದೇಶ ನೀಡಿದರು.

ಸಮಾರಂಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ವಿಶ್ರಾಂತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ರೆಡ್ ಕ್ರಾಸ್ ದ.ಕ. ಜಿಲ್ಲಾ ಘಟಕದ ಕೋಶಾಧಿಕಾರಿ ಮೋಹನ್ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಬೆಸೆಂಟ್ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ದೀಕ್ಷಿತಾ, ನಿವೃತ್ತ ವಲಯ ಅರಣ್ಯಾಧಿಕಾರಿ ಪರಮೇಶ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯಕಾರಿ ಸಮಿತಿಯ ಸದಸ್ಯ ರಾಜೇಶ್ ದಡ್ಡಂಗಡಿ, ಮಂಗಳೂರು ನಾರ್ತ್ ರೋಟರ್ಯಾಕ್ಟ್ ಘಟಕದ ಕಾರ್ಯದರ್ಶಿ ವರುಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News