‘ಗೋಡೆ ಮೇಲಿನ ಚಿತ್ತಾರ ’ಕೃತಿ ಬಿಡುಗಡೆ
ಮಂಗಳೂರು, ಜು.10: ಸಾಹಿತ್ಯ ಕ್ಷೇತ್ರ ಗೊಂದಲಮಯವಾಗಿದೆ. ಎಡ ಬಲ ಪಂಥದಿಂದಾಗಿ ಸಾಹಿತ್ಯ ಕ್ಷೇತ್ರ ಸೊರಗು ತ್ತಿದೆ. ಪ್ರಾಮಾಣಿಕತೆಗಿಂತ ಪ್ರತಿಷ್ಠೆಯೇ ಮುಖ್ಯವಾಗುತ್ತಿದೆ. ಅರ್ಹತೆಗೆ ಪುರಸ್ಕಾರ ಸಿಗುವ ಬದಲು ಪಂಥದ ಮೇಲೆ ನಿರ್ಧರಿತವಾಗುತ್ತದೆ. ಇದರಿಂದಾಗಿ ಹೊಸ ಸಾಹಿತಿಗಳಲ್ಲಿ ಗೊಂದಲ ಮೂಡುತ್ತಿದೆ ಎಂದು ಬರಹಗಾರ್ತಿ ಡಾ.ಪಾರ್ವತಿ ಜಿ. ಹೇಳಿದ್ದಾರೆ.
ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ವತಿಯಿಂದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆದ ವೀಣಾ ಟಿ. ಶೆಟ್ಟಿಯವರ ‘ಗೋಡೆಯ ಮೇಲಿನ ಚಿತ್ತಾರ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಭಾವನೆ ಹಾಗೂ ಸಂವೇದನಶೀಲತೆಗೆ ‘ಗೋಡೆಯ ಮೇಲಿನ ಚಿತ್ತಾರ’ ವೇದಿಕೆಯಾಗಿದೆ. ನಿಜ ಜೀವನ ಹಾಗೂ ಪ್ರಕೃತಿ ಯೊಂದಿಗಿನ ಸಂಬಂಧ ತೆರೆದುಕೊಂಡಿದೆ. ಕೃತಿಯಲ್ಲಿ ಲೇಖಕಿಯ ವ್ಯಕ್ತಿತ್ವಕ್ಕೆ ಅಭಿವ್ಯಕ್ತಿ ಸಿಕ್ಕಿದೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಕಾರಣವಾಗಿದೆ. ಸರಳವಾದ ಲಲಿತವಾದ, ಶಕ್ತಿಯುತವಾದ ಲೇಖನಗಳಿದ್ದು, ಓದುಗರನ್ನು ಹಿಡಿದಿಟ್ಟು ಕೊಳ್ಳುತ್ತದೆ. ಇಂತಹ ಮತ್ತಷ್ಟು ಸಾಹಿತ್ಯ ಕೃಷಿಯ ಅಗತ್ಯವಿದೆ ಎಂದರು.
ಚಿಂತಕ ಡಾ. ಅರುಣ್ ಉಳ್ಳಾಲ್ ಅವರು ಕೃತಿ ಪರಿಚಯ ಮಾಡಿ ಮಾತನಾಡಿ, ಮುಖಪುಟದಲ್ಲೇ ಗೋಡೆಯ ಚಿತ್ತಾರ ಹೊಂದಿದ್ದು, ವಿವಿಧ ಆಯಾಮಗಳು, ಬದುಕಿನ ವಿವಿಧ ಚಿಂತನೆಗಳನ್ನು ಅನಾವರಣವಾಗಿದೆ. ಮುಖಪುಟವೇ ಪುಸ್ತಕಕ್ಕೆ ಜೀವ ತುಂಬಿದೆ ಎಂದರು.
ರಂಗಸಂಗಾತಿಯ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ವೀಣಾ ಟಿ. ಶೆಟ್ಟಿ ಪ್ರಾಸ್ತಾವಿಕ ಮಾತು ಗಳೊಂದಿಗೆ ಸ್ವಾಗತಿಸಿದರು. ತಾರಾನಾಥ ಶೆಟ್ಟಿ ಚೇಳಾರ್, ದಿವಾಕರ ಸಾಮಾನಿ ಚೇಳಾರ್ಗುತ್ತು ಉಪಸ್ಥಿತರಿದ್ದರು. ರಂಗಕರ್ಮಿ ಶಶಿರಾಜ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.