ಬಂಟ್ವಾಳ: ಕಾಂಗ್ರೆಸ್ ಮುಖಂಡ ರಾಜಶೇಖರ ನಾಯಕ್ ನಿಧನ

Update: 2024-06-13 14:26 GMT

ಬಂಟ್ವಾಳ : ಕಾಂಗ್ರೆಸ್ ಮುಖಂಡ ಸಜೀಪಮನ್ನೂರು ಗ್ರಾಮದ ಖಂಡಿಗ ನಿವಾಸಿ ರಾಜಶೇಖರನಾಯಕ್ ( 74) ಅವರು‌ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ‌ ಬುಧವಾರ ನಿಧನರಾಗಿದ್ದಾರೆ.

ಕೃಷಿಕರಾಗಿರುವ ಅವರು ಜಾತ್ಯಾತೀತ ಮನೋಭಾವದವರಾಗಿದ್ದು, ಆರಂಭಿಕವಾಗಿ ಜಾತ್ಯಾತೀತ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ರಾಜಕೀಯ ಬೆಳವಣಿಗೆಯೊಂದರಲ್ಲಿ ಜನತಾದಳವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು‌ ಸೇರ್ಪಡೆಗೊಂಡಿದ್ದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು ಅನಾರೋಗ್ಯದಿಂದಾಗಿ ಪಕ್ಷದ ಚಟುವಟಿಕೆಯಿಂದ ದೂರ ಇದ್ದರು.

ಸಜ್ಜನ ರಾಜಕಾರಣಿಯಾಗಿದ್ದ ಅವರು ಬಂಟ್ವಾಳ ಕೃಷಿಕ ಸಮಾಜದ ಚುನಾಯಿತ ಸದಸ್ಯರಾಗಿ, ಸಜೀಪ ಮೂಡ ಯುವಕ ಮಂಡಲದ ವತಿಯಿಂದ ನಡೆಯುವ ಶ್ರೀ ಶಾರದೋತ್ಸವ ಸಮಿತಿಯಲ್ಲಿ ಸಕ್ರಿಯರಾಗಿ, ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ , ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಮಾಜಿ ಸಚಿವ ಬಿ. ರಮಾನಾಥ ರೈ ಸಹಿತ ಹಲವು ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News